ಸಿಗರೇಟು ಸೇದಿದೆ;
ನಿನಗೆ ಸುಳಿವು ಸಿಗದಿರಲೆಂದು
ಬಳಿಗೆ ಬರುವ ಮುನ್ನ
ಮಸಾಲೆ ದೋಸೆ ತಿಂದು ಬಂದೆ
ಬೆರಳಿಗೆ, ಉಸಿರಿಗೆ ಅಂಟಿದ
‘ಅನಿಷ್ಟ’ದ ಘಾಟು ಮಾಯ!
ವಿಸ್ಕಿ ಕುಡಿದೆ;
ನೀನು ಸಿಡುಕುತ್ತೀಯೆಂದು
ಬಾರಿನಲ್ಲೇ ಬೀಡಾ ಹಾಕಿ
ರಸಗವಳ ಮೆಲ್ಲುತ್ತಾ ಬಂದೆ
ತುಟಿಗೆ, ನಾಲಿಗೆಗೆ ಅಂಟಿದ
‘ಕೊಳಕಿನ’ ವಾಸನೆಯೇ ಇರಲಿಲ್ಲ!
ಮಾದಕ ರಸ್ತೆ ಅಲೆದೆ;
ಲೋವೇಸ್ಟ್ ಚಂಚಲೆಯರ
ಮೈಸವರಿದೆ ಕಣ್ಣಲ್ಲೇ
ರೆಪ್ಪೆಯುಜ್ಜಿಕೊಳ್ಳುತ್ತಾ ಬಂದೆ
ದೃಷ್ಟಿಗೆ ಅಂಟಿದ
‘ಭಂಡತನ’ದ ಕುರುಹೂ ಇರಲಿಲ್ಲ!
ಆದರೆ,
ಎಣ್ಣೆ ಹಚ್ಚಿ ಮಿಂದು ಬಂದ ನಿನ್ನ
ಹೆರಳಲ್ಲಿ ನಲಿದ ಬೆರಳಿಗೆ
ಅಂದು ಅಂಟಿದ ಗಂಧ,
ಹಸಿರ ಬನದ ನಡುವೆ ನಿನ್ನ
ಮೊದಲ ಮುತ್ತ ಸವಿದ ತುಟಿಗೆ
ಅಂದು ಅಂಟಿದ ಬಿಸಿ
ಓಡೋ ಬಸ್ಸಿನಲಿ ನಿನ್ನ
ನೋಟಕ್ಕೆ ಸಿಕ್ಕ ಕಣ್ಣಿಗೆ
ಅಂದು ಅಂಟಿದ ಕ್ಷಣ,…
ಎಲ್ಲ ಆರದೇ,
ಹಬ್ಬುತ್ತಲೇ ಇವೆ ಮೈಯೆಲ್ಲ
ಸಣ್ಣ ಉರಿಯಂತೆ.
(‘ಮಯೂರ’ದಲ್ಲಿ ಪ್ರಕಟಿತ ನನ್ನ ಇತ್ತೀಚಿನ ಒಂದು ಕವಿತೆ)

Posted by shashi sampalli