![]()
ದೂರದ ಗುಲ್ಬರ್ಗಾದ ಯಾವುದೋ ಹಳ್ಳಿಯಲ್ಲಿ ಉರಿಬಿಸಿಲು, ನಿರ್ದಯಿ ಬದುಕಿಗೆ ಹೆಗಲುಕೊಟ್ಟ ಒಂಟಿ ಮಹಿಳೆಯೊಬ್ಬಳು ಕಸುವಾದ ತೆನೆಯನ್ನೂ ಬಿಡಲಾಗದ ನಿಸ್ತೇಜ ಹೊಲದಲ್ಲಿ ದುಡಿಯುತ್ತಿದ್ದಾಗ, ಮೃಗೀಯ ಗಂಡಸೊಬ್ಬನಿಂದ ಅಚ್ಯಾಚಾರಕ್ಕೊಳಗಾದ ಸುದ್ದಿ ಬರುತ್ತದೆ. ಇಲ್ಲಿ, ಬೆಂಗಳೂರಿನ ಗಾಂಧಿ ಬಜಾರಿನ ಕಚೇರಿಯಲ್ಲಿ ಕೂಡ ‘ಅವ್ವ’ನಂಥ ಸಂಪಾದಕರ ಎದೆಯಲ್ಲಿ ಸಣ್ಣ ಚಳುಕು ಶುರುವಾಗುತ್ತದೆ, ಚಡಪಡಿಕೆ, ಎದುರಿಗೆ ಕೂತ ಪರಮಾಪ್ತರಿಗೂ ಬೈಗುಳ, ಏರುವ ಬಿಪಿ,… ಅಂತಃಕರಣದ ತಲ್ಲಣ…….
- ಇದು ನಮ್ಮ ಮತ್ತು ನಮಗಿಂತ ಹಿಂದಿನ ಒಂದು ತಲೆಮಾರಿಗೆ ಸಂವೇದನೆಯಿಂದ ಬದುಕನ್ನು ಕಾಣುವ ಬಗೆಯನ್ನು ಕಲಿಸಿಕೊಟ್ಟ ಲಂಕೇಶ್ ಮೇಸ್ಟ್ರು ತಮ್ಮ ಸುತ್ತಲಿನ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುತ್ತಿದ್ದ ಬಗೆ. ಈ ಘಟನೆಯನ್ನು ಹೇಳಿದವರು ಮೇಸ್ಟ್ರಿಗೆ ಆಪ್ತರಾಗಿದ್ದ ಕಥೆಗಾರ ತಿಪಟೂರಿನ ಎಸ್. ಗಂಗಾಧರಯ್ಯ. ಅಂತಹ ಸೂಕ್ಷ್ಮತೆಯನ್ನೂ, ಅಷ್ಟೇ ಕೋಪವನ್ನೂ ಹೊಂದಿದ್ದ ಲಂಕೇಶ್ ಅವರು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದೇ ಹುಟ್ಟಿದ್ದು ಎಂಬುದು ಎಷ್ಟು ಕಾಕತಾಳೀಯ ಅಲ್ಲವೇ?
ಬರೋಬ್ಬರಿ ಹತ್ತು ವರ್ಷ ಕಾಲ ಲಂಕೇಶ್ ಪತ್ರಿಕೆಯನ್ನು ಓದಿಕೊಂಡು ಬೆಳೆದವನು ನಾನು. ಹಾಗೇ ಭ್ರಷ್ಟ, ನಿರ್ಲಜ್ಜ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ದಾಸ್ಯ ಮತ್ತು ದೌರ್ಜನ್ಯಗಳ ಕೂಪವಾಗಿರುವ ವ್ಯವಸ್ಥೆಯ ವಿರುದ್ಧ ಸಿಟ್ಟು ಮತ್ತು ಕನಿಕರವನ್ನೂ ಕೂಡ ಅವರಿಂದ ಅಷ್ಟಿಷ್ಟಾದರೂ ಕಲಿತಿದ್ದೇನೆ ಎಂದುಕೊಂಡಿರುವೆ. ಹಾಗೆ ನೋಡಿದರೆ, ಈ ಮಾತು ಕನ್ನಡದಲ್ಲಿ ಸಂವೇದನಾಶೀಲರಾಗಿ ಬರೆಯುತ್ತಿರುವ ಮತ್ತು ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎರಡು- ಮೂರು ತಲೆಮಾರಿಗೇ ಅನ್ವಯಿಸುತ್ತದೆ.
ಈಗಲೂ, ಎಲ್ಲೋ ಬುಂದೇಲಖಂಡದಲ್ಲಿ ಹಸಿವಿನಿಂದ ಜೀವ ಬಿಡುವ ಮಣ್ಣಿನ ಮಕ್ಕಳು, ದೂರದ ಒರಿಸ್ಸಾದಲ್ಲೋ, ಬಿಹಾರದಲ್ಲೋ ನಡೆಯುವ ದೌರ್ಜನ್ಯದಿಂದ ಹಿಡಿದು, ಇಲ್ಲೇ ನಮ್ಮ ನಡುವೆಯೇ ನಿತ್ಯ ನಡೆಯುವ ಶೋಷಣೆ, ಅವಮಾನ, ದಬ್ಬಾಳಿಕೆಗಳನ್ನು ಕಂಡಾಗ ಮನಸ್ಸು ಮುದುಡಿಹೋಗುತ್ತದೆ. ನಿತ್ಯದ ಜಂಜಾಟಗಳ ನಡುವೆ, ಯಾಂತ್ರಿಕ ಬದುಕಿನಲ್ಲಿ ಮೂಲೆಗೆ ಸೇರಿದ್ದ ನಮ್ಮೊಳಗಿನ ಮಗು ರಚ್ಚೆ ಹಿಡಿದಂತೆ ಆಡತೊಡಗುತ್ತದೆ. ಕಣ್ಣಾಲಿಗಳ ತೇವವಾಗುತ್ತವೆ. ನಡುರಾತ್ರಿಯಲಿ ಬುಂದೇಲಖಂಡದ ಆ ವೃದ್ಧ ರೈತನ ಹಸಿವಿನ ನರಳುವಿಕೆ ದುತ್ತೆಂದು ಎದೆಮೇಲೆ ಕೂತು ಗುದ್ದಾಟಕ್ಕೆ ತೊಡಗುತ್ತದೆ….
ಇಂತಹ ಸೂಕ್ಷ್ಮತೆ ನಮ್ಮೊಳಗೆ ಮೂಡಿದ್ದಕ್ಕೆ ನನ್ನ ಕನ್ನಡದ ಎಲ್ಲ ಒಳ್ಳೆಯ ಮನಸ್ಸುಗಳ ಬರವಣಿಗೆ ಮತ್ತು ಕಾರ್ಯಗಳು ಎಂಬುದು ಒಂದು ತೂಕವಾದರೆ, ಲಂಕೇಶ್ ಅವರ ಬರವಣಿಗೆ ಮತ್ತೊಂದು ತೂಕಕ್ಕೆ ಸರಿದೂಗುತ್ತದೆ.
ಅಂತಹ ಅಪ್ಪಟ ‘ಹುಳಿ ಮಾವಿನ ಮರ’ದ ಒಗರು, ಮೋಹಕ ಸಿಹಿ, ಆಕರ್ಷಣೆ ಮತ್ತು ಹುಳಿಯ ಪಾಕದಂತಿರುವ ನೀಲು ಪದ್ಯಗಳು ನಮ್ಮನ್ನು ಮನುಷ್ಯನನ್ನು ಮುಖವಾಡಗಳಿಲ್ಲದೆ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ನಾನು ನಂಬಿದ್ದೇನೆ.
ಲಂಕೇಶರ ಹುಟ್ಟುಹಬ್ಬದ ಈ ದಿನ ಕೆಲವು ‘ನೀಲುಗಳು’ ನಿಮಗಾಗಿ… ಹಾಗೇ ಸುಮ್ಮನೇ ಆ ಕ್ಷಣಕ್ಕೆ ಕಣ್ಣಿಗೆ ಬಿದ್ದು ಖುಷಿ ಕೊಟ್ಟವು ಇವು…
* ಪೋಲಿ ಹೆಂಗಸರು ಏನೇ ಹೇಳಿದರೂ
ಪತಿವ್ರತೆಯ ನಿಷ್ಠೆ ಇದೆಯಲ್ಲ
ಅದರಲ್ಲಿ ಭೀಕರ ಅರ್ಥಗಳಿವೆ.
* ಪ್ರಖ್ಯಾತ ಮಹಾತ್ಮ ಕೂಡ
ಹೆಣ್ಣಿನ ಎದೆಯ ಮೇಲೆ
ಅಸಹಾಯಕ ಹಸುಗೂಸು
* ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ
ಉದುರಿಸಿತು.
* ನಾನು ನಿನ್ನನ್ನು ಪ್ರೀತಿಸುವೆ
ಎನ್ನುವಾಗಲೇ
ಅರ್ಧ ಪ್ರೇಮ ಸೋರಿಹೋಗುವುದು
ಮನುಷ್ಯನ
ಮಾತಿಗಿರುವ ಶಾಪ.
* ನನ್ನ ಇನಿಯನ ನಲ್ಲೆಯಾದ
ನಾನು
ಅವನ ತಾಯಿ ಕೂಡ
ಎಂಬುದು
ಅವನು ಒಪ್ಪದಿದ್ದರೂ ನಿಜ.
ವಾ! ಅಲ್ವಾ…? ಇವತ್ತಿಗೆ ಇಷ್ಟು ಸಾಕು,… ನೀಲುವಿನೊಂದಿಗೆ ಮೇಷ್ಟ್ರ ನೆನಪು ಮತ್ತು ಅವರ ವಿವೇಚನೆಯ ಎಚ್ಚರಿಕೆಯನ್ನು ಜತನಮಾಡಿಕೊಳ್ಳಲು ಪ್ರಯತ್ನಿಸೋಣ, ಎಲ್ಲ ಪ್ರಲೋಭನೆ, ಆಕ್ರಮಣಗಳ ನಡುವೆಯೂ! ನೀಲು ಮೌನವಾಗಿ ಎಂಟು ವರ್ಷಗಳ ಬಳಿಕ ಹೀಗೆ ಮೇಷ್ಟ್ರರನ್ನೂ, ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!
March 8, 2008 at 8:23 am
ಪ್ರಿಯ ಶಶಿ,
ನಮಸ್ಕಾರ. ಹೇಗಿದ್ದೀರಿ?
ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
March 8, 2008 at 11:27 am
ಥ್ಯಾಂಕ್ಸ್ ಸಾರ್…
ಲಂಕೇಶರನ್ನು ನೆನಪು ಮಾಡಿಕೊಟ್ಟಿದ್ದಕ್ಕೆ. ಅವರ ನಾಲ್ಕ ಒಳ್ಳೆಯ ನೀಲು ಸಾಲುಗಳನ್ನು ಓದಿಸಿದ್ದಕ್ಕೆ…
March 11, 2008 at 8:52 am
ನೀಲೂ ಸೂಪರ್……. ಅವಳನ್ನು ನೆನಪಿಸಿದ ನಿಮಗೆ thanxu…
March 11, 2008 at 10:34 am
ಪ್ರಿಯ ಶಶಿ ಸಂಪಳ್ಳಿಯವರೇ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಅಮರ
March 12, 2008 at 6:25 pm
ಸುಶೃತ, ಅಲೆಮಾರಿ, ಮಲ್ನಾಡ್, ಅಮರ…
ಎಲ್ಲರಿಗೂ ಥ್ಯಾಂಕ್ಸ್……………!