ಹತ್ತು ವರ್ಷದ ಬಳಿಕ ಅವಳಿಗೆ

August 27, 2008

curtasy: art hit

 

 

 

 

 

 

 

 

 

 

 

 

ಸಿಗರೇಟು ಸೇದಿದೆ;

ನಿನಗೆ ಸುಳಿವು ಸಿಗದಿರಲೆಂದು

ಬಳಿಗೆ ಬರುವ ಮುನ್ನ

ಮಸಾಲೆ ದೋಸೆ ತಿಂದು ಬಂದೆ

ಬೆರಳಿಗೆ, ಉಸಿರಿಗೆ ಅಂಟಿದ

‘ಅನಿಷ್ಟ’ದ ಘಾಟು ಮಾಯ!

 

ವಿಸ್ಕಿ ಕುಡಿದೆ;

ನೀನು ಸಿಡುಕುತ್ತೀಯೆಂದು

ಬಾರಿನಲ್ಲೇ ಬೀಡಾ ಹಾಕಿ

ರಸಗವಳ ಮೆಲ್ಲುತ್ತಾ ಬಂದೆ

ತುಟಿಗೆ, ನಾಲಿಗೆಗೆ ಅಂಟಿದ

‘ಕೊಳಕಿನ’ ವಾಸನೆಯೇ ಇರಲಿಲ್ಲ!

 

ಮಾದಕ ರಸ್ತೆ ಅಲೆದೆ;

ಲೋವೇಸ್ಟ್ ಚಂಚಲೆಯರ

ಮೈಸವರಿದೆ ಕಣ್ಣಲ್ಲೇ

ರೆಪ್ಪೆಯುಜ್ಜಿಕೊಳ್ಳುತ್ತಾ ಬಂದೆ

ದೃಷ್ಟಿಗೆ ಅಂಟಿದ

‘ಭಂಡತನ’ದ ಕುರುಹೂ ಇರಲಿಲ್ಲ!

 

ಆದರೆ,

ಎಣ್ಣೆ ಹಚ್ಚಿ ಮಿಂದು ಬಂದ ನಿನ್ನ

ಹೆರಳಲ್ಲಿ ನಲಿದ ಬೆರಳಿಗೆ

ಅಂದು ಅಂಟಿದ ಗಂಧ,

ಹಸಿರ ಬನದ ನಡುವೆ ನಿನ್ನ

ಮೊದಲ ಮುತ್ತ ಸವಿದ ತುಟಿಗೆ

ಅಂದು ಅಂಟಿದ ಬಿಸಿ

ಓಡೋ ಬಸ್ಸಿನಲಿ ನಿನ್ನ

ನೋಟಕ್ಕೆ ಸಿಕ್ಕ ಕಣ್ಣಿಗೆ

ಅಂದು ಅಂಟಿದ ಕ್ಷಣ,…

 

ಎಲ್ಲ ಆರದೇ,

ಹಬ್ಬುತ್ತಲೇ ಇವೆ ಮೈಯೆಲ್ಲ

ಸಣ್ಣ ಉರಿಯಂತೆ.

 

(‘ಮಯೂರ’ದಲ್ಲಿ ಪ್ರಕಟಿತ ನನ್ನ ಇತ್ತೀಚಿನ ಒಂದು ಕವಿತೆ)


ಕೃಷ್ಣ ಪದ್ಯಗಳು…

August 16, 2008

1. ಶ್ರಾವಣ ಪ್ರೀತಿ

ಅವನೆಂದರೆ

ಮೋಹ,…

ಆಷಾಢದ ಕೆಣಕುಗಾಳಿ

ಹೊತ್ತು ತಂದ

ಹಠಮಾರಿ ಮಳೆ

ನಡುವೆ

ಹನಿ ಕಡಿಯದ ಶ್ರಾವಣ-

ಪ್ರೀತಿ!!

 

2. ಕೃಷ್ಣ ಮೋಹ

ಅವನ ಕಣ್ಣ ತುಂಬ

ಜೀವ ಪ್ರೀತಿಯ

ಪ್ರವಾಹ…

ಕೊಚ್ಚಿ ಹೋದವರೆಷ್ಟೋ!

 

ಯುಗ- ಯುಗಗಳು

ಗತಿಸಿದರೂ

ಆ ಮೋಹ ಬತ್ತಲಾರದ

ಗಂಗೆ!!

 

3. ನಿವೇದನೆ

ಅವಳೋ-

ವಸಂತನ ಪರಾಕಾಷ್ಠೆ;

ಮುಂಗಾರಿನ

ಮೊದಲ

ಮಳೆಯ

ಹುಡುಗಿ!

ನಾನೋ-

ಶರದೃತುವಿನ ಶರ:

ಮತ್ತೇರಿದ

ಮಳೆಯ

ಶ್ರಾವಣದ

ಹುಡುಗ!

 

ನಮ್ಮಿಬ್ಬರದು

ಭಾದ್ರಪದದ

ಬಿಸಿಲು- ಮಳೆ

ಕಣ್ಣಾಮುಚ್ಚಾಲೆಯ

ಪ್ರೀತಿ!!


ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..

August 2, 2008
ಸಮೀಕ್ಷೆಯ ದಾರಿಯಲ್ಲಿ...

ಸಮೀಕ್ಷೆಯ ದಾರಿಯಲ್ಲಿ...

 

ಆ ಊರಿನಲ್ಲಿ ಅವತ್ತು ಚುನಾವಣಾ ಪ್ರಚಾರ ಸಭೆ ನಡೆಯುವುದಿತ್ತು. ಗಣಿ ದಣಿಯೊಬ್ಬರು ಎಂಎಲ್ಎ ಯಾಗಿ ಹೋಗಲು ಆ ಊರನ್ನೇ ಆಯ್ಕೆಮಾಡಿಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಇಡೀ ಊರಿನ ತುಂಬ ವಿಚಿತ್ರ ಹುಮ್ಮಸ್ಸು ಕಾಣುತ್ತಿತ್ತು. ಚುನಾವಣಾ ಸಮೀಕ್ಷೆಗೆ ಹೋದ ನಾವು, ಸಹಜವಾಗಿ ರಸ್ತೆ, ಹೋಟೆಲ್, ಬೀಡಾ ಅಂಗಡಿ, ರೈತರು, ಕೂಲಿಕಾರ್ಮಿಕರನ್ನು ಮಾತನಾಡಿಸತೊಡಗಿದೆವು.

ಈ ಸಾರಿ ಬಿಡ್ರಿ ಸರ, ದುಡ್ಡು ಚೆಲ್ಲಾಡತೈತಿ,.. ಇನ್ನೂ ಚುನಾವಣಿ ಏಳೆಂಟು ದಿನ ಐತ್ರಿ, ಈಗಲೇ ಅವರು ಕರ್ಚು ಮಾಡಿದ್ದು ಏನಿಲ್ಲಂದ್ರೂ 20 ಕೋಟಿ ಮೀರಿರಬೈದ್ರಿ.. ಅಂದ ಬಾರ್ ಒಂದರ ಎದುರಿನ ಬೀಡಾ ಅಂಗಡಿಯಾತ. ಹೇಳಿಕೇಳಿ ಬಾರ್ ಎದುರಿನ ಬೀಡಾ ಅಂಗಡಿ ಎಂದರೆ ಅದು ಎಲ್ಲಾ ಸತ್ಯಗಳಿಗೆ ತುಸು ಹತ್ತಿರದ ಮೂಕಸಾಕ್ಷಿ! ಇರಬಹುದು ಎಂದುಕೊಂಡು ಮುಂದುವರಿದೆವು.

ಬಸ್ ನಿಲ್ದಾಣದಲ್ಲಿ ಹಳ್ಳಿಗೆ ಹೋಗಲು ಬಸ್ಸಿಗಾಗಿ ಕಾದು ನಿಂತಿದ್ದ ರೈತನೊಂದಿಗೆ ಮಳೆ- ಬೆಳಿ ವಿಚಾರ ಮಾತಾಡುತ್ತಾ, ನಮ್ಮ ದಾರಿಗೆ ಎಳೆದುಕೊಂಡೆವು. ಚುನಾವಣೆ ಬಿಗಿ ಐತ್ರಿ, ನನ್ ಜನ್ಮದಾಗೇ ಇಷ್ಟೊಂದು ದುಡ್ಡು, ಭರಾಟೆ ಕಂಡಿದ್ದಿಲ್ರಿ ಎಂದರು ಯಜಮಾನರು. ಸರಿ, ಏನಕ್ಕೆ ಕರ್ಚು ಮಾಡ್ತಾರ್ರಿ, ಆಯೋಗ ಈ ಬ್ಯಾನರು, ಕಟೌಟ್ ಹಾಕೋಂಗಿಲ್ಲ ಅಂದೈತಲ್ರಿ ಎಂದು ಹಣ ಹರಿಯುವ ದಾರಿಗಳ ಶೋಧನೆಗೆ ಚಾಲನೆ ಕೊಟ್ಟೆವು (ಮೊದಲೇ ಗೊತ್ತಿದ್ದರೂ ಕುತೂಹಲಕ್ಕಾಗಿ). ಆಗ ಅವರು, ಅಯ್ಯೋ ಆಯೋಗ ಮಾಡಿದ್ದು ಅಲ್ಲೇ ಇರ್ತೈತೆ, ಇವರು ಮಾಡೋದು ಮಾಡ್ತಾರ್ರಿ,.. ಮೊನ್ನೆ ನೋಡ್ರಿ ನಾಮಪತ್ರ ಹಾಕೋ ಸಭೆ ಮಾಡಿದ್ರಲ್ಲ ಆವಾಗ ಕನಿಷ್ಠ ಅಂದ್ರೂ 60 ಟ್ರ್ಯಾಕ್ಟರ್ ಜನ ಬಂದಿದ್ರಿ, ಒಂದೊಂದು ಟ್ರ್ಯಾಕ್ಟರಿಗೆ 10-12 ಸಾವಿರ ಕೊಟ್ಟಾರಿ, ಹಂಗೇ ಜೀಪು, ಕಾರು, ಬಸ್ ಬ್ಯಾರೆ ಲೆಕ್ಕಾರಿ, ಮತ್ತೆ ಹಳ್ಳಿಗಳಿಗೆ ಎಲ್ಲಾ ಮಹಿಳಾ ಸಂಘ, ಹುಡುಗರ ಸಂಘಗೊಳಿಗೆಲ್ಲಾ ತಲಾ ಒಂದೊಂದು ಲಕ್ಷ ಕೊಡ್ತೀವಿ ಅಂದಾರ್ರಿ,.. ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರಿಗೆಲ್ಲಾ 10 ಸಾವಿರ ರೂಪಾಯಿ ಸ್ವಂತಕ್ಕೆ ಅಂತ ಕೊಟ್ಟಾರ್ರಿ… ಎಂದರು.

ಅವರ ಮಾತನ್ನ ಕೇಳಿ ನಗುಬಂತು. ನಾವಿದ್ದ ಸ್ಥಿತಿಯಲ್ಲಿ ನಗುವಲ್ಲದೆ ಇನ್ನೇನೂ ವ್ಯಕ್ತಪಡಿಸುವ ಸ್ಥಿತಿ ಇರಲಿಲ್ಲ!

ಮೂರು ವರ್ಷಗಳ ಹಿಂದೇ ಇದೇ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ವಾರಪತ್ರಿಕೆಯೊಂದಕ್ಕೆ ಲೇಖನ ಮಾಡುತ್ತಾ, ಮೌನಕ್ರಾಂತಿ ಎಂದು ಬಣ್ಣಿಸಿದ್ದೆವು. ಇದೀಗ ಅದೇ ಸಂಘಗಳೇ ಕಳೆದ ಚುನಾವಣೆಯಲ್ಲಿ ಸಾಕಷ್ಟು ಫಲಾನುಭವಿಗಳಾಗಿ ಹೊರಹೊಮ್ಮಿವೆ. ಯಾವ ಸಂಘಗಳು ಮಹಿಳಾ ಸ್ವಾವಲಂಬನೆಯ ವೇದಿಕೆಗಳಾಗಬೇಕಿತ್ತೋ ಅವೇ ಇಂದು ಕೇವಲ ಹಣದ ಆಮಿಷಕ್ಕೆ ಬಿದ್ದು ರಾಜಕೀಯ ಪ್ರಬುದ್ಧತೆ, ಸ್ವಾತಂತ್ರ್ಯವನ್ನು ಹರಾಜಿಗಿಟ್ಟಿವೆ. ಈ ಸಂಘಗಳು ಗ್ರಾಮೀಣ ಮಹಿಳೆಯರಿಗೆ ಒಂದಿಷ್ಟು ವ್ಯವಹಾರಿಕ ಜಾಣ್ಮೆಯನ್ನು ಕಲಿಸಿವೆ, ಕೆಲಮಟ್ಟಿಗೆ (ಕೆಲವಾದರೂ) ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಿವೆ ಎಂಬುದು ನಿಜವಾದರೂ, ರಾಜಕೀಯ ಪಕ್ಷಗಳ ನೈತಿಕ ದಿವಾಳಿತನದ ಪ್ರತೀಕವಾಗಿ ಈ ಸಂಘಗಳೂ ಕೂಡ ಅವರ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಎಂಬುದಕ್ಕೆ ಕಳೆದ ಚುನಾವಣೆ ನಿದರ್ಶನವಾಯಿತು. ಮೊನ್ನೆ ಸದನದಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದೆ. ಆದರೆ, ನಮ್ಮ ಶಾಸಕರುಗಳೇ ದುಡ್ಡು ಕೊಟ್ಟು ಸುಸ್ತಾಗಿದ್ದೇವೆ ಎಂದು ಅಲವತ್ತುಕೊಂಡಿರುವುದು ವಿಪರ್ಯಾಸ. ಬಹುಷಃ ಗೆದ್ದವರು ಯಾರೂ ಅದನ್ನು ಹೇಳಿಲ್ಲ!

ಗ್ರಾಮೀಣ ಮಹಿಳೆಯ ಸಂಘಟನೆಯೊಂದು (ಆರಂಭದಲ್ಲೇ ಸಾರಾಯಿ ಮತ್ತು ಮದ್ಯದ ಲಾಬಿಗಳ ಕೈಗೊಂಬೆಗಳಾಗಿ ದಿಕ್ಕುತಪ್ಪಿದ್ದವು ಎಂಬ ಮಾತು ಬೇರೆ) ಹೇಗೆ ರಾಜಕೀಯ ದಾಳವಾಗಿ ಬದಲಾಗುತ್ತದೆ ಎಂಬುದಕ್ಕೆ ನಿದರ್ಶನವಾದಂತೆಯೇ ಈ ಬೆಳವಣಿಗೆ ರಾಜಕೀಯ ಪಕ್ಷಗಳು ಹೇಗೆ ಎಂತಹ ಸಂಘಟನೆಯನ್ನೂ ಹಣಬಲದ ಮೇಲೆ ತಮ್ಮ ಹಿಡಿತಕ್ಕೂ ತೆಗೆದುಕೊಳ್ಳುತ್ತವೆ ಎಂಬುದಕ್ಕೂ ಉದಾಹರಣೆಯಲ್ಲವೇ?

ಹೀಗೆ ಏನೇನೋ ಯೋಚಿಸುತ್ತಿರುವಾಗಲೇ, ಚುನಾವಣಾ ಸಭೆಗಳಲ್ಲಿ ಯೂನಿಫಾರ್ಮನಂತೆ ಒಂದೇ ಬಗೆಯ ಸೀರೆಯುಟ್ಟು ಮುಂದಿನ ಸಾಲುಗಳಲ್ಲಿ ಕೂರುತ್ತಿದ್ದ ನೂರಾರು ಹೆಣ್ಣುಮಕ್ಕಳ ಚಿತ್ರ ನೆನಪಿಗೆ ಬರುತ್ತಿದೆ…. ಹಾಗೇ ಆ ರೈತ ಹೇಳಿದ ಸಂಘಗಳಿಗೆ ಗಣಿ ದಣಿ ನೀಡಿದ ದೇಣಿಗೆ ಕೂಡ…!