ಕೃಷ್ಣ-ಚಂದ್ರ!
ಯಾರೋ ಹೇಳಿದರು;
ಮೊನ್ನೆ ನೀಲಿಚಂದ್ರ ಬಂದಿದ್ದನಂತೆ…
ಚಂದ್ರನಿಗೂ- ಕೃಷ್ಣನಿಗೂ
ಹೀಗೂ ಉಂಟೆ ಬಂಧ!?
ಕೃಷ್ಣನಿಲ್ಲದೆ ಪ್ರೀತಿ ಇಲ್ಲ…
ಚಂದ್ರನಿಲ್ಲದೆ ಅಂದವಿಲ್ಲ..
ಎಂದಾದ ಮೇಲೆ
ಕೃಷ್ಣ-ಚಂದ್ರರ ಸ್ನೇಹ ಹೊಸದಲ್ಲವಲ್ಲ..!
ಎನಿಸಿ ವೃಥಾ ಹೋಲಿಕೆಯ ಕಸರತ್ತು ವ್ಯರ್ಥವೆಂದುಕೊಂಡು ಸುಮ್ಮನಾದೆ!!
………
ಜಲದ ಆಲಯದೊಳಗೆ
ಹರಿವ ನೀರಿಗೆ ಮೈಯೆಲ್ಲಾ ಕಾಲು…
ಅಲ್ಲಮನ ಮಾತು ಮನದಲ್ಲಿ ಕೂತು;
ತೇಲುವ ಮೀನಿಗೂ ಮೈಯೆಲ್ಲಾ ಕಾಲೇ
ಅಲ್ಲವೇ ಎನಿಸಿತು…
ಜಂಗಮದ ಜಲದೊಳಗೆ
ಸ್ಥಾವರ ಯಾವುದು?
ಕಲ್ಲಂಥ ಕಲ್ಲೂ ದಿನಗಳೆದಂತೆ ಜಂಗಮವೇ!
ಆಲಯಜಲದ ಬಯಲೊಳಗೆ
ಬಂಧಿ ಯಾರು?
ಮುಕ್ತರಾರು?
ಎಂಬುದು ಮೀನಿಗೇಕೆ..
ನೀರಿಗೂ ಒಗಟೇ!
………..

