Feed on
Posts
Comments

ಹಲೋ ಫ್ರೆಂಡ್ಸ್…

 

ಬಹಳ ದಿನಗಳಿಂದ ಏನನ್ನೂ ಬರೆಯಲಾಗಿಲ್ಲ. ಅದಕ್ಕೆ ಕಾರಣ ಸೋಮಾರಿತನವಂತೂ ಖಂಡಿತಾ ಅಲ್ಲ. ಪತ್ರಕರ್ತನೆಂಬ ಭೂಮಿ ಮೇಲಿನ ವಿಚಿತ್ರ ವೃತ್ತಿಯ ನನಗೆ ಈಗ ಯಾಕೆ ಬರೆಯಲಾಗಿಲ್ಲ ಎಂಬುದಕ್ಕೆ ಈ ಅಕಾಲಿಕ ಚುನಾವಣೆಯಿಂದ ಹಿಡಿದು, ಮತದಾರನ ಹೊಣೆಗೇಡಿತನದ ವರೆಗೆ ಯಾರನ್ನು ಬೇಕಾದರೂ ದೂಷಿಸಬಹುದು. ಹಾಗೇ ರಾಜಕೀಯ ಪಕ್ಷಗಳ ದಿಗ್ಗಜರನ್ನೂ.. ಆದರೆ, ಹಾಗೆ ಮಾಡುವುದು ತರವಲ್ಲ. ಆದ್ದರಿಂದ ಚುನಾವಣೆ ನನ್ನ ಸಮಯವನ್ನೆಲ್ಲಾ ಅರೆದು ಕುಡಿಯುತ್ತಿದೆ. ಹಾಗಾಗಿ ಬರೆಯಲು ಆಗುತ್ತಿಲ್ಲ ಎಂದಷ್ಟೇ ಹೇಳುವುದು ಸರಳ ಮತ್ತು ಸುರಕ್ಷಿತ! ಈ ಚುನಾವಣೆ ಮುಗಿದು, ಮತ ಎಣಿಕೆ ಆಗಿ, ಒಂದು ಜನಪ್ರತಿನಿಧಿಗಳ ಸರ್ಕಾರ ಎಂಬುದು (ಎಷ್ಟೇ ಕುಲಗೆಟ್ಟಿದ್ದರೂ!) ಬರೋವರೆಗೂ ಪುರುಸೊತ್ತಿಲ್ಲ! ಹಾಗಾಗಿ ಮುಂದಿನ ಒಂದೂವರೆ ತಿಂಗಳು ನನ್ನ ಬ್ಗಾಗ್ ಗೆ ರಜೆ! ಈ ನಡುವೆ ನನ್ನ ಬರವಣಿಗೆ ಏನಿದ್ದರೂ ರಾಜಕೀಯದ ಸುತ್ತ ಗಿರಕಿ ಹೊಡೆಯಲಿದೆ(ಆಸಕ್ತಿ ಇದ್ದರೆ, www.thesundayindian.com/kannada ಇಲ್ಲಿಗೆ ಇಣುಕಬಹುದು). ಹಾಗಾಗಿ ಅಲ್ಲೀವರೆಗೆ ಟಾಟಾ…!

 

 lankesh.jpg

ದೂರದ ಗುಲ್ಬರ್ಗಾದ ಯಾವುದೋ ಹಳ್ಳಿಯಲ್ಲಿ ಉರಿಬಿಸಿಲು, ನಿರ್ದಯಿ ಬದುಕಿಗೆ ಹೆಗಲುಕೊಟ್ಟ ಒಂಟಿ ಮಹಿಳೆಯೊಬ್ಬಳು ಕಸುವಾದ ತೆನೆಯನ್ನೂ ಬಿಡಲಾಗದ ನಿಸ್ತೇಜ ಹೊಲದಲ್ಲಿ ದುಡಿಯುತ್ತಿದ್ದಾಗ, ಮೃಗೀಯ ಗಂಡಸೊಬ್ಬನಿಂದ ಅಚ್ಯಾಚಾರಕ್ಕೊಳಗಾದ ಸುದ್ದಿ ಬರುತ್ತದೆ. ಇಲ್ಲಿ, ಬೆಂಗಳೂರಿನ ಗಾಂಧಿ ಬಜಾರಿನ ಕಚೇರಿಯಲ್ಲಿ ಕೂಡ ‘ಅವ್ವ’ನಂಥ ಸಂಪಾದಕರ ಎದೆಯಲ್ಲಿ ಸಣ್ಣ ಚಳುಕು ಶುರುವಾಗುತ್ತದೆ, ಚಡಪಡಿಕೆ, ಎದುರಿಗೆ ಕೂತ ಪರಮಾಪ್ತರಿಗೂ ಬೈಗುಳ, ಏರುವ ಬಿಪಿ,… ಅಂತಃಕರಣದ ತಲ್ಲಣ…….

- ಇದು ನಮ್ಮ ಮತ್ತು ನಮಗಿಂತ ಹಿಂದಿನ ಒಂದು ತಲೆಮಾರಿಗೆ ಸಂವೇದನೆಯಿಂದ ಬದುಕನ್ನು ಕಾಣುವ ಬಗೆಯನ್ನು ಕಲಿಸಿಕೊಟ್ಟ ಲಂಕೇಶ್ ಮೇಸ್ಟ್ರು ತಮ್ಮ ಸುತ್ತಲಿನ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುತ್ತಿದ್ದ ಬಗೆ. ಈ ಘಟನೆಯನ್ನು ಹೇಳಿದವರು ಮೇಸ್ಟ್ರಿಗೆ ಆಪ್ತರಾಗಿದ್ದ ಕಥೆಗಾರ ತಿಪಟೂರಿನ ಎಸ್. ಗಂಗಾಧರಯ್ಯ. ಅಂತಹ ಸೂಕ್ಷ್ಮತೆಯನ್ನೂ, ಅಷ್ಟೇ ಕೋಪವನ್ನೂ ಹೊಂದಿದ್ದ ಲಂಕೇಶ್ ಅವರು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದೇ ಹುಟ್ಟಿದ್ದು ಎಂಬುದು ಎಷ್ಟು ಕಾಕತಾಳೀಯ ಅಲ್ಲವೇ?

ಬರೋಬ್ಬರಿ ಹತ್ತು ವರ್ಷ ಕಾಲ ಲಂಕೇಶ್ ಪತ್ರಿಕೆಯನ್ನು ಓದಿಕೊಂಡು ಬೆಳೆದವನು ನಾನು. ಹಾಗೇ ಭ್ರಷ್ಟ, ನಿರ್ಲಜ್ಜ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ದಾಸ್ಯ ಮತ್ತು ದೌರ್ಜನ್ಯಗಳ ಕೂಪವಾಗಿರುವ ವ್ಯವಸ್ಥೆಯ ವಿರುದ್ಧ ಸಿಟ್ಟು ಮತ್ತು ಕನಿಕರವನ್ನೂ ಕೂಡ ಅವರಿಂದ ಅಷ್ಟಿಷ್ಟಾದರೂ ಕಲಿತಿದ್ದೇನೆ ಎಂದುಕೊಂಡಿರುವೆ. ಹಾಗೆ ನೋಡಿದರೆ, ಈ ಮಾತು ಕನ್ನಡದಲ್ಲಿ ಸಂವೇದನಾಶೀಲರಾಗಿ ಬರೆಯುತ್ತಿರುವ ಮತ್ತು ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎರಡು- ಮೂರು ತಲೆಮಾರಿಗೇ ಅನ್ವಯಿಸುತ್ತದೆ.

ಈಗಲೂ, ಎಲ್ಲೋ ಬುಂದೇಲಖಂಡದಲ್ಲಿ ಹಸಿವಿನಿಂದ ಜೀವ ಬಿಡುವ ಮಣ್ಣಿನ ಮಕ್ಕಳು, ದೂರದ ಒರಿಸ್ಸಾದಲ್ಲೋ, ಬಿಹಾರದಲ್ಲೋ ನಡೆಯುವ ದೌರ್ಜನ್ಯದಿಂದ ಹಿಡಿದು, ಇಲ್ಲೇ ನಮ್ಮ ನಡುವೆಯೇ ನಿತ್ಯ ನಡೆಯುವ ಶೋಷಣೆ, ಅವಮಾನ, ದಬ್ಬಾಳಿಕೆಗಳನ್ನು ಕಂಡಾಗ ಮನಸ್ಸು ಮುದುಡಿಹೋಗುತ್ತದೆ. ನಿತ್ಯದ ಜಂಜಾಟಗಳ ನಡುವೆ, ಯಾಂತ್ರಿಕ ಬದುಕಿನಲ್ಲಿ ಮೂಲೆಗೆ ಸೇರಿದ್ದ ನಮ್ಮೊಳಗಿನ ಮಗು ರಚ್ಚೆ ಹಿಡಿದಂತೆ ಆಡತೊಡಗುತ್ತದೆ. ಕಣ್ಣಾಲಿಗಳ ತೇವವಾಗುತ್ತವೆ. ನಡುರಾತ್ರಿಯಲಿ ಬುಂದೇಲಖಂಡದ ಆ ವೃದ್ಧ ರೈತನ ಹಸಿವಿನ ನರಳುವಿಕೆ ದುತ್ತೆಂದು ಎದೆಮೇಲೆ ಕೂತು ಗುದ್ದಾಟಕ್ಕೆ ತೊಡಗುತ್ತದೆ….

ಇಂತಹ ಸೂಕ್ಷ್ಮತೆ ನಮ್ಮೊಳಗೆ ಮೂಡಿದ್ದಕ್ಕೆ ನನ್ನ ಕನ್ನಡದ ಎಲ್ಲ ಒಳ್ಳೆಯ ಮನಸ್ಸುಗಳ ಬರವಣಿಗೆ ಮತ್ತು ಕಾರ್ಯಗಳು ಎಂಬುದು ಒಂದು ತೂಕವಾದರೆ, ಲಂಕೇಶ್ ಅವರ ಬರವಣಿಗೆ ಮತ್ತೊಂದು ತೂಕಕ್ಕೆ ಸರಿದೂಗುತ್ತದೆ.

ಅಂತಹ ಅಪ್ಪಟ ‘ಹುಳಿ ಮಾವಿನ ಮರ’ದ ಒಗರು, ಮೋಹಕ ಸಿಹಿ, ಆಕರ್ಷಣೆ ಮತ್ತು ಹುಳಿಯ ಪಾಕದಂತಿರುವ ನೀಲು ಪದ್ಯಗಳು ನಮ್ಮನ್ನು ಮನುಷ್ಯನನ್ನು ಮುಖವಾಡಗಳಿಲ್ಲದೆ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ನಾನು ನಂಬಿದ್ದೇನೆ.

ಲಂಕೇಶರ ಹುಟ್ಟುಹಬ್ಬದ ಈ ದಿನ ಕೆಲವು ‘ನೀಲುಗಳು’ ನಿಮಗಾಗಿ… ಹಾಗೇ ಸುಮ್ಮನೇ ಆ ಕ್ಷಣಕ್ಕೆ ಕಣ್ಣಿಗೆ ಬಿದ್ದು ಖುಷಿ ಕೊಟ್ಟವು ಇವು…

* ಪೋಲಿ ಹೆಂಗಸರು ಏನೇ ಹೇಳಿದರೂ

   ಪತಿವ್ರತೆಯ ನಿಷ್ಠೆ ಇದೆಯಲ್ಲ

   ಅದರಲ್ಲಿ ಭೀಕರ ಅರ್ಥಗಳಿವೆ.

* ಪ್ರಖ್ಯಾತ ಮಹಾತ್ಮ ಕೂಡ

   ಹೆಣ್ಣಿನ ಎದೆಯ ಮೇಲೆ

   ಅಸಹಾಯಕ ಹಸುಗೂಸು

* ಕಗ್ಗಾಡಿನ ಬೇಡರ ಮೋನಿ

  ತೀರಿಕೊಂಡಾಗ

  ಪತ್ರಿಕೆಗಳ ವಿಷಾದಕ್ಕೆ ಬದಲು

  ಸೇವಂತಿ ದುಃಖದಿಂದ ದಳ

  ಉದುರಿಸಿತು.

* ನಾನು ನಿನ್ನನ್ನು ಪ್ರೀತಿಸುವೆ

ಎನ್ನುವಾಗಲೇ

ಅರ್ಧ ಪ್ರೇಮ ಸೋರಿಹೋಗುವುದು

ಮನುಷ್ಯನ

ಮಾತಿಗಿರುವ ಶಾಪ.

* ನನ್ನ ಇನಿಯನ ನಲ್ಲೆಯಾದ

  ನಾನು

  ಅವನ ತಾಯಿ ಕೂಡ

  ಎಂಬುದು

  ಅವನು ಒಪ್ಪದಿದ್ದರೂ ನಿಜ.

ವಾ! ಅಲ್ವಾ…? ಇವತ್ತಿಗೆ ಇಷ್ಟು ಸಾಕು,… ನೀಲುವಿನೊಂದಿಗೆ ಮೇಷ್ಟ್ರ ನೆನಪು ಮತ್ತು ಅವರ ವಿವೇಚನೆಯ ಎಚ್ಚರಿಕೆಯನ್ನು ಜತನಮಾಡಿಕೊಳ್ಳಲು ಪ್ರಯತ್ನಿಸೋಣ, ಎಲ್ಲ ಪ್ರಲೋಭನೆ, ಆಕ್ರಮಣಗಳ ನಡುವೆಯೂ! ನೀಲು ಮೌನವಾಗಿ ಎಂಟು ವರ್ಷಗಳ ಬಳಿಕ ಹೀಗೆ ಮೇಷ್ಟ್ರರನ್ನೂ, ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!

ಹೀಗೆ ಸಾಗುತ್ತಾ ಸೀಗೆಮಟ್ಟಿ ದಾಟಿ ಎದುರಿನ ಬೂರುಗದ ಮರದ ಸಮೀಪಕ್ಕೆ ಬಂದಿದ್ದೆ ಅಷ್ಟೆ! ಗಿಡ-ಮರದ ನೆತ್ತಿಯಿಂದ ಕಣ್ಣುಗಳು ಅಚಾನಕ್ಕಾಗಿ ಎದುರಿನ ದಾರಿಯತ್ತ ಇಳಿದವು…. ಕ್ಷಣ ಜೀವ ಝಲ್ಲೆಂದಿತು!! ಹೌದು, ನಾನು ಕನಸಿನಲ್ಲೂ ಊಹಿಸಲಾಗದ ಸ್ಥಿತಿಯಲ್ಲಿ ನಾನಿದ್ದೆ!!

ಅವತ್ತು ಅದಾಗ ತಾನೆ ಮಳೆ ನಿಂತ ಹೊತ್ತು. ಸಂಜೆ ಐದರ ಬಿಸಿಲು ಹಸಿರ ಎಲೆಗಳ ತುದಿಯಲ್ಲಿ ಇನ್ನೇನು ನೆಲಕ್ಕೆ ಉದರಬೇಕು ಎಂಬ ತವಕದಲ್ಲಿದ್ದ ಹನಿಗಳ ಮೇಲೆ ಫಳಫಳಿಸುತ್ತಿತ್ತು. ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಿದ್ದ ನನ್ನ ಬಟ್ಟೆಗಳೆಲ್ಲಾ ರಸ್ತೆಗೆ ಬಾಗಿದ್ದ ಲಂಟಾನದ ಗಿಡಗಳ ನೀರು ತಾಕಿ ಬಹುತೇಕ ಒದ್ದೆಯಾಗಿತ್ತು. ಸದ್ಯ ಮುಂಗಾರಿನ ಮಳೆಯಾದ್ದರಿಂದ ಬಂದದ್ದು, ಅಷ್ಟೇ ವೇಗವಾಗಿ ಹೋಗಿದ್ದರಿಂದ ಮತ್ತು ಅದರ ಹಿಂದೇ ಇಳಿಬಿಸಿಲ ಝಳ ಕಾಯತೊಡಗಿದ್ದರಿಂದ ಚಳಿಯಲ್ಲಿ ನಡುಗುವ ಸಂಕಷ್ಟ ಇರಲಿಲ್ಲ.

ಊರಿಗೆ ಹೋದಾಗೆಲ್ಲಾ ಒಬ್ಬನೇ ಮನೆ ಹಿಂದಿನ ಕಾಡನ್ನು ಸುತ್ತುವುದು ಅಭ್ಯಾಸವಾಗಿಹೋಗಿರುವುದರಿಂದ ಅವತ್ತು ಕೂಡ ಹಾಗೆ ಹೋದವನು ಮತ್ತೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದೆ. ಮಧ್ಯಾಹ್ನ ಊಟ ಮುಗಿಸಿ ಹೊರಟವನು ಬರೋಬ್ಬರಿ ಮೂರೂವರೆ ತಾಸು ಕಾಡು ಸುತ್ತಿದ್ದರಿಂದ ಬೆಂಗಳೂರಿನಲ್ಲಿ ನೆಲವನ್ನೇ ತಾಕದ ಕಾಲುಗಳಿಗೆ ವಿಪರೀತ ದಣಿವಾಗಿತ್ತು. ಸರಿ, ಬೇಗೆ ಮನೆಗೆ ಹೋಗಿ ಒಂದೊಳ್ಳೆ ಟೀ, ಹಲಸಿನ ಹಪ್ಪಳ ತಿಂದು ತೋಟದತ್ತ ಮುಖಮಾಡಿ ಬಂದರೆ ಎಲ್ಲಾ ದಣಿವು ಮಾಯವಾಗಲಿದೆ ಬಿಡು ಎಂದುಕೊಂಡು ದಡದಡ ನಡೆಯುತ್ತಲೇ ಇದ್ದೆ. ಇನ್ನೇನು ಮನೆ ಒಂದು ಕಿ.ಮೀ. ದೂರದಲ್ಲಿತ್ತು. ಆ ಸೀಗೆ ಮಟ್ಟಿಯ ತಿರುವನ್ನು ತಿರುಗಿ ಇಳುಕಲು ಇಳಿದರೆ ಮನೆಗೇ ಹೋಗಿ ನಿಲ್ಲುವುದು ಎಂದುಕೊಂಡೆ.

ಸೀಗೆಮಟ್ಟಿ ಬಳಿಗೆ ಬರುತ್ತಿದ್ದಂತೆ ಪ್ರೈಮರಿ ಶಾಲೆಯಲ್ಲಿ ಓದುವಾಗ ಮಳೆ ನಿಂತ ಮೇಲೆ ನಿಲ್ಲುವ ಕಿರುದಾರಿಯ ನೀರಿನಲ್ಲಿ ಆಟವಾಡುತ್ತಾ, ನೀರ ನಡು-ನಡುವೆ ಇರುವ ಮಣ್ಣಿನ ಮೇಲೆ ಪಾದವೂರಿ ಅದು ತಕ್ಷಣವೇ ಆರಿದಂತೆ ಕಾಣುವುದನ್ನು ವಿಚಿತ್ರ ಖುಷಿಯಲ್ಲಿ ಅನುಭವಿಸುತ್ತಾ ಬರುತ್ತಿದ್ದಾಗ ಜಾರಿ ಬಿದ್ದದ್ದು, ಬೀಳುತ್ತಲೇ ಅಂಗೈ ಊರಿದ್ದರಿಂದ ಬಲಗೈ ಹಸ್ತಕ್ಕೆ ಕಲ್ಲು ಚುಚ್ಚಿ ಹದಿನೈದು ದಿನಗಟ್ಟಲೆ ಗಾಯದ ಆರೈಕೆ ಮಾಡಿಕೊಂಡಿದ್ದು, ಅದಕ್ಕಿಂತ ಹೆಚ್ಚಾಗಿ ಅಪ್ಪನ ಬಳಿ ಉಗಿಸಿಕೊಂಡಿದ್ದು,… ಎಲ್ಲಾ ನೆನಪುಗಳ ಮೆರವಣಿಗೆ ಸಾಗಿಯೇ ಇತ್ತು.

ಕಾಲುಗಳು ಮಾತ್ರ ಯಾಂತ್ರಿಕವಾಗಿ ಸಾಗುತ್ತಲೇ ಇದ್ದುವು. ಮನಸ್ಸು ಮಳೆಗಾಲದಲ್ಲಿ ಜಾರಿಬಿದ್ದ ಕಥೆಯನ್ನು ಮೆಲುಕು ಹಾಕುತ್ತಿದ್ದರೆ, ಕಣ್ಣುಗಳ ಸಹಜವಾಗೇ ಗಿಡ- ಮರಗಳ ತುದಿಯನ್ನೋ, ಬಿದಿರು ಮೆಳೆಗಳ ಮೇಲೆ ಆಗ ತಾನೆ ತಲೆಎತ್ತುತ್ತಿದ್ದ ಬಂಗಾರದ ಬಣ್ಣದ ಅಂಬಾರ-ಕಳಲೆಗಳನ್ನೋ ನೋಡುತ್ತಿದ್ದವು. ಕಿವಿಯಲ್ಲಿ ದೂರದಲ್ಲೆಲ್ಲೋ ಕೂಗುತ್ತಿದ್ದ ಜಿಂಕೆಯ ಧ್ವನಿ, ತುಸು ದೂರದಲ್ಲೇ ಕ್ಷಣ- ಕ್ಷಣಕ್ಕೂ ಉಲಿಯುತ್ತಿದ್ದ ಮಂಗೋಟೆ ಹಕ್ಕಿಯ ಕೂಗು, ಹತ್ತಿರದಲ್ಲೇ ಅರಚುತ್ತಿದ್ದ ಜೀರುಂಡೆಯ ಸದ್ದು,… ಮತ್ತೆ ಮಳೆನಿಂತು ಹೋದರೂ ಹನಿಯುತ್ತಲೇ ಇದ್ದ ಹನಿಗಳ ತಕಧಿಮಿತಾ…

ಹೀಗೆ ಸಾಗುತ್ತಾ ಸೀಗೆಮಟ್ಟಿ ದಾಟಿ ಎದುರಿನ ಬೂರುಗದ ಮರದ ಸಮೀಪಕ್ಕೆ ಬಂದಿದ್ದೆ ಅಷ್ಟೆ! ಗಿಡ-ಮರದ ನೆತ್ತಿಯಿಂದ ಕಣ್ಣುಗಳು ಅಚಾನಕ್ಕಾಗಿ ಎದುರಿನ ದಾರಿಯತ್ತ ಇಳಿದವು…. ಕ್ಷಣ ಜೀವ ಝಲ್ಲೆಂದಿತು!! ಹೌದು, ನಾನು ಕನಸಿನಲ್ಲೂ ಊಹಿಸಲಾಗದ ಸ್ಥಿತಿಯಲ್ಲಿ ನಾನಿದ್ದೆ!!

ಕಾಡಿನಲ್ಲಿ ನಡೆವಾಗ ಆಗಾಗ ಯಾವ ಜೀವವನ್ನು ನೆನೆಸಿಕೊಂಡು ಮನಸ್ಸು ತುಸು ಪುಕ್ಕಲಾಗುತ್ತಿತ್ತೋ ಅದೇ ಜೀವ ಕಣ್ಣೆದುರಿಗೆ ಕೂತಿದೆ! ಅದೂ ಕೇವಲ ಹತ್ತು ಹೆಜ್ಜೆ ದೂರದಲ್ಲೇ!! ಕಣ್ಣು ಅದನ್ನು ನೋಡುತ್ತಲೇ ಗಕ್ಕನೆ ಅಲ್ಲೇ ನಿಂತೆ. ಕೂಗಲು, ಕೈ ಎತ್ತಿ ಅದನ್ನು ಬೆದರಿಸಲು,… ಊಹ್ಞೂಂ ಏನೊಂದಕ್ಕೂ ಸಾಧ್ಯವಾಗುತ್ತಿಲ್ಲ! ಮಾತು ಹೊರಡುತ್ತಿಲ್ಲ, ಕೈ-ಕಾಲು ನಡುಗುತ್ತಿವೆ…. ಅಯ್ಯೋ… ರಾತ್ರಿ ಕನಸಲ್ಲಿ ಓಡುತ್ತಿರುವಂತೆ, ಹಾವಿನ ಮೇಲೆ ನಡೆದಂತಾಗುವ ಅನುಭವವೇ ಈಗಲೂ…. ಕಣ್ಣು ಮಾತ್ರ ರೆಪ್ಪೆ ಮಿಟುಕಿಸದೇ ಅದರತ್ತಲೇ ನೆಟ್ಟಿವೆ!

ಹಾಗೇ ನೋಡುತ್ತಲೇ,… ನನ್ನ ಕಡೆ ಬೆನ್ನು ಮಾಡಿಕೂತಿದ್ದ ಅದು ನಿಧಾನಕ್ಕೆ ಕತ್ತನ್ನಷ್ಟೇ ನನ್ನತ್ತ ತಿರುಗಿಸಿತು. ಇನ್ನೇನು ನನ್ನನ್ನು ಕಂಡರೆ ಮುಗೀತು ಕಥೆ ಎಂದುಕೊಂಡು ಬೆವರತೊಡಗಿದೆ. ನನ್ನ ಕಣ್ಣಿನೊಂದಿಗೆ ಅದರ ಕಣ್ಣುಗಳು ಸಂಧಿಸಿದ ಆ ಕ್ಷಣ ಅಬ್ಬಾ! ಮತ್ತೊಂದು ಕ್ಷಣಕ್ಕೆ ಆ ನೋಟವನ್ನು ಉಳಿಸಿಕೊಳ್ಳೋಣವೆಂದರೂ ಅದಕ್ಕೆ ಅವಕಾಶವಾಗದಂತೆ ಒಂದೇ ನೆಗೆತಕ್ಕೆ ದಾರಿಯಿಂದ ಆಚೆ ನೆಗೆದು ಲಂಟಾನದ ಪೊದೆಗಳ ನಡುವೆ ಮಾಯವಾಯಿತು.

ಅಂತಹ ರೌದ್ರ ಸೌಂದರ್ಯದ ಜೀವವನ್ನು ಕಣ್ಣಾರೆ ಕಂಡ ಖುಷಿ ಒಂದುಕಡೆಯಾದರೆ, ಅಲ್ಲಿವರೆಗೆ ಭಯದಿಂದ ನಿಂತೇಹೋದಂತಿದ್ದ ಎದೆಯ ಬಡಿತ ಈಗ ದಿಕ್ಕೆಡುವಂತೆ ಬಡಿದುಕೊಳ್ಳತೊಡಗಿತ್ತು. ಅದರ ಸೌಂದರ್ಯ, ಆ ಕಣ್ಣುಗಳಲ್ಲಿನ ತೀಕ್ಷ್ಣತೆ, ಅದರ ಮೈಬಣ್ಣ, ಪಟ್ಟೆಗಳ ವಿನ್ಯಾಸ, ಬಾಲದ ವೈಯಾರಗಳನ್ನೆಲ್ಲಾ ಕಣ್ಣು ಕಂಡದ್ದಿರೂ ಸವಿಯುವ ಮನಸ್ಥಿತಿ ಇರಲಿಲ್ಲ! ಮೊದಲು ಅಲ್ಲಿಂದ ಬೇಗ ಪಾರಾಗಿ ಮನೆ ಸೇರಿದರೆ ಸಾಕಿತ್ತು… ಓಡಿದಂತೆ ಹೆಜ್ಜೆ ಹಾಕುತ್ತಾ ಮನೆ ಸೇರಿದ ಮೇಲೆ ಮನೆಯಲ್ಲಿ ಹೇಳಿದರೆ, ತಮ್ಮ ನಂಬುತ್ತಲೇ ಇಲ್ಲ!?  “ಇಷ್ಟೊತ್ತಿನಲ್ಲಿ ಹುಲಿ, ಅದು ಪಟ್ಟೆ ಹುಲಿ ಕಾಣುವುದು ಉಂಟೇನೋ… ಹೋಗೋ ಮಾರಾಯ” ಎಂದ!! ಏನ ಹೇಳಲಿ?

ಮೊನ್ನೆ ಇದ್ದಕ್ಕಿದ್ದಂತೆ ಮಳೆ ಬಂದಾಗ ಏಕೋ ಕಳೆದ ಕಾಲದ ದಿನಗಳು ಬಿಚ್ಚಿಕೊಳ್ಳತೊಡಗಿದವು. ಹಾಗೇ ಮನಸ್ಸು ಕೂಡ ಮಳೆಯಲ್ಲಿ ನೆನೆದು ಒದ್ದೆಯಾದಂತೆನಿಸಿತು….

ವರುಷಗಳ ಹಿಂದೆ ಸಾಗರದ ಲಾಲ್ ಬಹಾದ್ದೂರ್ ಕಾಲೇಜಿನಲ್ಲಿ ಕಲಿಯುತಿದ್ದ ದಿನಗಳಲ್ಲಿ ಕೂಡ ಹೀಗೆ ಒಂದು ಚಳಿಗಾಲದಲ್ಲಿ ಬಂದ ಅನಿರೀಕ್ಷಿತ ಮಳೆ, ಅದು ಬಿಟ್ಟುಹೋದ ಅಕಾಲಿಕ ಪ್ರೀತಿಯ ನೆನಪು ದುತ್ತೆಂದು ಎದುರಾಯಿತು. ಅವತ್ತು ಶನಿವಾರದ ತರಗತಿಗಳನ್ನು ಮುಗಿಸಿಕೊಂಡು ಆಗ ತಾನೆ ಪರಮ ಪ್ರೇಮಿ ಡಬ್ಲ್ಯೂ.ಬಿ. ಏಟ್ಸ್ ಪದ್ಯವನ್ನು ಮುಗಿಸಿಕೊಂಡು ಹಾಸ್ಟೆಲ್ಲಿನ ದಾರಿ ತುಳಿಯುತ್ತಿದ್ದೆ. ಚಳಿಗಾಲದ ಗಾಳಿಯಂತೆ, ಚಳಿಯಂತೆ, ಸೂರ್ಯನಂತೆ ಕೊನೆಗೆ ಮರದಿಂದ ಉದುರಿ ನೆಲವನ್ನು ಅಪ್ಪುವ ತರಗೆಲೆಯಂತೆ ಮಳೆ ಕೂಡ ಜಿಟಿಜಿಟಿ ಎಂದು ಕೆಳಗಿಳಿಯಲೋ ಬೇಡವೋ ಎಂದು ಹನಿಯುತ್ತಿತ್ತು. ಆದರೂ ನನ್ನಂಥ ಪರಮ ವ್ಯಾಮೋಹಿಗೆ ಖುಷಿ ಕೊಡಲೋ ಎಂಬಂತೆ ಸೂರ್ಯ ಮಾತ್ರ ಫಳ-ಫಳಿಸುತ್ತಿದ್ದ. ಮಳೆ ನಡುವೆ ಕದ್ದು ಸೂರ್ಯನೂ ಆಟ ಶುರುವಿಟ್ಟುಕೊಂಡರೆ ಇನ್ನು ಕೇಳಬೇಕೆ ಕಣ್ಣೆದುರಿನ ಬೆಟ್ಟದ ಆಚೆ ಮಳೆಬಿಲ್ಲು ಕೂಡ ಗರಿಬಿಚ್ಚಿತ್ತು! ಇಷ್ಟು ಸಾಕಿತ್ತು ಮನಸ್ಸು ಲಗಾಮು ಕಿತ್ತ ಕುದುರೆಯಂತೆ ಕಲ್ಪನಾಲೋಕದಲ್ಲಿ ಘೂಳಿಡಲು.

ಸರಿ, ನನ್ನದೇ ಲಹರಿಯಲ್ಲಿ ಎಲ್ಲವನ್ನೂ ಗ್ರಹಿಸುತ್ತಾ ಪದ್ಯವಾಗಿಸಬಹುದೇ ಇದನ್ನು ಎಂದು ಲೆಕ್ಕಹಾಕುತ್ತಾ ಸಾಗುತ್ತಿದ್ದೆ. ಹಿಂದಿನಿಂದ ಯಾರೋ ಕರೆದಂತಾಗಿ ತಿರುಗಿ ನೋಡಿದೆ. ಹನಿಯುವ ಮಳೆಯಲ್ಲಿ ವೇಲ್ ತಲೆ ಮೇಲೆ ಹೊದ್ದು ಆಕೆ ಓಡಿ ಬರುತ್ತಿದ್ದಳು. ಇದೇನಿದು? ಕ್ಲಾಸಿನಲ್ಲಿ ಅಕ್ಕಪಕ್ಕದ ಬೆಂಚಲ್ಲಿ ಕೂತರೂ ಎಂದೂ ಮಾತಾಡದ ಈಕೆ ನನ್ನನ್ನ ಕರೆಯುತ್ತಿದ್ದಾಳೆ ಎಂದುಕೊಂಡೆ. ಆದರೂ ಕ್ಲಾಸಿಗೇ ಚೆಲುವೆ ಬೇರೆ, ಏನು ಎಂದು ಆತ್ಮೀಯವಾಗಿ ಕೇಳದೇ ಇರಲು ಸಾಧ್ಯವೇ? ಕೇಳಿದೆ. ….. ಏನು? ಎಂದು. ನನ್ನ ನಿರೀಕ್ಷೆ ಯಾವುದೋ ಕ್ಲಾಸಿಗೆ ಬಂದಿಲ್ಲ, ಅವತ್ತಿನ ನೋಟ್ಸ್ ಕೊಡೋ ಎಂದೋ, ಅಥವಾ ಯಾವುದೋ ಪುಸ್ತಕ ಬೇಕು ಎಂದು ಕೇಳಬಹುದು ಎಂಬುದಷ್ಟೇ… ಆದರೆ, ಆಕೆ ಹತ್ತಿರ ಬಂದವಳೆ, ಏನು ಮತ್ತೆ ಹಾಸ್ಟೆಲ್ಗೆ ಹೊರಟುಬಿಟ್ಟಿರಾ ಎಂದಳು. ನನಗೆ ಇದೇನಿದು, ದಿನಾ ಇಲ್ಲೇ ಓಡಾಡುತ್ತಿದ್ದರೂ ಪರಿಚಯವೇ ಇಲ್ಲದಂತೆ ಓಡಾಡುತ್ತಿದ್ದವಳು. ಇವತ್ತೇನು ವಿಶೇಷ.. ಎಂದು ವಿಚಿತ್ರ ಎನಿಸಿತು. ಆದರೂ, ಇರಲಿ ಎಂದುಕೊಂಡು, ಹ್ಞಾಂ, ಕ್ಲಾಸ್ ಮುಗೀತಲ್ಲ.. ಇನ್ನೇನು ಮಾಡೋದು.. ಎಂದೆ. ಅದಕ್ಕೆ ಮತ್ತೇನು ಬರೆದಿರಿ, ಎಲ್ಲೂ ಕವಿತೆ ಪ್ರಕಟವಾಗಿಲ್ಲವಾ ಎಂದೆಲ್ಲಾ ಕೇಳತೊಡಗಿದಳು. ಅರೆ, ನಾನು ಪದ್ಯ ಬರೆಯೋದು ಈಕೆಗೆ ಗೊತ್ತಾ? ಎಂದು ಆಶ್ಚರ್ಯವಾದರೂ, ಅದಕ್ಕಿಂತ ಆತಂಕವಾಗಿದ್ದು ಈ ಹುಡುಗಿ ಹೀಗೆ ನನ್ನ ಜೊತೆ ಹರಟೆ ಕೊಚ್ಚುತ್ತಿರುವುದೇಕೆ ಎಂಬುದಕ್ಕೆ! ಸರಿ, ಬರೆದಿದ್ದೇನೆ, ಒಂದೆರಡು ಕಳಿಸಿದ್ದೆ. ಪ್ರಕಟವಾಗಿಲ್ಲ… ಮತ್ತೇನು ನಿನ್ನೆ ಹಿಸ್ಟರಿ ಕ್ಲಾಸಲ್ಲಿ ಏನು ಆಯಿತು ಎಂದು ಮಾತು ತಿರುಗಿಸಿದೆ. ಏನಿಲ್ಲ, ಅದೇ ಎಂಎನ್ ಬಂದು ಕರ್ನಾಟಕ ಹಿಸ್ಟರಿನಲ್ಲಿ ಸ್ವಾತಂತ್ರ್ಯೋತ್ತರ ಕಾಲಘಟ್ಟ ಕುರಿತು ಹೇಳಿದರು. ಬೋರೋ ಬೋರು ಬಿಡು ಎಂದಳು. ಹೌದು, ನೀನೆಲ್ಲಿ ಹೋಗಿದ್ದೆ. ಅದಕ್ಕೂ ಮೊದಲಿನ ಟಿಪಿಎ ಆಪ್ಷನಲ್ ಕ್ಲಾಸಿಗೆ ಇದ್ದೆಯಲ್ವ ಎಂದಳು. ಇಲ್ಲಾ ನನಗೆ ಅವರ ಕ್ಲಾಸಿಗೆ ಕೂರೋಕೆ ಇಷ್ಟವಿರಲಿಲ್ಲ, ಅದಕ್ಕಿಂತ ಲೈಬ್ರರಿಯಲ್ಲಿ ಕೂತು ನಾಲ್ಕು ಪದ್ಯವನ್ನೋ, ಕಥೆಯನ್ನೋ ಓದಿದರೆ ಲೇಸು ಅನ್ಕೊಂಡು ಎಂಎನ್ಗೆ ಇಂಪಾರ್ಡೆಂಟ್ ನೋಟ್ಸ್ ಬರಿಯೋದಿದೆ. ದಯವಿಟ್ಟು ಇವತ್ತೊಂದಿನ ಅಟೆಂಡೆನ್ಸ ಕೊಡಿ ಎಂದು ಕೇಳಿಕೊಂಡು ಲೈಬ್ರರಿಯಲ್ಲಿ ಕೂತಿದ್ದೆ.. ಎಂದೆ. ಓಯೋ ನಿನ್ನದೆ ಅದೃಷ್ಟ ಬಿಡಪ್ಪಾ ಅಂದಳು. ಅರೆ ಇದೇನಿದು ಇಷ್ಟೊಂದು ಸಲುಗೆ! ಇದೇನೋ ಎಡವಟ್ಟಾಗ್ತಾಯಿದೆ ಎಂದುಕೊಂಡು ಹಾಗೇ ಹೆಜ್ಜೆ ಹಾಕಿದೆ. ಅಷ್ಟರಲ್ಲಿ ಸಾಕಷ್ಟು ದೂರ ಸಾಗಿತ್ತು. ಹಾಗೇ ಅದೂ- ಇದೂ ಮಾತಾಡ್ತಾ ಮಾತಾಡ್ತಾ ಆಕೆ ಮತ್ತೆ ನನ್ನ ಪದ್ಯದ ಕಡೆ ಹೊರಳಿದಳು.

ಕಳೆದ ತಿಂಗಳು ಪ್ರಕಟವಾಗಿತ್ತಲ್ಲ ನಿನ್ನ ಹೂ ಹುಡುಗಿ ಪದ್ಯ ಚೆನ್ನಾಗಿತ್ತು ಕಣೋ ಎಂದಳು! ಅರೆ, ಅಯ್ಯೋ ಆ ಪದ್ಯವನ್ನು ಇವಳು ಓದಿ ಚೆನ್ನಾಗಿತ್ತು ಅಂತಿದಾಳಲ್ಲಪ್ಪಾ ಎಂದುಕೊಂಡು ದಿಗಿಲಾದರೂ ತೋರಗೊಡದೆ ಹೌದಾ ಥ್ಯಾಂಕ್ಯೂ ಎಂದೆ ದಡ್ಡನಗೆ ನಕ್ಕು. ಆಕೆ ಅಲ್ಲೋ ಅಷ್ಟೊಂದು ಚೆಂದದ ಪದ್ಯ ಬರೆದಿದ್ದೀಯಲ್ಲ ಯಾರೋ ಅದು ಹೂ ಹುಡುಗಿ ಎಂದಳು. ಇದು ಇನ್ನಷ್ಟು ಫಜೀತಿಗಿಟ್ಟುಕೊಂಡಿತು ಎಂದು ಯಾರೂ ಇಲ್ಲಪ್ಪಾ,… ಸುಮ್ಮೆ… ಎಂದೆ. ನಾನು ಇವಳು ಕೈಯಲ್ಲಿ ಯಾಕಪ್ಪಾ ಸಿಕ್ಕಾಕೊಂಡೆ ಎಂದು ನಾನು ತಡಬರಿಸುತ್ತಿದ್ದರೆ, ಮಳೆ ಮತ್ತೆ ಜೋರಾಗತೊಡಗಿತು. ಅಷ್ಟೊತ್ತಿಗಾಗಲೇ ಸಾಕಷ್ಟು ಒದ್ದೆಯಾಗಿದ್ದ ಅವಳು ಬೇರೆ ಬದಿಯಲ್ಲಿ…

ಅಷ್ಟೊತ್ತಿಗೆ ರಸ್ತೆಯ ಹಿಂದಿನ ತುದಿಯಲ್ಲಿ ನನ್ನ ಪರಮ ದ್ವೇಷದ ಎಕಾನಮಿಕ್ಸ್ ಲೆಕ್ಚರ್ ವೆಸ್ಪಾ ಲ್ಯಾಂಬ್ರೆಟ ವೆಸ್ಪಾ ಬೆನ್ನನು ಏರಿ ಎಂಬ ನೆನಪು ತರಿಸುವಂತೆ ಬರುತ್ತಿತ್ತು. ಜೊತೆಗೆ ಆ ಸೋಶಿಯಾಲಜಿ ಮೇಡಂ ಬೇರೆ ಹಿಂದೆ ಕೂತಿದ್ದರು. ಶಿವಾ ಈ ಸ್ಥಿತಿಯಲ್ಲಿ ನನ್ನನ್ನೇದರೂ ಆ ಎಕನಾಮಿಕ್ಸ್ ಲೆಕ್ಚರ್ ನೋಡಿದ್ರೆ ಏನು ಗತಿ ಎಂದು ತಲೆ ಕೆಟ್ಟುಹೋಯ್ತು. ಮೊದಲೇ ಡಿಮಿನಿಷಿಂಗ್ ಮಾರ್ಜಿನಲ್ ಯುಟಿಲಿಟಿ, ಅದೂ ಇದೂ ಎಂದು ಯಾವ ಕರ್ವ್, ಸೂತ್ರವೂ ನೆನಪಿನಲ್ಲುಳಿಯದೆ ತರಗತಿಯಲ್ಲಿ ಅವರಿಂದ ಉಗಿಸಿಕೊಳ್ಳುತ್ತಿದ್ದ ನನಗೆ ಇದು ಭಲೇ ಇಕ್ಕಟ್ಟಿಗೆ ಸಿಕ್ಕಿಬೀಳುವ ಅಪಾಯಕಾರಿ ಸನ್ನಿವೇಶವಾಗಿ ಕಾಣಿಸಿತು. ನಾಳೆ ಇದನ್ನೇ ಇಡೀ ಕ್ಲಾಸಲ್ಲಿ ಹೇಳಿ, ಏನೋ ಹುಡಿಗೀರು ಜೊತೆ ಲಲ್ಲೆ ಹೊಡ್ಕೊಂಡು ಹೋಗೋಕಾಗುತ್ತೆ ಒಂದು ಸೂತ್ರ ನೆನಪಿಟ್ಕೊಳ್ಳೋಕೆ ಆಗೊಲ್ಲವೇನೋ ಎಂದು ಮರ್ಯಾದೆ ಮೂರು ಕಾಸು ಮಾಡ್ತಾನೆ ಎಂದುಕೊಂಡು ಪಾರಾಗುವುದು ಹೇಗೆ ಶಿವಾ ಎಂದು ಯೋಚಿಸಿದೆ. ಇನ್ನೇನು ವೆಸ್ಪಾ ಸಮೀಪಿಸುತ್ತಿದೆ ಎನ್ನುತ್ತಲೇ ರಸ್ತೆಯ ಬಲ ಬದಿಗೆ ದಾಟಿದೆ. ಸದ್ಯ ಅದೇ ಹೊತ್ತಿಗೆ ಬಸ್ ಒಂದು ಎದುರಿನಿಂದ ಬಂತು! ಅಬ್ಬಾ ಬಚಾವಾದೆ!! ಬಸ್ ನಮ್ಮನ್ನು ದಾಟಿ ಹೋಗುವಷ್ಟರಲ್ಲಿ ವೆಸ್ಪಾ ಕೂಡ ದಾಟಿತ್ತು. ಸದ್ಯ ದೊಡ್ಡ ಗಂಡಾಂತರ ತಪ್ಪಿತು ಎಂದುಕೊಂಡು ನಿಟ್ಟುಸಿರು ಬಿಟ್ಟೆ.

ಅಷ್ಟೊತ್ತಿನವರೆಗೂ ಆಕೆ ಮಾತ್ರ ಆ ಹೂ ಹುಡುಗಿಯ ಸುತ್ತಲೇ ಗಿರಕಿ ಹೊಡೆಯುತ್ತಲೇ ಇದ್ದಳು. ನಾನು ಎಕಾನಮಿಕ್ಸ್ ಲೆಕ್ಚರ್ ತಗಾದೆಯಲ್ಲಿ ಅವಳ ಪ್ರಶ್ನೆ, ಆಶ್ಚರ್ಯ, ವಿರಾಮ, ಕುತೂಹಲಗಳಿಗೆಲ್ಲಾ ಹಾಂ, ಊಂ ಎಂದಷ್ಟೇ ಹೇಳುತ್ತಿದ್ದೆ. ಇನ್ನೂ ಎಷ್ಟು ದೂರ ಈಕೆ ನನ್ನ ಬಿಡಲೊಲ್ಲಳು ಎಂದು ಯೋಚಿಸಿದೆ. ಆಕೆಯ ಊರಿಗೆ ಹೋಗುವ ಬಸ್ ನಿಲ್ಲುವುದು ಹೆಲಿಪ್ಯಾಡ್ ಕ್ರಾಸ್ನಲ್ಲಿ. ಅಲ್ಲೀತನಕ ನನಗೆ ಈ ಫಜೀತಿಯಿಂದ ಮುಕ್ತಿಯಿಲ್ಲ ಎಂದುಕೊಂಡೆ. ನಿಧಾನಕ್ಕೆ ಆಕೆ ಏನು ಗೊತ್ತಾ, ನನಗೆ ಆ ಪದ್ಯ ಎಷ್ಟು ಇಷ್ಟ ಅಂದ್ರೆ ಅದನ್ನ ಹಾಗೇ ಕಟ್ ಮಾಡಿ ನೋಟ್ ಪುಸ್ತಕದಲ್ಲಿಟ್ಟುಕೊಂಡಿದ್ದೀನಿ ಕಣೋ ಎಂದಳು. ಇದು ಏಕೋ ಅತಿಯಾಯ್ತು ಅನ್ನಿಸಿದರೂ ಹೇಳಲಾರದೆ. ಮತ್ತೇನು ವಿಶೇಷ, ನಾಳೆ ಆಫ್ಷನಲ್ ಇಂಗ್ಲಿಷ್ ಯಾರ ಕ್ಲಾಸ್? ಎಂದೆ ಮಾತು ಹೊರಳಿಸಲು. ಹ್ಞೂಂ, ಆಕೆ ಅದಕ್ಕೆ ಸಿದ್ಧಳಿರಲೇ ಇಲ್ಲ. ಮತ್ತೆ ಅದೇ ಹೂ…. ಇದೊಳ್ಳೆ ಕಷ್ಟವಾಯಿತಲ್ಲ, ಏಕಾದ್ರೂ ಆ ಪದ್ಯ ಬರೆದೆನಪ್ಪಾ ಎನಿಸತೊಡಗಿತು.

ಚೆಂದದ ಹುಡುಗಿ ಜೊತೆ ಬರುತ್ತಿದ್ದಾಳೆ ಎಂದು ಖುಷಿ ಪಡದೆ, ನಾನು ಭಯಬೀಳಲು ಕಾರಣ, ಹುಡುಗಿಯೊಬ್ಬಳೇ ನನ್ನೊಂದಿಗೆ ಮಾತನಾಡುತ್ತಾ ಬರುತ್ತಿದ್ದಾಳೆ ಎಂಬುದಾಗಿರಲಿಲ್ಲ, ಬದಲಾಗಿ ಆ ಕವಿತೆಯಾಗಿತ್ತು. ಏಕೆಂದರೆ ನಾನು ಅದನ್ನು ಬರೆದದ್ದು ನನ್ನ ಕ್ಲಾಸಿನ ಮತ್ತೊಬ್ಬ ಹುಡುಗಿಯನ್ನು ಕುರಿತು! ಆದರೆ, ಅದನ್ನು ಯಾರಿಗೂ ಹೇಳಿರಲಿಲ್ಲ! ಈಗ ಈಕೆ ಹೀಗೆ ಬೆನ್ನು ಹತ್ತಿರುವುದರ ಹಿಂದೆ ಏನೋ ಇದೆ ಎಂದುಕೊಂಡು ಸುಮ್ಮನೇ ನಡೆಯತೊಡಗಿದೆ. ಸಾಗರದವರಿಗೆ ಮಳೆ ಹೊಸತಲ್ಲವಾದ್ದರಿಂದ ಜಿಂಪರು ಮಳೆ ನಮ್ಮ ದಾರಿಗೆ ಅಡ್ಡವಾಗಿರಲಿಲ್ಲ. ಇನ್ನೇನು ಆಕೆಯ ಬಸ್ ನಿಲ್ದಾಣ ತುಸುವೇ ದೂರ ಎನ್ನುತ್ತಿದ್ದಂತೆ, …. ಮತ್ತೆ ಇದರಲ್ಲೇನೋ ಇದೆ,.. ತಗೋ… ನಾಳೆ ಅದಕ್ಕೆ ಉತ್ತರ ಹೇಳೋ… ಎಂದವಳೆ ನನ್ನ ಕೈಗೆ ಒಂದು ಲೆಟರ್ ಕೊಟ್ಟಳು. ಅಯ್ಯೋ! ಎಂದುಕೊಂಡು ಕಾಗದವನ್ನು ಸರಕ್ಕನೆ ಇಸಿದುಕೊಂಡು ಜೇಬಿಗೆ ಹಾಕಿಕೊಂಡು ಬಾಯ್ ಎಂದೂ ಹೇಳದೆ ಅವಳನ್ನು ಹಿಂದೆ ಬಿಟ್ಟು ಭರಭರ ಮುಂದೆ ನಡೆದೆ…

ಹಾಸ್ಟೆಲ್ಗೆ ಹೋದವನೆ ಒದ್ದೆ ಬಟ್ಟೆಯಲ್ಲೇ ಲೆಟರ್ ಬಿಚ್ಚಿದೆ. ಓದುತ್ತಾ ಹೋದಂತೆ ಮೈ ಬಿಸಿಯಾಯಿತು!!

ಅಷ್ಟಕ್ಕೂ ಆದದ್ದೇನೆಂದರೆ, ನಾನು ನಿಜವಾಗಿಯೂ ಯಾರ ಮೇಲೆ ಆ ಪದ್ಯ ಬರೆದಿದ್ದೆನೋ ಅದೇ ಹುಡುಗಿಯೇ ಈಕೆಗೆ, ಅವನು ನಿನ್ನನ್ನೇ ಉದ್ದೇಶಿಸಿ ಈ ಪದ್ಯ ಬರೆದಿದ್ದಾನೆ ಕಣೇ.. ಎಂದು ಏನೇನೋ ಹೇಳಿ ಮರ ಹತ್ತಿಸಿದ್ದಳು. ಅದನ್ನು ನಂಬಿಕೊಂಡು ಆಕೆ ನನ್ನನ್ನು ಬೆನ್ನುಬಿದ್ದಿದ್ದಳು. ಮಾರನೇ ದಿನ ಕ್ಲಾಸಿಗೆ ಹೋದರೆ, ನಿಜವಾದ ಹೂ ಹುಡುಗಿಯ ಮುಸಿನಗು ಕಾಡುತಿತ್ತು!!

ಇದೀಗ ಮಲೆನಾಡಿನ ಚೆಂದದ ಹಳ್ಳಿಯಲ್ಲಿ ಗೃಹಸ್ಥೆಯಾಗಿರುವ ಆಕೆ ಇದೀಗ ಅದು ಹೇಗೋ ನನ್ನ ಮೊಬೈಲ್ ನಂಬರ್ ಪತ್ತೆ ಮಾಡಿ ಕರೆ ಮಾಡಿದ್ದಳು. ಅದೂ ಮಳೆ ಬಂದ ದಿನವೇ! ಹಿಂಗಾರು ಮಳೆಯ ಲೀಲೆ!!

ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?

ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು.

ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!
ಈಗುಳಿದಿರುವುದು ಅವಳ ಹಂಬಲವಷ್ಟೇ!

(wordsworth ನ ಲೂಸಿ ಪದ್ಯಗಳಲ್ಲಿ ಒಂದಾದ ’she dwelt among the untrodden ways’n ಅನುವಾದ)

ಇಡಿಯಾಗುವುದೊಂದು

ಮೆಲುನಡಿಗೆಯ ಸಾವು.

ನಾನಂದುಕೊಂಡ, ಕನಸಿದ

ಎಲ್ಲವೂ ತದ್ರೂಪದಂತೆ

ನಿಜವಾದರೆ,…..

ಬದುಕೊಂದು ಕೊನೆಯಿಲ್ಲದ

ಯಶಸ್ಸುಗಳ ಹಳಸಲು ಪಲ್ಲವಿ.

ತಪ್ಪು;

ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.

ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ

ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….

ಆದರೂ,

ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,

ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ

ಭ್ರಮೆಯ ಕೂಸು;

ತಪ್ಪಿಗೆ ನಾನೇ ಅಂಜುವ ಪರಿ.

ಕೊನೆಗೂ ತಪ್ಪು-

ನಾನಿರುವ ಪರಿಗೊಂದು ರುಜುವಾತು,

ನಾನಾಗುವ ಸ್ಥಿತಿಗೊಂದು ಕದಲಿಕೆ

ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.

ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ

ನಾನು ಇಂಚಿಂಚೇ ಬೆಳೆದೆ!

(ಇದು ಹ್ಯೂ ಪ್ರಾಥರ್ ಎಂಬ ಅಮೆರಿಕನ್ ಲೇಖಕನ ‘ನೋಟ್ಸ್ ಟು ಮೈಸೆಲ್ಫ್’ ಕೃತಿಯಲ್ಲಿನ ಒಂದು ‘ನೋಟ್’ನ ಭಾವಾನುವಾದ ಕಾವ್ಯ ರೂಪ 2000ನೇ ಸಾಲಿನಲ್ಲಿ ಅನುವಾದಿಸಿದ್ದು)

Shaded with lazy sun light

rushing hurry travelers….

On the busy hi-tech road,

hectic run,…

the slow, steady crawl ling life! 

Speedy wheels, noisy horns

tremuoring grounds,

there crawls a silent life

as if The Almighty is walking! 

Like a sleepy- forest

itself came to metro,…

this fragile beauty is moving…

inch by inch towards endless goal! 

Like the life

Which cralls on reality helplessly!?

(ಇದು ನನ್ನದೇ ಪದ್ಯವೊಂದರ (ಕೆಟ್ಟ!) ಅನುವಾದ)

 ಸಣಕಲು ಗಿಡದ

ಸವೆದ ಹಸಿರಿನ ಆಳದಿಂದ

ಹೂವೆಂಬ ಚೆಲುವು ಉಕ್ಕಿ ಬಂದರೆ

ಅದು ಸಖತ್ ಹಾಟ್ ಮಗಾ! 

ಹೊಗೆ ಕುಡಿದು ಸುಸ್ತಾಗಿ

ಹೊಯ್ದಾಡಿ, ಹೊರಳಾಡಿ ನಿದ್ದೆಗೆಟ್ಟ

ನಗರದೆದೆಯ ಮೇಲೆ ಕುಡಿಬಿಸಲು ಕುಣಿದರೆ,…

ಸಖತ್ ಹಾಟ್ ಮಗಾ! 

 

ಕಸದ ತೊಟ್ಟಿಯಲ್ಲಿ ಚೀರುವ

ಹಸುಗೂಸಿಗೆ ಪರಿತ್ಯಕ್ತೆ

ಹಾಲುಣಿಸಿ ಅಮ್ಮನಾದರೆ

ಆಗ ಸಖತ್ ಹಾಟ್ ಮಗಾ! 

 

ಕಣ್ಣ ಹೊಳಪ ಸೆಳೆತ ಕಳೆದು

ಮೈಯ ಅಂದದ ಮಿಂಚು ಮರೆಯಾಗಿ

ಮಾಗಿದೆದೆಯಲ್ಲೂ ಮತ್ತೊಂದು ಜೀವವ ಕಂಡು

ಪ್ರೀತಿ ಉಕ್ಕಿದರೆ,… ಮಗಾ

ಅದು ಸಖತ್ ಹಾಟ್ !  

 bison1.jpg 

ಮೂಗಿಗೆ ಅಡರುತ್ತಿತ್ತು ಹೆಜ್ಜೇನಿನ ಸುವಾಸನೆ. ಅದೂ ತಾರಿ ಮರದ ಹೂವಿನ ಮಕರಂಧ ಕದ್ದು ಜೇನು ಹುಳುಗಳು ಕೂಡಿಟ್ಟ ಗಂಧ ಇನ್ನೇನು ತುಪ್ಪವಾಗಲು ಕಾಯುತ್ತಿದ್ದ ಘಳಿಗೆ. ಮುಂಗಾರಿನ ಮೊದಲ ಮಳೆ ಹನಿಯುತ್ತಲೇ ನಾಲ್ಕೇ ಹನಿಗೆ ಗಂಧ ಮಧುವಾಗುತ್ತದೆ. ತೀಡುವ ಜೇನ ಗಂಧದ ನಡುವೆ ತೇಲಿ ಬರುವ ಲಂಟಾನದ ಹೂವುಗಳನ್ನು ಹಾದುಕೊಂಡೇ ನುಗ್ಗುತ್ತಿದ್ದರು ಆ ಹೈಕಳು.

ಇನ್ನೇನು ಬೇಸಿಗೆಯ ತುದಿಗಾಲವೂ ಮುಗಿಯುವ ಹೊತ್ತು, ಮಳೆಗಾಲದಲ್ಲಿ ಎತ್ತಿನ ಬಂಡಿಯ ದಾರಿ, ಜಾನುವಾರು-ಕಾಡುಪ್ರಾಣಿಗಳ ಕಾಲುಹಾದಿಗಳನ್ನು ಬಿಟ್ಟರೆ ಇನ್ನೆಲ್ಲೂ ನಾಲ್ಕು ಹೆಜ್ಜೆ ಇಡಲೂ ಆಗದಷ್ಟು ಇಕ್ಕಾಟಾಗಿ ಹಬ್ಬುವ ಲಂಟಾನ ಇದೀಗ ಹೂ ಬಿಟ್ಟು, ಒಣಗಿ ನಿಂತಿದೆ. ಹಾಗಾಗಿ ಈಗ ತುಸು ತೆಳು ಮೆಳೆಗಳಿದ್ದ ಕಡೆ ಕಡ್ಡಿ ಮುರಿದುಕೊಳ್ಳುತ್ತಲೇ ನುಗ್ಗುವುದು ಸುಲಭ. ಇವರೂ ಹಾಗೇ ನುಗ್ಗುತ್ತಿದ್ದರು. ಅವರಿಗಿಂತಲೂ ಜತೆಯಲ್ಲಿದ್ದ ನಾಯಿಗಳು ಹತ್ತಾರು ಹೆಜ್ಜೆ ಮುಂದೆಯೇ ಗುಂಪಾಗಿ ಸಾಗುತ್ತಿದ್ದವು. ಅವುಗಳ ಉತ್ಸಾಹಕ್ಕಂತೂ ಪಾರವೇ ಇರಲಿಲ್ಲ. ನಾಲ್ಕು ಹೆಜ್ಜೆ ಓಡುವುದು, ಹಾಗೆ ಓಡುತ್ತಲೇ ಒಂದಿಷ್ಟು ದೂರ ಹೋಗಿ ಸುತ್ತೆಲ್ಲಾ ಪೊದೆಗಳನ್ನು ನುಗ್ಗಿ ಕಾಡುಪ್ರಾಣಿಗಳಿಗಾಗಿ ಹುಡುಕಾಡಿ ಮತ್ತೆ ಈ ಐವರು ‘ಸರದಾರ’ ಒಡೆಯರ ಬಳಿ ಬಂದು ತನ್ನ ಸಾಹಸದತ್ತ ಗಮನಸೆಳೆಯಲು ಕುಯ್ಯುಂಗುಟ್ಟುವುದು ನಡೆದೇ ಇತ್ತು.

ನೆತ್ತಿ ಮೇಲೆ ಸೂರ್ಯ ಬಂದಿದ್ದರೂ ಕಾಡಿನ ದೊಡ್ಡ-ದೊಡ್ಡ ಮರಗಳೆಲ್ಲಾ ಅದಾಗಲೇ ವಸಂತನ ಪ್ರೇರಣೆಯಿಂದ ಚಿಗುರಿಕೊಂಡಿದ್ದರಿಂದ ನೆರಳು ಆಹ್ಲಾದಕರವಾಗೇ ಇತ್ತು. ಹೋಗುತ್ತಿದ್ದಂತೆಯೇ ಎಂದಿನ ಅಭ್ಯಾಸದಂತೆ ಬಿದಿರು ಮೆಳೆಗಳನ್ನು ಹಣಕು ಹಾಕುವುದು ಯಾಂತ್ರಿಕವಾಗಿ ನಡೆದೇ ಇತ್ತು. ಅದು ಅಲ್ಲಿ ಬೇಟೆಯ ಪ್ರಾಣಿಗಳು ಇರಬಹುದು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಬಿದಿರು ಮೆಳೆಗಳಲ್ಲೇ ವಿಶೇಷವಾಗಿ ಕಟ್ಟುವ ಕೋಲು ಜೇನು ಹುಡುಕುವುದಕ್ಕಾಗಿ. ಪ್ರತಿ ಬಾರಿ ಹೀಗೆ ಕಾಡಿಗೆ ಬಂದಾಗಲೂ ಅವರು ಕನಿಷ್ಠ ಒಂದಾದರೂ ಕೋಲು ಜೇನು ಕೀಳದೆ ಮನೆಗೆ ಮರಳುವುದು ಅಪರೂಪವೇ ಸರಿ. ಹಾಗೇ ಹೋಗುತ್ತಿರುವಾಗ- ಮನೆಯಿಂದ ಇನ್ನೂ ಒಂದೂವರೆ ಮೈಲಿಯಷ್ಟು ದೂರವೂ ಕಾಡಿನೊಳಗೆ ಬಂದಿರಲಿಲ್ಲ- ನಾಯಿಗಳೆಲ್ಲಾ ಒಮ್ಮೆಗೇ ಜಿಂಕೆಯೋ, ಕಾಡು ಹಂದಿಯೋ ಕಂಡಂತೆ ಉಸಿರುಕಟ್ಟಿಕೊಂಡು ಬೆನ್ನಟ್ಟಿದವು.

ಅವರ ಗುಂಪಿನಲ್ಲೇ ತುಸು ದೊಡ್ಡವನಾದ ರಮೇಶ್ ಕೈಯಲ್ಲಿದ್ದ ಬಂದೂಕು ಹಿಡಿದುಕೊಂಡೇ ನಾಯಿಗಳು ಹೋದ ದಿಕ್ಕಿನತ್ತ ದೌಡಾಯಿಸಿದ. ಲಂಟಾನದ ಮೆಳೆ, ಕಲ್ಲು-ಮುಳ್ಳು ಏನೊಂದನ್ನೂ ಲೆಕ್ಕಿಸದೆ ಓಡಿದ ಅವರ ದಾರಿಯನ್ನೇ ಉಳಿದ ಕೃಷ್ಣ, ಕೇಶವ, ಕಿರಣರೂ ಅನುಸರಿಸಿದರು. ಗುಂಪಿನಲ್ಲಿ ಕಿರಿಯವನೂ ಕಾಡಿನ ಅನುಭವವಾಗಲಿ, ಶಿಕಾರಿಯ ಸೂಕ್ಷ್ಮಗಳಾಗಲಿ ಅಷ್ಟೊಂದು ಅರಿಯದ ಶ್ರೀಧರ ಮಾತ್ರ ಅವರೆಲ್ಲಾ ಓಡುತ್ತಲೇ ಕಾಲು ನಡುಗುತ್ತಾ ಇನ್ನೇನು ಮಾಡಲು ಗತ್ಯಂತರವಿಲ್ಲ ಎಂಬಂತೆ ಅಣ್ಣಾ… ಎನ್ನುತ್ತಾ ಅವರನ್ನು ಹಿಂಬಾಲಿಸಿದ. ಹಾಗೆ ಓಡಿ ಸಾಕಷ್ಟು ದೂರ ಹೋದರೂ ನಾಯಿಗಳು ಮಾತ್ರ ನುಗ್ಗುತ್ತಲೇ ಇದ್ದವು. ಇದು ಜಿಂಕೆಯೇ ಇರಬೇಕು ಎಂದುಕೊಂಡ ರಮೇಶ ಹಿಂದಿನವರಿಗೆಲ್ಲಾ ಏಯ್ ಬರ್ರೋ ಬೇಗ, ಜಿಂಕೆ ಕಣ್ರೋ ಎಂದು ಹುರಿದುಂಬಿಸುತ್ತಿದ್ದ. ಆದರೂ ಹಿಂದಿದ್ದವರಿಗೆ ಭಯ, ಅದು ಜಿಂಕೆಯೇ ಎಂದು ನೋಡಿದವರಾರು, ಕಾಡು ಹಂದಿಯಾಗಿದ್ದರೆ, ನಾಯಿಗಳ ಮೇಲಿನ ಸಿಟ್ಟಿಗೆ ನಮ್ಮ ಮೇಲೆ ನುಗ್ಗಿದರೆ! ಯೋಚಿಸುತ್ತಲೇ ಒಬ್ಬೊಬ್ಬರೇ ಬೆವರ ತೊಡಗಿದರು. ಹಾಗಂತ ನಿಂತುಕೊಳ್ಳುವ ಹಾಗೂ ಇಲ್ಲ, ಕಾಡು ಬೇರೆ, ಆ ಪ್ರಾಣಿ ಎತ್ತ ಹೋಗಿ, ಎತ್ತಲಿಂದ ಬರುತ್ತದೆಯೋ ಹೇಗೆ ಗೊತ್ತು? ರಮೇಶನ ಹಿಂದೆ ಓಡಿದರೆ ಕನಿಷ್ಠ ಅವನ ಬಳಿ ಬಂದೂಕಾದರೂ ಇದೆ. ಗುಂಡು ಹಾರಿಸಿಯಾದರೂ ಹೆದರಿಸಬಹುದು ಎಂದುಕೊಂಡು ಕುರುಡಾಗಿ ಅವನು ಹೋದ ಕಡೆ ಓಡತೊಡಗಿದರು. ಅವರ ಸ್ಥಿತಿ ಹೇಗಾಗಿತ್ತೆಂದರೆ, ಶಿಕಾರಿ ಮಾಡುವುದಿರಲಿ, ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಮನೆ ಸೇರಿದರೆ ಸಾಕಪ್ಪಾ ಎನ್ನುವಂತಾಗಿತ್ತು.

ಒಂದಷ್ಟು ದೂರದಲ್ಲಿ ಒಂದು ಎತ್ತಿನ ಗಾಡಿಯ ರಸ್ತೆ ಕಂಡಿತು. ಸರಿ, ರಸ್ತೆಯಾದರೂ ಸಿಗ್ತು ಎಂದುಕೊಂಡು ಧೈರ್ಯ ತಂದುಕೊಂಡು ತುಸು ನಿಧಾನಿಸಿದರು. ನಾಯಿಗಳು ಅಲ್ಲೇ ಸಮೀಪದ ಪೊದೆಯ ಬಳಿ ನಿಂತುಬಿಟ್ಟವು! ಓಹೋ ಆ ಪೊದೆಯಲ್ಲೇ ಇರಬೇಕು ಜಿಂಕೆ ಎಂದುಕೊಂಡು ಅವರು ನಿಧಾನಕ್ಕೆ ಬಳಿ ಸಾರಿದರು! ಇಲ್ಲ? ನಾಯಿಗಳು ಪೊದೆಯ ಬಳಿ ನಿಂತಿದ್ದರೂ ನೋಡುತ್ತಿದ್ದುದು ಮಾತ್ರ ಆ ದಾರಿಯ ಆಚೆ ಬದಿಯ ಕಡೆಗೆ! ಸರಿ ಎಂದು ತುಸು ಮುಂದೆ ಬಾಗಿ ರಸ್ತೆಯ ತಿರುವಿನ ಆಚೆ ಬದಿಗೆ ಕಣ್ಣು ಹಾಯಿಸಿದ ರಮೇಶ ಒಂದೇ ಸಮನೆ ಬಿಳಿಚಿಕೊಂಡು “ಓ… ಓಡ್ರೋ ಕಾಡುಕೋಣ….” ಎಂದು ಎದ್ನೋಬಿದ್ನೋ ಎಂದು ಹಿಂತಿರುಗಿ ಓಟಕಿತ್ತ!!

ಮೊದಲೇ ಅಂಜಿ ಕೈಕಾಲು ನಡುಕದಿಂದ ಕಂಗೆಟ್ಟು ಹೋಗಿದ್ದ ಇತರ ನಾಲ್ವರು ‘ಶಿಕಾರಿಧಾರ’ರಿಗೆ ಜಂಘಾಬಲವೇ ಉಡುಗಿ ಹೋಯಿತು. ಅವರಿಗೆ ಏನಾಗುತ್ತಿದೆ ಎಂಬುದು ಅರಿವಿಗೆ ಬರುವ ಮುನ್ನವೇ ಬೆನ್ನು ತಿರುಗಿಸಿ ಹತ್ತಾರು ಗಜ ದೂರಕ್ಕೆ ಬಂದಿದ್ದರು. ಸಾಕಷ್ಟು ದೂರಕ್ಕೆ ಬಂದ ನಂತರ ಒಮ್ಮೆ ಹಿಂತಿರುಗಿ ನೋಡಿ ‘ಅದು’ ಬಂದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ‘ಮರ ಹತ್ರೋ ಮರ ಹತ್ರೋ’ ಎಂದು ಒಬ್ಬರಿಗೊಬ್ಬರು ಆಪತ್ಕಾಲದ ಉಪಾಯ ನೆನಪಿಸಿಕೊಂಡು ಹತ್ತಿರದಲ್ಲೇ ಇದ್ದ ಚಿಕ್ಕ ಆಲದ ಮರವೇರಿದರು. ರಮೇಶ, ಕೃಷ್ಣ, ಕೇಶವ ಮತ್ತು ಕಿರಣ ಏನೋ ಮರ ಹತ್ತಿಯೇ ಬಿಟ್ಟರು. ಮರ ಹತ್ತುವುದು ಅಭ್ಯಾಸವಿರದ ಶ್ರೀಧರ ಮಾತ್ರ ಅಳುವುದೊಂದು ಬಾಕಿ. “ಏಯ್ ನನ್ನೂ ಕರೆದುಕೊಳ್ರೋ” ಎನ್ನುತ್ತಾ ಬಿಳಿಲು ಹಿಡಿದುಕೊಂಡು ನೇತಾಡುತ್ತಿದ್ದ, ಕೈ ಜಾರುತ್ತಲೇ ನೆಲಕ್ಕೆ ದೊಪ್ಪನೆ ಬೀಳುವುದು, ಮತ್ತೆ ಬಿಳಿಲು ಹಿಡಿದು ಗುದ್ದಾಡುವುದು… ಅಷ್ಟರಲ್ಲಿ ರಮೇಶ ನಿಧಾನಕ್ಕೆ ಮರದ ಬೊಡ್ಡೆಯ ಬಳಿ ಬಂದು ಅಂತೂ ಕೈ ನೀಡಿ ಶ್ರೀಧರನನ್ನು ಮೇಲಕ್ಕೆ ಎಳೆದುಕೊಂಡ.

ಎಲ್ಲರೂ ಮರವೇರಿದ ಮೇಲೆ ನಾಯಿಗಳನ್ನು ಕರೆದರು. ಅವು ಒಂದೆರೆಡು ಹೆಜ್ಜೆ ಹಿಂದಕ್ಕೆ ಬರುವುದು ಮತ್ತೆ ಗುರ್ ಎನ್ನುತ್ತಾ ಆ ಪ್ರಾಣಿಯತ್ತ ನುಗ್ಗುವುದು, ಅತ್ತ ಹೋಗಿ ಎರಗಲೂ ಆಗದೆ, ಇತ್ತ ಬಿಟ್ಟು ಬರಲೂ ಆಗದೆ ನಾಯಿಗಳೂ ವಿಚಿತ್ರ ಸಂದಿಗ್ಧತೆಯಲ್ಲಿದ್ದಂತಿತ್ತು. ಮುಂದಕ್ಕೆ ಹೋಗಲೂ ಧೈರ್ಯವಿಲ್ಲದೆ, ಹಿಂದಕ್ಕೂ ಬರಲೂ ಆಗದೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ ಜೋರಾಗಿ ಕೂಗುವುದು, ಮತ್ತೆ ವಾಪಸ್ ಕುಯ್ಯುಂಗುಟ್ಟುಕೊಂಡು ಚಡಪಡಿಸುವುದು ಮಾಡುತ್ತಿದ್ದವು.

ಕೃಷ್ಣ “ಅದನ್ನು ನೀನು ನೋಡಿದ್ಯಾ…. ಕಾಡುಕೋಣನೇನಾ…” ಎಂದ. “ನಿಜವಾಗ್ಲೂ ಕಾಡುಕೋಣನೇನೋ…” ಎಂದ ಕಿರಣ. ಎಂದೂ ತಾವು ಹುಡುಗರೇ ಸೇರಿ ಶಿಕಾರಿಗೆ ಬಂದಿರದಿದ್ದ ಅವರಿಗೆ ಅಂದು ಮೊದಲ ಬಾರಿ ಮನೆಯವರ ಕಣ್ಣು ತಪ್ಪಿಸಿ ಬಂದೂಕು ಹಿಡಿದುಕೊಂಡು ಬಂದು ಸಿಕ್ಕಿಬಿದ್ದಿವೆಲ್ಲಾ ಎಂಬ ದಿಗಿಲು ಶುರುವಾಗಿತ್ತು. ರಮೇಶ “ಹ್ಞೂಂ ಕಣ್ರೋ ಅದು ಕಾಡುಕೋಣನೇ… ಕೊಂಬು ಹೆಂಗಿದ್ವು ಗೊತ್ತಾ… ಒಂಟಿ ಕಣ್ರೋ, ಗಮಯ… ಮೈಯೆಲ್ಲಾ ಎಣ್ಣೆ ಹಾಕಿದಂಗೆ ಹೊಳೀತಿತ್ತು…. ” ಎಂದು ತಾನು ಕಂಡ ಪ್ರಾಣಿ ಕಾಡುಕೋಣವೇ ಎಂದು ವಿವರಿಸಿದ. “ಹಾಗಾದರೆ ಏನು ಮಾಡೋದು… ಒಂಟಿ ಬೇರೆ ಅಂದ್ರೆ ಅದು ಗಾಯಗೊಂಡಿದ್ದೇ ಇರಬೇಕು. ಕೆಳಗೆ ಇಳಿದ್ರೆ ನಮ್ಮನ್ನು ಬಿಡಲ್ಲ…” ಎಂದು ಕೇಶವ ದಿಗಿಲಾದ. ಶ್ರೀಧರನ ಕತೆಯಂತೂ ಅಯೋಮಯ!

ಮರವೇರಿ ಕೂತು ಒಂದು ತಾಸಾಯಿತು. ನಾಯಿಗಳು ಮಾತ್ರ ಎಷ್ಟು ಕೂಗಿದರೂ ಬರಲೊಲ್ಲವು.. ಮತ್ತೂ ಅರ್ಧ ತಾಸು ಕಳೆಯಿತು… ಕೊನೆಗೆ ಇನ್ನೇನು ಮಾಡುವುದು ಕಾಡಿಗೆ ಬಿದಿರು ಬೊಂಬಿಗೋ, ಕಟ್ಟಿಗೆ ಕಡಿಯಲೋ ಬಂದವರು ಯಾರಾದರೂ ಇರಬಹುದು ಎಂದು ಜೋರಾಗಿ ಒಮ್ಮೆ ಕೂಗಿದ ರಮೇಶ. ಯಾರೂ ಓಗೊಡಲಿಲ್ಲ. ಮತ್ತೆ ಕೂಗಿದ… ಯಾರೋ ಕೂಗಿದಂತಾಯಿತು. ಮತ್ತೆ ಕೂಗಿದ. ಅತ್ತ ಕಡೆಯಿಂದ “ಯಾರೋ…” ಎಂಬ ಧ್ವನಿ ಕೇಳಿತು. ಜತೆಗೆ ಮತ್ತೊಂದು ಧ್ವನಿಯೂ ಮಾತನಾಡುವುದು ಕೇಳಿಸಿತು. ಅವರೆಡೂ ಧ್ವನಿಗಳು ಕರೆಯುತ್ತಲೇ ಇವರತ್ತ ಅದೇ ರಸ್ತೆ ಕೂಡಿ ಬರುತ್ತಿದ್ದವು. ನಂತರ ಹತ್ತಿರಕ್ಕೆ ಬಂದ ಅವರು ಹೇಳಿದ್ದು, “ಅಲ್ರೋ ಹುಚ್ಚು ಹುಡುಗರಾ ಅದು ಕಾಡುಕೋಣ ಅಲ್ರೋ…. ಇಲ್ಲೇ ಆಚೆ ದಿಬ್ಬದ ಮನೆಯ ಕೋಣ. ನಿಮ್ಮ ನಾಯಿ ಕೂಗಿದ್ದು, ಕೋಣನ್ನ ನೋಡಿ ಅಲ್ಲಾ,.. ಯಾವುದೋ ಓತಿನೋ, ಹಾವುರಾಣಿಯನ್ನೋ ಇರಬೇಕ್ರೋ” ಎಂದು!

ಭಯದಲ್ಲಿ ಏನು, ಎತ್ತ ಎಂದೂ ಪರಾಂಬರಿಸಿದ ಹುಡುಗರ ಮೊದಲ ಶಿಕಾರಿಯೇ ಹುಸಿಯಾಗಿತ್ತು! ಅಂತೂ ಮರವಿಳಿದು ನಿಧಾನಕ್ಕೆ ಎಲ್ಲರೂ ಮನೆಯ ಕಡೆ ಹೆಜ್ಜೆಹಾಕಿದರು!! ನಾಯಿಗಳ ಆಟಕ್ಕೆ ತಾವೇ ಶಿಕಾರಿಯಾದಂತೆ.

_thy-will-be-done.jpg

ಒಂಟಿ, ಒಬ್ಬೊಂಟಿ.

ಸುತ್ತೆಲ್ಲಾ; ಎದೆ ನಡುಗಿಸುವ ಸದ್ದು-

ಭರ್ರನೆ ಎರಗುವ ಬಸ್ಸು-ಕಾರು-ಸ್ಕೂಟರು,

ಸರ್ರನೆ ಮೇಲೇರಿ ಬರುವ ಚಕ್ರ ಪ್ರವಾಹ,

ಹೆಜ್ಜೆಯೂರಲೂ ಆಗದ ನಡುಗುವ ನೆಲ…

ನಡುವೆ ತೆವಳುವ ಒಂಟಿ ಜೀವ…

ಭಸ್ಮಮಾಡುವ ಪ್ರಖರ ಬೆಳಕು

ನಕ್ಷತ್ರಪುಂಜವೇ ಕಳಚಿದಂತೆ,

ಮೇಲೆ ಉರಿವ ಬೀದಿಗಳು,

ಬೆಳಕಿನ ಸುಳಿಯಲಿ ಮಂದ ನಡಿಗೆ,

ಕಣ್ಣ ಆಸರೆಯೂ ಕುರುಡು

ದಾರಿ ಸಾಗಲೇಬೇಕು, ಒಂಟಿ ಬೇರೆ…..

ಭೂಮಿ ಬಿರಿವ ಭೀತಿ,

ಬೆಚ್ಚಿ ಬೀಳಿಸುವ ಕೂಗು,

ಗುಡುಗು-ಸಿಡಿಲಿನ ಬೆದರಿಕೆ,

ಹನಿಯೊಡೆದರೆ ಹೊಳೆ ಬರುವ ಹೆದರಿಕೆ

ಇಂಚಿಂಚಾಗಿ ಸರಿಯುತಿದೆ

ಸದ್ದಿಲ್ಲದೆ ನುಗ್ಗುತಿದೆ ಏಕಾಂಗಿ…

ಕಿಕ್ಕಿರಿದ ಹೈಟೆಕ್ ರಸ್ತೆಯ

ನಡುವೆ ಶರವೇಗದ ಉರುಳು

ನಡುವೆ ಮಂದಗತಿ;

ಮೆಟ್ರೋ ಫ್ಲೈ-ಓವರ್ ಮೇಲೆ ಸಹ್ಯಾದ್ರಿ!

ಮೃದು ಚೆಲುವಿನ ಧ್ಯಾನ್ಯಸ್ಥ ನಡೆ…

ನಿಜದಂಗಳದಲ್ಲಿ ಬದುಕು

ಸಾವಿನ ಜೂಜಿಗಿಟ್ಟ ಕವಡೆ!

Older Posts »