ಶೇಂಗಾ ರುಚಿ ಮತ್ತು ಅಭಿವೃದ್ಧಿ ಬೊಗಳೆ

May 23, 2008

ಅಂದಿಗೆ ಮನೆ ಬಿಟ್ಟು ಒಂಬತ್ತು ದಿನವಾಗಿತ್ತು. ಬೆಂಗಳೂರಿನ ಕೋರಮಂಗಲದಿಂದ ಮೇ 1ರಂದು ಆರಂಭವಾದ ನಮ್ಮ ಪಯಣ ಕಲ್ಪವೃಕ್ಷಗಳ ನಾಡು ತುಮಕೂರು, ನನ್ನೂರು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯ ಮಂಗಳೂರು, ಉಡುಪಿ, ಕಾರವಾರ, ಶಿರಸಿಗಳನ್ನು ಹಾದುಕೊಂಡು ಗಡಿನಾಡು ಬೆಳಗಾವಿಗೆ ಬಂದು ಮುಟ್ಟಿತ್ತು.

ಬೆಳಗಾವಿ ಚೇತೋಹಾರಿ ಹವಾ, ಅಲ್ಲಿನ ‘ಕುಂದಾ’ದಂತೆಯೇ ಹುಮ್ಮಸ್ಸು ತುಂಬಿತ್ತು. ಆ ವರೆಗೆ ಸುಮಾರು 2000 ಕಿ.ಮೀ. ದೂರವನ್ನು ಸುತ್ತಿದ್ದರೂ ಬೆಳಗಾವಿಯ ನೆಲಕ್ಕೆ ಸಂಜೆ ಏಳರ ಹೊತ್ತಿಗೆ ಕಾಲಿಡುತ್ತಲೇ ಹಾಯ್ ಎನಿಸುವಂತಿತ್ತು. ಮಲೆನಾಡಿನ ಬಿರುಬೇಸಿಗೆಯ ಧಗೆ, ಕಾಫಿ ನಾಡಿನ ಉರಿಬಿಸಿಲು, ಕರಾವಳಿಯ ಕಸಿವಿಸಿಯ ಶೆಕೆಗಳ ಬಳಿಕ ಶಿರಸಿಯಲ್ಲಿ ಎರಡು ದಿನ ತಂಗಿ, ಅಲ್ಲಿಂದಲೇ ಸುದ್ದಿಗಳನ್ನು ನೆಟ್ ಮೂಲಕ ಸಿಲಿಕಾನ್ ವ್ಯಾಲಿಗೆ ತೇಲಿಬಿಟ್ಟು ಮೈ ಕೊಡವಿ ಬೆಳಗಾವಿಯತ್ತ ಹೊರಟಾಗ ಈತನಕ ನಮ್ಮದೇ ಮನೆ, ಹಿತ್ತಿಲಲ್ಲೇ ಇದ್ದೆವು, ಇದೀಗ ಬಿಸಿಲ ನಾಡಿಗೆ ಹೋಗಬೇಕಲ್ಲ, ಅದೂ ಕನ್ನಡಿಗರೇ ಅಪರೂಪದ ಗಡಿಯಂಚಿಗೆ ಎಂಬ ಸಣ್ಣ ಅಳುಕು ಇದ್ದದ್ದು ಸಹಜ. ಅದೇ ಹೊತ್ತಿಗೆ ಗಡಿನಾಡ ಬದುಕನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕ ಖುಷಿ, ಕುತೂಹಲವೂ ಇತ್ತು. ಯಲ್ಲಾಪುರ, ಖಾನಾಪುರಗಳ ದಟ್ಟ ಕಾಡಿನ ನಡುವೆ ಸಂಜೆಯ ಹೊತ್ತಲ್ಲಿ, ವಾಹನ ದಟ್ಟಣೆಯಿಲ್ಲದ ಸುಂದರ ರಸ್ತೆಯಲ್ಲಿ ಸಾಗುವುದೇ ಒಂದು ಹಿತಾನುಭವ. ಖಾನಾಪುರ ಸಮೀಪಿಸುತ್ತಿದ್ದಂತೆ ಕಾಡು ಕರಗುತ್ತಾ ಬಯಲನಾಡಿನ ಇಷ್ಟಿಷ್ಟೇ ದರ್ಶನವಾಗತೊಡಗಿತು. ಬೆಳಗಾವಿ ತಲುಪುವ ಹೊತ್ತಿಗೆ ಏಳು ಗಂಟೆ! ಅದೂ ನಮ್ಮ ರವಿಯ ಅಮೋಘ ಕಾರುಚಾಲನೆಯಿಂದಾಗಿ ಆ ಪಯಣ ಇನ್ನಷ್ಟು ಹಿತವಾಗಿತ್ತು. ಹೋಗಿ ಬೆಳಗಾವಿಯ ಪತ್ರಕರ್ತ ಮಿತ್ರರನೇಕರಿಗೆ ಮೊದಲು ಫೋನಾಯಿಸಿ ಮಾತಾಡಿಸಿ ಬೆಳಿಗ್ಗೆ ಸಿಗುವುದೆಂದು ತೀರ್ಮಾನಿಸಿ, ಖಾನಾವಳಿಯನ್ನು ಅರಸಿ ಹೊರಟೆವು.

ಬೆಂಗಳೂರಿನಲ್ಲಿ ಮಸಾಲೆಭರಿತ ಊಟ- ತಿಂಡಿಗಳದ್ದೇ ಕಾರುಬಾರಿನಿಂದ ಬಿಡುಗಡೆ ಎಂದು ರುಚಿ-ರುಚಿಯಾಗಿದ್ದ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯದ ಭರ್ಜರಿ ಊಟ ಮಾಡಿ ಬಂದು ಮಲಗಿದರೆ ಬೆಳಗಾಗಿದ್ದು ಏಳು ಗಂಟೆಗೇ!

ಎದ್ದು ಗೆಳೆಯರನ್ನು ಭೇಟಿಯಾಗಿ, ತಿಂಡಿ ಮುಗಿಸಿ ನಮ್ಮ ಅಪರಿಚಿತ ದಾರಿಯ ಪಯಣಕ್ಕೆ ಆರಂಭ ನೀಡುವ ಹೊತ್ತಿಗೆ 10 ಗಂಟೆಯಾಗಿತ್ತು. ಅಲ್ಲಿಂದ ಹೋದದ್ದು ಯಮಕನಮರಡಿ ಎಂಬ ಊರಿಗೆ. ನಾನು ಆ ಊರಿನ ಹೆಸರನ್ನು ಮೊದಲ ಬಾರಿ ಕೇಳಿದಂದಿನಿಂದಲೂ ಅದೇನೋ ವಿಚಿತ್ರಹೆಸರು, ಊರು ಹೇಗಿರಬಹುದು ಎಂಬ ಕುತೂಹಲ ಹಾಗೇ ಇತ್ತು. ಬೆಳಗಾವಿ- ಪೂನಾ ಹೆದ್ದಾರಿಯಂಚಿನ ಈ ಊರು ವಿಧಾನಸಭಾ ಕ್ಷೇತ್ರದ ಕೇಂದ್ರವಾದರೂ ನಮ್ಮ ಕಡೆಯ ಚಿಕ್ಕ ಹೋಬಳಿ ಕೇಂದ್ರಕ್ಕಿಂತ ಚಿಕ್ಕದೇ. ಬಡತನವೇ ಮೈವೆತ್ತಿದಂತೆ ಕಾಣುವ ಊರಿನ ಜನರ ಹೃದಯ ಶ್ರೀಮಂತಿಕೆ ಮಾತ್ರ ದೊಡ್ಡದೇ! ಬೀದಿಯಂಚಿನ ಮರದ ನೆರಳಲ್ಲಿ ಚಪ್ಪಲಿ ರಿಪೇರಿ ಮಾಡಿಕೊಂಡಿದ್ದ ಮಲ್ಲಿಕಾರ್ಜುನನ ಬಳಿ ಹೋದವನೇ ಆತನ ಪಾಲಿಥಿನ್ ಹಾಸಿಗೆಯ ಮೇಲೆ ಕೂತು ಮಾತಿಗೆ ಆರಂಭಿಸಿದೆ. 20 ವರ್ಷದಿಂದ ಇಲ್ಲೇ ಈ ಕಾಯಕ ಮಾಡಿಕೊಂಡಿದ್ದೀನಿ. ಸರ್ಕಾರದ ಯಾವ ಯೋಜನೆಗಳಿಂದಲೂ ನನಗೆ ಬಿಡಿಗಾಸಿನ ಅನುಕೂಲವಾಗಿಲ್ಲ ಎಂದ ಆತನ ಮಾತಿನಲ್ಲಿ ವಂಚನೆ ಇಲ್ಲ ಎಂಬುದು ಅವನ ಸ್ಥಿತಿಯಿಂದಲೇ ಗೊತ್ತಾಗುತ್ತಿತ್ತು. ಆದರೂ, ಈ ಸಾರಿ ಓಟು ಹಾಕ್ತೀರಾ ಎಂದರೆ, ಅದಕ್ಕವರು, ಹೂನ್ರಿ ಸರ ನಮ್ಗೆ ಅನುಕೂಲವಾಗ್ಲಿ, ಇಲ್ದೆ ಇರ್ಲಿ, ಓಟು ಅಂತೂ ಹಾಕ್ಬೇಕಲ್ರಿ… ಎಂದರು! ಅಬ್ಬಾ ಜನಸಾಮಾನ್ಯರ ಸಾಕ್ಷಿಪ್ರಜ್ಞೆಯೇ… ಎನಿಸಿತು. ಒಳ್ಳೇದು ಬರ್ತೀನಿ ಎಂದು ಅಲ್ಲಿಂದ ಎದ್ದು ಹೊರಟಾಗಿ ಭಾರತದ ಪ್ರಜಾಪ್ರಭುತ್ವದ ಯಶಸ್ಸಿನ ಗುಟ್ಟು ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು.

ಅಲ್ಲಿಂದ ಸೀದಾ ಹುಕ್ಕೇರಿಗೆ ಹೋಗಿ, ಅಲ್ಲಿನ ಮೂವರು ಸಚಿವರ ನಡುವಿನ ಚುನಾವಣಾ ಜಿದ್ದಾಜಿದ್ದಿ ಬಗ್ಗೆ ಮಾಹಿತಿ ಪಡೆದು, ಮುಲ್ಲಾ ಖಾನಾವಳಿಯಲ್ಲಿ ಜೀವಮಾನದ ಶ್ರೇಷ್ಠ ಜೋಳದ ರೊಟ್ಟಿ ಊಟ ಹೊಡೆದು ಅದನ್ನೇ ನೆನೆಯುತ್ತಾ ಚಿಕ್ಕೋಡಿಯತ್ತ ಹೊರಟೆವು.

ಹುಕ್ಕೇರಿಯಿಂದ ಎಂಟು ಕಿಮೀ ದೂರದ ದಿಬ್ಬದ ತಿರುವನ್ನು ಏರುತ್ತಿದ್ದ ಕಾರನ್ನು ದಿಡೀರ್ ನಿಲ್ಲಿಸುವ ಮನಸ್ಸಾಯಿತು. ರವಿ ಕಾರ್ ನಲ್ಸಿ ಎಂದೆ. ಯಾವಾಗ್ಲೂ ಭೂಮಿ ಉಳುವವರು, ಕುರಿಗಾಯಿಗಳು, ನೀರು ಹೊತ್ತುಕೊಂಡು ಹೋಗುವ ಹೆಂಗಳೆಯರು, ಬುತ್ತಿಹೊತ್ತುಕೊಂಡು ಹೊಲದತ್ತ ಹೊರಟ ಮಕ್ಕಳು, ಹೊಲದಲ್ಲಿ ದುಡಿಯುತ್ತಿದ್ದ ರೈತ ಮಹಿಳೆಯರು ಕಾಣುತ್ತಲೇ ಕಾರು ನಿಲ್ಲಿಸು ಎನ್ನುತ್ತಿದ್ದ ನನ್ನನ್ನು ಅಷ್ಟೊತ್ತಿಗಾಗಲೇ ಅರ್ಥಮಾಡಿಕೊಂಡಿದ್ದ ರವಿ, ಕಾರು ನಿಲ್ಲಿಸುವ ಮೊದಲು ಅಂಥವರು ಯಾರಾದರೂ ಇದಾರ ಎಂದು ಸುತ್ತಲೂ ನೋಡತೊಡಗಿದರು. ನಾನು ರೀ,.. ಇಲ್ಲೇ ನಿಲ್ಸಿ… ಎಂದು ಮತ್ತೆ ಹೇಳಿದೆ. ಕಾರು ನಿಲ್ಲುತ್ತಲೇ ಇಳಿದು ಎದುರಿನ ಪುಟ್ಟ ಹುಲ್ಲಿನ ಜೋಪಡಿಯತ್ತ ಹೆಜ್ಜೆ ಹಾಕತೊಡಗಿದೆ. ಜೋಪಡಿಯ ಎದುರಿನ ಜಾಲಿ ಮರದಡಿ ಆ ಅಜ್ಜ ಕೂತಿದ್ದರು. ಅವರು ಸಾವಂತ್ ಅಜ್ಜ. 80 ವರ್ಷದ ಇಳಿಪ್ರಾಯದಲ್ಲೂ ಆಗ ತಾನೆ ಕೂರಿಗೆ ಹೊಡೆದು ಬಂದಿದ್ದರು. ಬಂದು ಊಟ ಮಾಡಿ ಮರದ ನೆರಳಲ್ಲಿ ಎಲೆಯಡಿಕೆ ಬಾಯಾಡುತ್ತ ಕುಳಿತಿದ್ದರು. ನನ್ನನ್ನು ನೋಡಿದವರೆ ಏನೂ ಅರ್ಥವಾಗದವರಂತೆ ನಕ್ಕರು. ನಮಸ್ಕಾರ್ರಿ,.. ಯಜಮಾನ್ರೆ ನಿಮ್ಮೂರಲ್ಲಿ ಯಾವ ಪಕ್ಷ ಜೋರೈತ್ರಿ… ಎಂದು ಅವರದೇ ಮಾತಿನಂತೆ ಕುಶಲೋಪರಿಗೆ ಆರಂಭಿಸಿದೆ. ಅಜ್ಜ ಯಾವ ಪಕ್ಷ,.. ಅಂತೀರಾ ಎಲ್ಲಾ ಐತ್ರಿ.. ಎಂದರು. ಹ್ಯಾಂಗ ನಿಮ್ ಕಡಿ ಕೆಲಸ- ಕಾರ್ಯ ಛಲೋ ಆಗೇವೇನ್ರಿ,.. ಎಂದಾಗ,.. ಆಗ್ಯಾವೇ.. ಆಗ್ಯಾವೇ… ನೋಡ್ರಿ… ಹಿಂಗಾ… ಕುಡಿಯೂ ನೀರಿಗೆ ಮೂರು ಮೈಲ ಹೋಗಬೇಕಾಗೈತಿ… ಅಂದ್ರ ಗೊತ್ತಾಗ್ತದಲ್ರಿ… ಎಂದರು!

ಹೌದು, ಅಜ್ಜನ ಮನೆಯೊಂದೇ ಅಲ್ಲ, ಎಲಿ ಮುನವಳ್ಳಿ ಎಂಬ ಆ ಊರಿನ ಸರಿಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರೊಂದೇ ಅಲ್ಲ, ದನಕರುಗಳಿಗೆ ಕೂಡ ಹನಿ ನೀರು ಬೇಕೆಂದರೆ ಕನಿಷ್ಠ 2 ಕಿ.ಮೀ. ಹೋಗಬೇಕು. ಅದೂ ಕೆಲವು ತೋಟದ ಬಾವಿಗಳ ಮಾಲೀಕರು ನೀರು ಕೊಟ್ಟರೆ, ಇಲ್ಲವಾದರೆ ನಾಲ್ಕು ಕಿ.ಮೀ. ದೂರದಿಂದ ನೀರು ತರಬೇಕು. ಅಜ್ಜನೊಂದಿಗೆ ಮಾತನಾಡಿ, ಅವರ ಕಷ್ಟ- ಸುಖ ಕೇಳಿದ ಮೇಲೆ, ಕಳೆದ ಐದು ವರ್ಷದಿಂದ 6 ಅಡಿ ಅಗಲ, 8 ಅಡಿ ಉದ್ದದ ಐದಡಿ ಎತ್ತರವೂ ಇಲ್ಲದ ಕಬ್ಬಿನ ರವುದೆಯ ಗುಡಿಸಲಿನಲ್ಲೇ ಕಾಲಕಳೆಯುತ್ತಿರುವುದಾಗಿಯೂ, ಹೆಂಡತಿ, ಮಗ, ಸೊಸೆಯ ತಮ್ಮ ಕುಟುಂಬಕ್ಕೆ ಹಸಿರು ಪಡಿತರ ಚೀಟಿ ಕೂಡ ಸಿಕ್ಕಿಲ್ಲ ಎಂಬುದೂ ಗೊತ್ತಾಯಿತು. ಅಂತಹ ಸ್ಥಿತಿಯಲ್ಲೂ ನಾವು ಬೆಂಗಳೂರಿನಿಂದ ಬಂದಿರೋದು ಎಂದು ಕೇಳಿ ಖುಷಿಪಟ್ಟ ಅಜ್ಜಿ- ಅಜ್ಜಿ ಮನೆ (ನಮಗೆ ಜೋಪಡಿ ಎನಿಸಿದರೂ ಅವರಿಗೆ ಅದುವೇ ಅರಮನೆ!) ಒಳಗೆ ಕರೆದು ಟೀ- ಕಾಫಿ ಕೊಡಲಾ ಎಂದರು! ಬೇಡ, ನಮ್ಮ ಪಯಣ ಬಾಳ ದೂರ ಸಾಗಬೇಕು. ಒಂದು ಲೋಟ ನೀರು ಕೊಡಿ ಸಾಕು ಎಂದರೂ ಕೇಳದೆ ಕೊನೆಗೆ ಅವರೇ ಬೆಳೆದಿದ್ದ ಶೇಂಗಾ (ಕಡಲೆಕಾಯಿ) ಮತ್ತು ಚೂರು ಬೆಲ್ಲ ಕೊಟ್ಟರು. ಅಲ್ಲೇ ಕೂತು ಅವರೊಂದಿಗಿನ ಮಾತಿನ ಸಿಹಿಯನ್ನೂ ಬೆರೆಸಿ ತಿಂದ ಶೇಂಗಾದ ರುಚಿ ಇನ್ನೂ ಆರಿಲ್ಲ… ಹಾಗೇ ನಮ್ಮ ರಾಜಕಾರಣಿಗಳ ಅಭಿವೃದ್ಧಿಯ ಬೊಗಳೆಗಳು ಮತ್ತು ವಾಸ್ತವದ ನೋವುಗಳ ವೈರುಧ್ಯ ತಂದ ತಳಮಳ ಕೂಡ ಹಾಗೇ ಇದೆ… ಈಗಲೂ…

(ಇದು ಚುನಾವಣಾ ಸಮೀಕ್ಷೆಯ ಪ್ರವಾಸದ ಒಂದು ಅನುಭವ. ಪುರುಸೊತ್ತಾದಾಗೆಲ್ಲಾ ಆ ಪಯಣದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ?)