ಕುಂದಾದ್ರಿಯಿಂದ ಕುಪ್ಪಳಿವರೆಗೆ…

September 3, 2009
ಕುಂದಾದ್ರಿಯ ಹಾದಿಯಲ್ಲಿ...

ಕುಂದಾದ್ರಿಯ ಹಾದಿಯಲ್ಲಿ...

ಮಳೆ ಮೋಹಕೆ ಮೈಯೊಡ್ಡಿ...

ಮಳೆ ಮೋಹಕೆ ಮೈಯೊಡ್ಡಿ...

ಆ ಮೋಡ ಬಾನಲ್ಲಿ ತೇಲಾಡುತಾ...

ಆ ಮೋಡ ಬಾನಲ್ಲಿ ತೇಲಾಡುತಾ...

ಕುಂದಾದ್ರಿಯ ಮೇಲಿಂದ ಮಾದಕ ನೋಟ

ಕುಂದಾದ್ರಿಯ ಮೇಲಿಂದ ಮಾದಕ ನೋಟ

ಹಸಿರು ಹೊನ್ನು...!

ಹಸಿರು ಹೊನ್ನು...!

ಮೊನ್ನೆ ನಾಲ್ಕು ದಿನ ಆಗುಂಬೆ, ಕುಂದಾದ್ರಿ, ಕೊಪ್ಪ, ಕುಪ್ಪಳಿ, ಚಿಬ್ಬಲುಗುಡ್ಡೆ ಸುತ್ತಾಡಿ ಬಂದೆ… ಅಲ್ಲಿನ ಕೆಲವು ಕ್ಲಿಕ್ಕುಗಳು ಈಗ ಇಲ್ಲಿವೆ.. ಎಂದಾದರೂ ಆ ಬಗ್ಗೆ ಬರೆಯುವೆ…. ಸದ್ಯಕ್ಕೆ ಚಿತ್ರ ನೋಡಿ… ಊಹಿಸಿ…!


ಅವನೆಂದರೆ ಸೂಜಿಗಲ್ಲು…

August 15, 2009

isp0802481

ಅವನಲ್ಲದೆ ದೇವರು

ಮತ್ತೊಬ್ಬನಿಲ್ಲವೆಂದೇ

ನಂಬಿದವರೆಂದರು:

ಅವನೆಂದರೆ ವಿಶ್ವರೂಪ!

ಅವನೇ ವಿಶಿಷ್ಟ, ಅವನಲ್ಲದ

ದೈವ ದೈವವೇ ಎಂದು

ಜರೆದವರೆಂದರು:

ಅವನೆಂದರೆ ಸರ್ವಶಕ್ತ!

ಅದೆಲ್ಲ, ದ್ವೈತ-

ಅದ್ವೈತ-

ವಿಶಿಷ್ಟಾದ್ವೈತದ ಮಾತಾಯಿತು…

ರಾಧೆಯಂಥ ಮುಗುದೆಗೆ

ಅವನು ದೇಹಗೊಳಲಿನ ಜೀವನಾದದ ಉಸಿರು…

ಯಶೋಧೆಯಂಥ ಅಮ್ಮಗೆ

ಅವನು ಬಾಯಲ್ಲೇ ಬ್ರಹ್ಮಾಂಡ ತೋರುವ ಮಹಾತುಂಟ…

ಯುದ್ಧ ಕಲಿ ಅರ್ಜುನಗೆ- ಶಪಥನಿಷ್ಠೆ ಕೃಷ್ಣೆಗೆ

ಅವನು ಜೀವ- ಸಖ…

ಪುಟದ ನಡುವಿನ ನವಿಲುಗರಿಯಲ್ಲೇ ಅವನ

ಕಾಣುವ ಪೋರಿಗೆ ಸೆಳೆವ ಸೂಜಿಗಲ್ಲು…

…  ಬಳಿ ಸುಳಿದವರಿಗೆಲ್ಲ

ಬಗೆ- ಬಗೆಯ ಬಾಂಧವ್ಯದ ಬಯಲು…

ಒಳ-ಬಗೆಗೆ ದಕ್ಕಷ್ಟು ಭಾವ-ಜೀವ,

ಏರುವೆತ್ತರದ ಹಂಬಲದ ಮಿಂಚು

ಈ ಗೊಲ್ಲರ ಹುಡುಗ…!


ಸಂತೆ ನೆರೆದರೂ ಗಂಟು ಸಿಗಲಿಲ್ಲ!

August 7, 2009

moonlight-leaf

ದೊಡ್ಡ ಗುಂಪಲ್ಲಿ ಬರುತ್ತಿರುವ ಸೂಚನೆ ನೀಡುತ್ತಲೇ ನಮ್ಮ ಕುತೂಹಲವನ್ನು ಸ್ಫೋಟಿಸುತ್ತಿದ್ದ ಅವುಗಳ ಆಗಮನ ಅಂತೂ ಆಯಿತು. ನಾನು, ಅಣ್ಣಪ್ಪಣ್ಣ ಇಬ್ಬರೂ ಬಾಗಿ- ಬಾಗಿ ಕತ್ತು ನೀಚಿ ನೋಡಿ ಕತ್ತು ನೋವು ಬರುವಂತಾಗಿಬಿಟ್ಟಿತ್ತು. ಆದರೆ, ಒಮ್ಮೆ ಅವುಗಳ ದಂಡು ಕಂಡು ಎಲ್ಲ ನೋವೂ, ನಿರಾಶೆಗಳೂ ದೂರಾಗಿ, ನಾಟಕದ ಪರದೆ ಹಿಂದಿನಿಂದ ಪಾತ್ರದಾರಿಗಳು ರಂಗ ಪ್ರವೇಶಿಸಿದಂತೆ ಒಂದೊಂದೇ ಪ್ರತ್ಯಕ್ಷವಾಗುತ್ತಲೂ, ನಾವು ಅವುಗಳನ್ನು ಎಣಿಸುತ್ತಾ, ಅವುಗಳ ಆಕಾರದ ಮೇಲೆ ದೊಡ್ಡವು, ಮರಿ ಎಂದು ಅಂದಾಜಿಸತೊಡಗಿದೆವು. ಸುಮಾರು ಅರ್ಧ ಗಂಟೆ ಕಳೆದ ಮೇಲೆ ಅವುಗಳ ರೈಲು ಬೋಗಿಯಂತಹ ದಂಡಿನ ಯಾತ್ರೆ ಮುಕ್ತಾಯವಾಯಿತು. ಕಡಿಮೆ ಎಂದರೂ 30-35 ಹಂದಿಗಳಿದ್ದವು! ಅದರಲ್ಲೂ ಕೆಲವು ದಡಿಯಾ, ಕೆಲವು ಕುಳ್ಳಗೆ ಅಗಲಕ್ಕೆ ಬೆಳೆದಿದ್ದವು… ಅದಕ್ಕಿಂತ ಆಶ್ಚರ್ಯವೆನಿಸಿದ್ದೆಂದರೆ, ಒಂದೆರಡು ಬೂದು- ಬಿಳಿ ಹಂದಿಗಳೂ ಇದ್ದದ್ದು! ಜೊತೆಗೆ ಒಂದು ಕಂದು ಬಣ್ಣದ್ದು! ಅಲ್ಲಿಯವರೆಗೆ ಹಂದಿಗಳೆಂದರೆ ಕಪ್ಪಗೆ ಇರುತ್ತವೆ ಎಂದುಕೊಂಡಿದ್ದ ನನಗೆ ಬಿಳಿ- ಕಂದು ಹಂದಿ ನೋಡಿ, ವಿಚಿತ್ರ ಎನಿಸಿತು. ಮರುಕ್ಚಣವೇ ಯಾವುದೋ ದೆವ್ವ ಬೇರೆ- ಬೇರೆ ಪ್ರಾಣಿಗಳ ರೂಪದಲ್ಲಿ ಬಂದು ನಮ್ಮೂರಿನ ಕೆನತ್ ಆಂಡರ್ಸನ್ ಸಹಚರನೊಬ್ಬನಿಗೆ ಕಾಡಿಸಿದ ಕತೆ ನೆನಪಾಯಿತು. ಅರೆ,.. ಹೌದಲ್ಲ, ಇವು ನಿಜವಾದ ಹಂದಿಗಳೇ ಅಲ್ಲವಿರಬಹುದು, ನಮ್ಮೂರಿನ ಕೆರೆ ಎಂದರೆ ಮೊದಲೇ ಭೂತ- ದೆವ್ವಗಳ ಕಾಯಂ ಅಡ್ಡೆ,.. ಎಂದು ನೆನಪಾಗುತ್ತಲೇ ಮೈ ಜುಮ್ಮೆಂದಿತು.

ಅತ್ತ ಹಂದಿಯ ಹಿಂಡಿನಲ್ಲಿದ್ದ ಮರಿಗಳು ಚಿನ್ನಾಟ ಆಡುತ್ತಿದ್ದರೆ, ದೊಡ್ಡವು ಕೂಡ ಪರಸ್ಪರ ಕಚ್ಚುತ್ತಾ, ಒಂದನ್ನು ಇನ್ನೊಂದು ತಿವಿಯುತ್ತಾ ಕೆರೆಯ ನೀರಿಗಿಳಿದವು. ದೊಡ್ಡವು ನೀರಿಗಿಳಿದರೆ, ಚಿಕ್ಕ ಮರಿಗಳು ಮಾತ್ರ ದಂಡೆಯಲ್ಲೇ ಗಡ್ಡೆಗಳಿಗಾಗಿ ಉತ್ತುತ್ತಿದ್ದವು. ಹಂದಿಗಳೆಂದರೆ ಯಾವ ತಮಾಷೆ- ಮೋಜು ಇಲ್ಲದೆ ತಲೆ ಕೆಳಗೆ ಹಾಕಿಕೊಂಡು ಮುಸುಗುಡುತ್ತಾ ಹೋಗುವ ನೀರಸ ಪ್ರಾಣಿಗಳೆಂದುಕೊಂಡಿದ್ದ ನನಗೆ ಅವೂ ಇಷ್ಟೊಂದು ಮೋಜು ಮಾಡುತ್ತವಲ್ಲ ಎಂದು ಗೊತ್ತಾಗಿದ್ದೇ ಆಗ! ನಾನು ಹೀಗೆ ಅವುಗಳ ಮೋಜು- ಮಜಾ ಸವಿಯುತ್ತಿದ್ದರೆ, ಅಣ್ಣಪ್ಪಣ್ಣನ ಕೋವಿ ಸಿಡಿಯುವ ತವಕದಲ್ಲಿ ಗುರಿ ಕಾದಿತ್ತು… ನಮ್ಮಿಂದ ಸುಮಾರು 300 ಅಡಿ ದೂರದಲ್ಲಿ ಅವುಗಳ ಗುಂಪಿದ್ದರಿಂದ ಇನ್ನೂ ಹತ್ತಿರಕ್ಕೆ ಬರಲಿ, ಅದರಲ್ಲೂ ಭಾರೀ ಗಾತ್ರದ್ದಾಗಿದ್ದ ಬಿಳಿ ಒಂಟಿಗ ಸಿಗುತ್ತಾ ಎಂದು ಅವನು ಗುರಿ ಹಿಡಿಯುವುದು, ಬದಲಿಸುವುದು, ಕಾಯುವುದು ಮಾಡುತ್ತಿದ್ದ. ಬೆಳದಿಂಗಳ ರಾತ್ರಿಯ ನೀರವತೆಯಲ್ಲಿ ಹಂದಿ ಹಿಂಡಿನ ಗದ್ದಲ ಸೇರಿ ಇಡೀ ಕೆರೆಯಂಗಳ ಸಂತೆಯಂತಾಗಿತ್ತು. ಮೂರು ಎಕರೆ ವಿಸ್ತೀರ್ಣದ ಕೆರೆಯಂಗಳದಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಯ ವರೆಗೂ ಈ ಹಿಂಡುಗಳೇ ಹರಡಿಬಿಟ್ಟಿದ್ದವು. ನೀರಲ್ಲಿ ಓಡುವುದು, ಒಂದನ್ನೊಂದು ಅಟ್ಟಿಸಿಕೊಂಡು ಕಚ್ಚಾಡುವುದು, ಕಿರ್ರೋ-ಪರ್ರೋ, ಗುರ್- ಗುಟುರ್ ಎನ್ನುತ್ತಾ ಗದ್ದಲದ ಪೈಪೋಟಿಯೇ ಅಲ್ಲಿ ನಡೆದಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಐದಾರು ಹಂದಿಗಳ ಮತ್ತೊಂದು ಗುಂಪು ಕೆರೆಯಂಗಳಕ್ಕೆ ಇಳಿಯಿತು. ಆ ಗುಂಪು ಇಳಿಯುತ್ತಲೇ ಈ ಗುಂಪಿನ ಕೆಲವು ನಾಯಕ ಹಂದಿಗಳು ಒಂದು ಗುಟುರು ಹಾಕಿ ತಾವಿದ್ದೇವೆ ಹುಷಾರ್ ಎಂಬಂತೆ ಸೂಚನೆ ಕೊಟ್ಟವು. ಅದು ಅರ್ಥವಾಯಿತು ಎಂಬಂತೆ ಬಂದ ಹೊಸ ಗುಂಪು ಈ ಬಿಗ್ ಫ್ಯಾಮಿಲಿ ಕಡೆ ಬರದೆ ತುಸು ದೂರದಲ್ಲೇ ತಮ್ಮ ಚಟುವಟಿಕೆ ಸೀಮಿತಗೊಳಿಸಿಕೊಂಡವು. ಇದನ್ನೆಲ್ಲಾ ನೋಡುತ್ತಾ ನನಗೆ ಇದೇನು ನಾನು ಕನಸು ಕಾಣುತ್ತಿದ್ದೇನೋ, ನಿಜವಾಗಿಯೂ ನಡೆಯುತ್ತಿದೆಯೋ ಎಂಬಂತಹ ಸ್ಥಿತಿ.

ಅದಕ್ಕೆ ಸರಿಯಾಗಿ, ಕೆರೆಯಂಗಳಕ್ಕೆ ಸದ್ದಿಲ್ಲದೆ ಇಳಿದ ಏಳೆಂಟು ಜಿಂಕೆಗಳಿದ್ದ ಗುಂಪು ಮತ್ತಷ್ಟು ಕುತೂಹಲ ಮೂಡಿಸಿತು. ಆ ಗುಂಪಲ್ಲಿ ಎರಡು ಹೋರಿಗಳಿದ್ದು, ಉದ್ದನೆ ಕೊಂಬುಗಳಿದ್ದವು. ಕೊಂಬಿನ ಹರೆಗಳನ್ನು ಬಳುಕಿಸುತ್ತಾ ಅವು ಮುಂದಾಳುಗಳಾಗಿ ನಡೆಯುತ್ತಿದ್ದರೆ, ಹಿಂದೆ ಮೂರು ಬೋಳಿ(ಹೆಣ್ಣು ಜಿಂಕೆ)ಗಳು ಹಿಂಬಾಲಿಸುತ್ತಿದ್ದವು. ಅವುಗಳಿಗೂ- ಹಂದಿಗಳಿಗೂ ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳಿದ್ದಂತೆ ಇರಲಿಲ್ಲ. ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು, ತಲೆ ಎತ್ತಿ ಒಮ್ಮೆ ಆಚೀಚೆ ಹಂದಿ ಹಿಂಡುಗಳ ಗಲಾಟೆಯನ್ನು ನೋಡಿ, ಗರುಕೆ ಹುಲ್ಲನ್ನು ನಿರ್ಭಯವಾಗಿ ಮೇಯತೊಡಗಿದವು. ಜಿಂಕೆಗಳ ಗುಂಪು ನಮ್ಮ ನೇರವಾಗಿ ಎದುರಿಗೇ ಮೇಯುತ್ತಿದ್ದವು, ಎಷ್ಟು ಸಮೀಪದಲ್ಲಿದ್ದವೆಂದರೆ, ಬೆಳದಿಂಗಳಲ್ಲಿ ಅವುಗಳ ಮೈಮೇಲಿನ ಚುಕ್ಕಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನನಗೋ ಜಿಂಕೆಗಳ ಕಂಡಿದ್ದೇ ಖುಷಿ. ಆದರೆ, ಅಣ್ಣನ ಬಂದೂಕು ಈಗ ಹಂದಿಯ ಕಡೆಯಿಂದ ಜಿಂಕೆಯೆಡೆಗೆ ತಿರುಗಿತ್ತು. ಆದರೆ, ಜಿಂಕೆಗಳು ಇದ್ದಕ್ಕಿಂತ ಒಮ್ಮೆ ಬೆದರಿ ಚದುರಿದವು. ನಮ್ಮನ್ನು ಗಮಿಸಿಬಿಟ್ಟಿರಬೇಕು ಎಂದು ನಾವಂದುಕೊಂಡು ಅಯ್ಯೋ ಇನ್ನು ಮುಗೀತು, ಇವು ಓಡುತ್ತವೆ, ಇವನ್ನು ಕಂಡು ಹಂದಿಗಳೂ ಓಡುತ್ತವೆ… ಇವತ್ತು ಬರಿ ಜಾಗರಣೆ ಅಷ್ಟೇ ಎಂದು ಅಣ್ಣಗೆ ಚಿಂತೆ. ನನಗೋ ಇನ್ನಷ್ಟು ಹೊತ್ತು ಇವುಗಳ ಆಟ ನೋವುವುದೂ ಮಿಸ್ ಆಯ್ತಲ್ಲ ಅಂತ ಬೇಸರ. ಥೂ… ಮಾರಾಯ… ಎಂದುಕೊಂಡು ಮತ್ತೆ ಮೌನ… ಅಷ್ಟ್ರರಲ್ಲಿ ಜಿಂಕೆಗಳು ನಮ್ಮತ್ತ ನೋಡದೆ, ಕಾಡಿನ ತುದಿ ಕಡೆ ನೋಡುತ್ತಾ ಬೆದರಿದಂತೆ ಕಂಡವು. ಹಾಗೇ ಜಿಂಕೆಗಳು ಬೆದರಿದಾಗ ಹೊಮ್ಮಿಸುವ ಎಚ್ಚರಿಕೆಯ ಸದ್ದನ್ನೂ ಹೊಮ್ಮಿಸಿದವು. ಅತ್ತ ಕಡೆ ಯಾವ ಪ್ರಾಣಿಯೂ ಕಾಣದೇ ಇದ್ದರೂ, ಯಾವುದೋ ಪ್ರಾಣಿ ದರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಿದ್ದ ಸದ್ದು ಕ್ಷೀಣವಾಗಿ ಕೇಳಿತು. ಅಣ್ಣ ಅದು ಯಾವುದಾದರೂ ಹುಲಿಯೋ- ಚಿರತೆಯೋ ಇರಬಹುದು, ಇಷ್ಟೊಂದು ಪ್ರಾಣಿಗಳು ಕೆರೆಯಂಗಳದಲ್ಲಿ ನಿತ್ಯ ನೆರೆಯುವ ಸೂಚನೆ ತಿಳಿದ ಅದು ಬೇಟೆಗೆ ಹೊಂಚುತ್ತಿರಬಹುದು ಎಂದುಕೊಂಡು ಮತ್ತಷ್ಟು ಚುರುಕಾದ. ಇದು ನಿರ್ಣಾಯಕ, ಈಗ ಬಿಟ್ಟರೆ, ಆ ಪ್ರಾಣಿ ಏನಾದರೂ ಈ ಯಾವುದಾದರೂ ಪ್ರಾಣಿಯ ಮೇಲೆ ದಾಳಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಗಿದಂತೆ, ಕೈಬೀಸಿಕೊಂಡು ಮನೆಗೆ ಹೋಗುವುದಷ್ಟೇ ಉಳಿಯುತ್ತದೆ ಎಂದುಕೊಂಡ ಆತ, ನನ್ನನ್ನೊಮ್ಮೆ ಕೇಳಿದ; “ನೋಡು, ಈಗ ಬಿಟ್ಟರೆ ಆಗಲ್ಲ, ದೊಡ್ಡದು ಸಣ್ಣದು ಅಂತ ಕಾಯೋಕಾಗಲ್ಲ, ಯಾವುದು ಹತ್ತಿರ ಸಿಕ್ಕುತ್ತೋ ಅದಕ್ಕೆ ಹೊಡೀತೀನಿ..” ಆಯ್ತ ಎಂದ.

ನಾನು,.. ಏನೂ ಹೇಳದೆ, ಎದುರಿನ ಜೀವ ಲೋಕದ ಅಚ್ಚರಿಗಳ ನಡುವೆ ಕಳೆದುಹೋದಂತಾಗಿದ್ದೆ. ಇರುವುದರಲ್ಲೇ ತುಸು ಹತ್ತಿರಕ್ಕೆ ಕಾಣಿಸುತ್ತಿದ್ದ ಜಿಂಕೆ ಹೋರಿಯೊಂದಕ್ಕೆ ಗುರಿ ಮಾಡುತ್ತಿರುವಷ್ಟರಲ್ಲೇ ಕಾಡಿನ ತುದಿಯತ್ತ ಹೋಗಿದ್ದ ಹಂದಿ ಮರಿಯೊಂದು ಚಿರ್ರೋ ಎಂದು ಕೂಗುತ್ತಾ ಕೆರೆಯ ನೀರಿನತ್ತ ನುಗ್ಗಿಬಂತು. ಅಷ್ಟೇ.. ಸಾಕಾಯ್ತು ಇಡೀ ಕೆರೆಯನ್ನೇ ಒಮ್ಮೆ ಹಿಡಿದು ಎತ್ತಿ ಕೊಡವಿದಂತೆ ಝರರ್ರರ್ರ… ಸದ್ದಾಯಿತು. ನೀರಿಗಿಳಿದ, ದಡದಲ್ಲಿದ್ದ ಜಿಂಕೆ- ಹಂದಿಗಳೆಲ್ಲಾ ಹಂದಿ ಮರಿ ಬೆದರಿದ ದಿಕ್ಕಿನ ವಿರುದ್ಧ ದಿಕ್ಕಿನತ್ತಾ ಭರ್ರನೆ ನುಗ್ಗಿದವು. ಕೆಲ ಕ್ಷಣದ ಬಳಿಕ ಕೆಲವು ಹಂದಿಗಳು ಮತ್ತೊಂದು ಬದಿಯಲ್ಲಿ ಮತ್ತೆ ನೀರಿಗಿಳಿದವು. ಆದರೆ, ಜಿಂಕೆ ಹಿಂಡು ಮಾತ್ರ ಪರಾರಿಯಾಯಿತು. ಆದರೆ, ಈಗ ಹಂದಿಗಳಿರುವ ಜಾಗ ನಮ್ಮಿಂದ ತೀರಾ ದೂರ. ಇನ್ನೇನು ಮಾಡುವುದು ಸಾಧ್ಯವಿಲ್ಲ ಎಂದುಕೊಂಡು ನಾವು ಮರಸು ಬಿಟ್ಟು ನಿಧಾನಕ್ಕೆ ಕೆಳಗಿಳಿದು ಕೆರೆಯ ದಂಡೆಯ ಆಚೆ ಬದಿಯಿಂದ ಅರ್ಧ ಸುತ್ತು ಹಾಕಿ ಬಂದು ಈಗ ಹಂದಿಗಳಿರುವ ಕಡೆ ಸಾಗಲು ಹೆಜ್ಜೆ ಹಾಕಿದೆವು. ಕೆರೆಯ ಏರಿಯ ಕೆಳಗಿನ ಗದ್ದೆ ಬಯಲಿಗೆ ಇಳಿಯುತ್ತಿದ್ದಂತೆ ಅಲ್ಲೂ ಮೂರು ಹಂದಿಗಳು ನಮ್ಮ ಸುಳಿವರಿತು ಪೇರಿ ಕಿತ್ತವು. ನನಗೆ ಇದೇನಿದು ಇವತ್ತು ಎಲ್ಲಿ ಹೋದರೂ ಇಷ್ಟೊಂದು ಪ್ರಾಣಿಗಳು ಕಾಣುತ್ತಿವೆಯಲ್ಲ ಎಂಬ ಅಚ್ಚರಿ… ಈ ಪ್ರಾಣಿಗಳ ಆಟ, ಜಿಂಕೆಗಳ ವಿಹಾರ, ಹಂದಿಗಳ ಗದ್ದಲ, ಇದೀಗ ಮತ್ತೆ ಮೂರು ಹಂದಿಗಳು ಓಡಿದ್ದು,.. ಎಲ್ಲಾ ಸೇರಿ ನಾನು ಯಾವುದೋ ಪ್ರಾಣಿಗಳ ರಾಜ್ಯದಲ್ಲಿರುವಂತೆ ನನಗೆ ಅನಿಸತೊಡಗಿತ್ತು. ಶಾಲೆಯಲ್ಲಿ ಆನಂದಪುರಂ ಟೆಂಟಿಗೆ ಕರೆದುಕೊಂಡು ಹೋಗಿ ತೋರಿಸಿದ್ದ ಪ್ರಾಣಿಗಳ ಸಿನೆಮಾದಂತೆಯೇ ಇಲ್ಲಿ ಇಲ್ಲವೂ ನಡೆಯುತ್ತಿರುವ ನೆನಪು ನನಗೆ..!

ಗದ್ದೆ ದಾಟಿ ಆಚೆ ಬದಿಯಿಂದ (ನಾವು ಮೊದಲು ಕೂತ ಜಾಗಕ್ಕೆ ಎದುರು ಭಾಗದಲ್ಲಿ ಈಗ ನಾವಿದ್ದೆವು) ಹಂದಿಗಳನ್ನು ಸಮೀಪಿಸುತ್ತಿದ್ದೆವು. ಅಣ್ಣಪ್ಪಣ್ಣ ಮುಂದೆ, ನಾನು ಆತನ ಹಿಂದೆ,.. ನನ್ನ ಕೈಯಲ್ಲಿ ಬಂದೂಕಿನ ಮದ್ದುಗುಂಡುಗಳ ಪುಟ್ಟ ಚೀಲ ಮತ್ತು ಕತ್ತಿ,… ಆತನ ಕೈಯಲ್ಲಿ ಬರೋಬ್ಬರಿ ನಾಲ್ಕು ಗುಂಟುಗಳನ್ನು ಹೊತ್ತ ಈಡುಗೋವಿ…! ಒಂದೇ ಒಂದು ಕಡ್ಡಿ ಮುರಿದ ಸದ್ದಾದರೂ ಹಂದಿಗಳು ನಮಗೆ ಚಳ್ಳೇ ಹಣ್ಣು ತಿನ್ನಿಸುವುದು ಗ್ಯಾರಂಟಿ. ಹಾಗಾಗಿ ಸದ್ದಾಗದಂತೆ, ಸರಸರನೆ ಹಜ್ಜೆ ಹಾಕುತ್ತಾ ಆತ ನಡೆಯುತ್ತಲೇ ಇದ್ದ. ನನಗೆ ಆ ಜಾಗವೆಲ್ಲ ಅಷ್ಟೊಂದು ಪರಿಚಯವಿರಲಿಲ್ಲ, ಬೆಳದಿಂಗಳಿದ್ದರೂ ಗಿಡಮರಗಳ ನೆರಳು, ಮುಳ್ಳು- ಬೊಡ್ಡೆಗಳ ದಾರಿ,.. ಆದರೆ, ಆಗ ಕಾಲಿಗೆ ಮುಳ್ಳು ನಾಟಿದರೂ ನಿಲ್ಲುವಂತಿರಲಿಲ್ಲ… ಹಾಗೆ ನೂರು ಅಡಿ ಕ್ರಮಿಸುತ್ತಲೇ ಅವ ನಿಲ್ಲುವಂತೆ ನನಗೆ ಸನ್ನೆ ಮಾಡಿದ. ನಾನು ನಿಂತೆ.. ಆತ ಗುರಿ ಹಿಡಿದುಕೊಂಡು ನಿಧಾನಕ್ಕೆ ಕೂತುಕೊಂಡೇ ಮುಂದೆ ಸರಿಯುತ್ತಿದ್ದ… ಕೆರೆಯಲ್ಲಿ ತಾವರೆ ಗಡ್ಡೆ ಕೀಳುತ್ತಿದ್ದ ಒಂಟಿಗ ಹಂದಿ ಆತನ ಗುರಿ! ಇನ್ನೇನು ಆತನ ಬಂದೂಕಿನ ಕುದುರೆ ಅದುಮಬೇಕು,… ಅನ್ನುವಷ್ಟರಲ್ಲಿ ಹಿಂದಿನಿಂದ ದೊಪ್ಪನೆ ಸದ್ದಾಯಿತು! ಹಂದಿ ಹಾರಿ ಜಿಗಿದು ಓಡಿದವು…. ಬಂದೂಕಿನ ಕುದುರೆಯನ್ನೇನೋ ಅದುಮಿದ… ಗುಂಡೂ ಸಿಡಿಯಿತು. ಆದರೆ, ಬಡಿದದ್ದು ಮಾತ್ರ ಹಂದಿಗಲ್ಲ…! ಎದುರಿನ ಮರಕ್ಕೋ, ಕಲ್ಲಾರೆಯ ಅಂಚಿಗೋ ಬಡಿದಿರಲೂ ಬಹುದು…!!

ಏಕೆಂದರೆ, ಗುರಿ ಇಟ್ಟು ಅವನು ಇನ್ನೇನು ಗುಂಡು ಹಾರಿಸುತ್ತಾನೆ ಎನ್ನುವಷ್ಟರಲ್ಲಿ ನನಗೆ ನನ್ನದೇ ಕಲ್ಪನೆಯಲ್ಲಿ ಬೇರೆಯದೇ ಘಟನೆಗಳು ನಡೆಯತೊಡಗಿದ್ದವು; ಅವನು ಗುಂಡು ಹಾರಿಸುವುದು,… ಅದು ಹಂದಿಯನ್ನು ಸಂಪೂರ್ಣ ಸಾಯಿಸದೇ ಅರೆಜೀವ ಮಾಡಿಬಿಡುವುದು, ಅದು ಗಾಯಗೊಂಡು ನಮ್ಮತ್ತ ನುಗ್ಗುವುದು, ಆಗ,..!? ಅವನ ಕೈಯಲ್ಲಿ ಬಂದೂಕಿದೆ,.. ಅವನೇನೋ ಪಾರಾಗುತ್ತಾನೆ.. ನಾನು? ನನ್ನ ಕೈಯಲ್ಲಿ ಏನಿದೆ? ಬರಿ ಒಂದು ಕತ್ತಿ, ಹಂದಿಯೇನಾದರೂ ನೇರವಾಗಿ ನುಗ್ಗಿದರೆ, ಅವನು ತಪ್ಪಸಿಕೊಂಡು ನಾನು ಅದರ ಬಾಯಿಗೆ ಸಿಗುವುದು ಗ್ಯಾರಂಟಿ… ಅಯ್ಯಪ್ಪ, ಮೊದಲೇ ನನಗೆ ಹಂದಿಯೆಂದರೆ ಭಯ,.. ಸರಿ, ನಿಧಾನಕ್ಕೆ ಗುಂಡು ಹಾರುವ ಮೊದಲೇ ಹತ್ತಿರದಲ್ಲಿದ್ದ ನೇರಲೇ ಮರ ಏರಿ ಬಿಡುವ ಎಂದುಕೊಂಡು ನಾನು ಅವನಿಗೆ ಗೊತ್ತಾಗದಂತೆ ಮರವೇರತೊಡತೊಡಗಿದೆ. ಇನ್ನೇನು ಮೇಲಿನ ಹರೆಯನ್ನು ಹತ್ತಬೇಕು,.. ಅಷ್ಟರಲ್ಲಿ ಕಾಲು ಜಾರಿತು… ದೊಪ್ಪನೆ ಕೆಳಗೆ ಬಿದ್ದೆ!!!

ನಾನು ದೊಪ್ಪನೆ ಬಿದ್ದ ಸದ್ದು ಕೇಳಿ ಅವನೂ ಭಯಬಿದ್ದು, ಅಚಾನಕ್ಕಾಗಿ ಬಂದೂಕಿನ ಕುದುರೆ ಅದುಮಿಬಿಟ್ಟಿದ್ದ! ಗುಂಡು ಗುರಿ ತಪ್ಪಿತ್ತು,.. ಹಂದಿ ಸಲೀಸಾಗಿ ಮಾಯವಾಯಿತು,… ಆಮೇಲಿನದ್ದೇನಿದ್ದರೂ ವಾಚಾಮಗೋಚರ ಶಾಪ… ಇನ್ನೆಂದೂ ನೀನು ನನ್ನೊಂದಿಗೆ ಬರಬೇಡ ಎಂಬ ಕಟ್ಟಾಜ್ಞೆ ಕೇಳಿಸಿಕೊಂಡು ಇಳಿರಾತ್ರಿಯ ಹೊತ್ತಲ್ಲಿ ಮನೆ ಹಾದಿ ಹಿಡಿದೆ. ಮನೆ ತಲುಪುವವರೆಗೂ ಅಣ್ಣಪ್ಪಣ್ಣನ ಸಿಟ್ಟು, ಶಾಪ ಮುಗಿದಿರಲಿಲ್ಲ…


(ಮೊದಲರ್ಧ ಬರೆದು ತುಂಬಾ ದಿನಗಳ ನಂತರ ಈ ಭಾಗ ಸೇರಿಸಿದ್ದೇನೆ. ಈ ದೀರ್ಘ ವಿಳಂಬಕ್ಕೆ ಕ್ಷಮೆ ಇರಲಿ, ನಾನೀಗ ನಮ್ಮೂರು ಸಂಪಳ್ಳಿಗೆ ಹತ್ತಿರದ ಶಿರಾಳಕೊಪ್ಪಕ್ಕೆ ಸ್ಥಳಾಂತರಗೊಂಡಿರುವುದರಿಂದ ಆ ಬ್ಯುಸಿಯಲ್ಲಿ ಬರವಣಿಗೆ ಮಾಡಲಾಗಿರಲಿಲ್ಲ,.. ಇನ್ನು ಯಥಾ ಪ್ರಕಾರ ಬರಹ ಮುಂದುವರಿಯಲಿದೆ,.. ಸೋಮಾರಿತನ ಬ್ರೇಕ್ ಹಾಕದಿದ್ದರೆ,.. ಇನ್ನು ನಿರಂತರ…)


ರೋಚಕ ರಾತ್ರಿಯ ಬೇಟ

June 17, 2009

12

 

 

 

 

 

 

 ಮೊನ್ನೆ ಊರಿಗೆ ಹೋದಾಗ ನಮ್ಮ ಮನೆ ಪಕ್ಕದ ಕೆರೆ ದುರಸ್ತಿ ಆಗಿ, ಹೂಳೆತ್ತಿ ಅಂತಿಮವಾಗಿ ಮೋರಿ ಕಟ್ಟುತ್ತಿದ್ದರು. ನೋಡೋಣ ಕೆಲಸ ಹೇಗೆ ಮಾಡಿದ್ದಾರೆ ಎಂದುಕೊಂಡು ಹೋದರೆ, ಬಿಡುಗಡೆಯಾದ ಹಣದಲ್ಲಿ ಅರ್ಧ ಕೂಡ ಕರ್ಚಾಗಿಲ್ಲ ಎಂಬುದು ಮೇಲ್ನೋಟಕ್ಕೇ ಗೊತ್ತಾಯಿತು. ರಾಜಕಾರಣಿಗಳ ಕುಮ್ಮಕ್ಕಿನ ಕಥೆ ಕೇಳಿಸಿಕೊಳ್ಳುತ್ತ ಮುಂದೆ ಹೋದಂತೆ ಕೆರೆಯ ಅಂಗಳದ ಸುತ್ತ ಹೂಳೆತ್ತಿದ ಮಣ್ಣನ್ನು ಕಟ್ಟೆ ಕಟ್ಟಿ, ಕಂದಕ ತೋಡಿರುವುದು ನೋಡಿ ಆಶ್ಚರ್ಯವಾಯ್ತು. ಅರೆ ಕೆರೆ ಇರುವುದೇ ಮನುಷ್ಯರೂ ಸೇರಿ ಎಲ್ಲರೂ ಬಳಸಲು, ಎಲ್ಲರೂ ಅಂದ್ರೆ ಅದರಲ್ಲಿ ಜಾನುವಾರು, ಕಾಡು ಪ್ರಾಣಿಗಳೂ ಸೇರುತ್ತವೆ. ಅದರಲ್ಲೂ ನಮ್ಮ ಈ ಕರೆ ಇರುವುದೇ ಕಾಡಿನ ನಡುವೆ, ಹಾಗಿರುವಾಗ ಅಲ್ಲಿಗೆ ಕಾಡಿನ ಜಿಂಕೆ, ಕಾಡುಕುರಿ, ಸೀಳುನಾಯಿ, ಕೆಲವೊಮ್ಮೆ ಕರಡಿ, ಮೊಲ, ಹಂದಿ, ಕಾಡುಕುರಿ,.. ಹೀಗೆ ಸಕಲ ಜೀವಜಂತುಗಳೂ ನೀರಿನ ದಾಹ ತೀರಿಸಿಕೊಳ್ಳಲು ಬರುವುದು ವಾಡಿಕೆ. ಬೇಸಿಗೆಯಲ್ಲಂತೂ ಸುತ್ತಲ ಹತ್ತಾರು ಮೈಲಿ ದೂರದಲ್ಲಿ ಈ ಕೆರೆಯೊಂದನ್ನು ಬಿಟ್ಟು ಇನ್ನೆಲ್ಲೂ ಕಾಡುಪ್ರಾಣಿಗಳಿಗೆ ನೀರೇ ಸಿಗದು. ಹಾಗಿರುವಾಗ ಹೀಗೆ ಕಂದಕ ತೆಗೆದು ಕಟ್ಟೆ ಕಟ್ಟಿದರೆ ಕಾಡುಪ್ರಾಣಿಗಳು, ಜಾನುವಾರುಗಳ ಗತಿ ಏನು ಯೋಚಿಸಿದೆ….

ಕಾಡುಪ್ರಾಣಿಗಳು ನೀರು ಕುಡಿಯಲು ಕೆರೆಗೆ ಬರುವುದನ್ನು ನೆನೆದು 20 ವರ್ಷದ ಹಿಂದಿನ ಒಂದು ರೋಚಕ ರಾತ್ರಿಯ ನೆನಪು ಬಿಚ್ಚಿಕೊಳ್ಳತೊಡಗಿತು….

ಆಗ ನಾನಿನ್ನೂ ಆರನೇ ಕ್ಲಾಸಲ್ಲಿದ್ದೆ ಅನ್ನಿಸುತ್ತೆ,.. ಅಜ್ಜಿ ಮನೆಯಲ್ಲಿದ್ದು ಓದುತ್ತಿದ್ದವನಿಗೆ ಬೇಸಿಗೆ ರಜೆ ಎಂದರೆ ಊರಿಗೆ ಹೋಗಿ ಕಾಡುಸುತ್ತುತ್ತಾ, ಹಣ್ಣು- ಜೇನು- ಕಾಡಿನ ಹಕ್ಕಿಗಳ ಮೊಟ್ಟೆ ಬೇಯಿಸಿ ತಿನ್ನುತ್ತಾ ಕಾಲ ಕಳೆಯುವುದೇ ಮೋಜು.. ಒಂದು ದಿನ ಮಧ್ಯಾಹ್ನ ಕೆರೆಯ ತಾವರೆ ಬೀಜ ತಿನ್ನಲು ಹೋದಾಗ ಅಣ್ಣಪ್ಪಣ್ಣ ಜಿಂಕೆ- ಕಾಡು ಹಂದಿಗಳು ನೆಲವನ್ನು ಉತ್ತಿದ್ದು ಕಂಡು ರಾತ್ರಿ ಬಂದು ಕಾದರೆ ಒಳ್ಳೆ ಬೇಟೆ ಮಾಡಬಹುದು ಎಂದು ಐಡಿಯಾ ಮಾಡಿದ. ಸರಿ ನನಗೂ ಒಂದು ಕೈ ನೋಡಿಬಿಡೋಣ. ಈ ರಜೆಯಲ್ಲಾದರೂ ಈ ಮರಸು (ರಾತ್ರಿ ಬೇಟಿಯಾಡುವವರು ಮರದ ಮರೆಯಲ್ಲಿ ಎತ್ತರದಲ್ಲಿ ಹಲಗೆ ಬಳಸಿ ಮಾಡುವ ಜಾಗ) ಕಾಯುವ ಮಜಾ ಅನುಭವಿಸಿಬಿಡುವ ಎಂದುಕೊಂಡೆ. ಸಂಜೆಯಾಗುತ್ತಲೇ ಮತ್ತೆ ಕೆರೆಗೆ ಹೋಗಿ, ಕೆರೆಯಂಚಿನ ಪೊದೆ ನೋಡಿ ಅದಕ್ಕೆ ಎರಡು ಹಲಗೆ ಹಾಕಿ ಮಲಗಲು- ಕೂರಲು ಅನುಕೂಲವಾಗುಂತೆ ಜಾಗ ಮಾಡಿಬಂದೆವು. ರಾತ್ರಿ ಎಂಟು ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಹೆಡ್ ಬ್ಯಾಟರಿ ಕಟ್ಟಿಕೊಂಡು ಅಣ್ಣ ರೆಡಿಯಾದ. ನಾನು ಉಮೇದಿನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡು ಮದ್ದುಗುಂಡಿನ ಚೀಲ ಬಗಲಿಗೇರಿಸಿದೆ. ಅವ ಕೋವಿಗೆ ಈಡು(ಬುಲೆಟ್, ಮಸಿ ಎಲ್ಲವನ್ನೂ ತುಂಬಿ ಲೋಡ್ ಮಾಡುವುದು) ಮಾಡಿಕೊಂಡು ಹೆಗಲಿಗೇರಿಸಿದ. ಇಬ್ಬರೂ ಹೊರೆಟೆವು. ನಾನು, ದೊಡ್ಡಪ್ಪನ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವ ಅಲ್ಲೇ ಊಟ ಮಾಡಿ ಮರಸು ಕಾಯಲು ಹೊರಟಿದ್ದೆನಾದ್ದರಿಂದ ನಮ್ಮ ಮನೆಯವರಿಗೆ ನಾನು ಈ ಸಾಹಸಕ್ಕೆ ಹೋಗುತ್ತಿರುವುದು ಗೊತ್ತಾಗದಂತೆ ಗುಟ್ಟಾಗಿ ನೋಡಿಕೊಂಡಿದ್ದೆ. ಏಕೆಂದರೆ, ನಾನು ಇಂತಹದ್ದಕ್ಕೆಲ್ಲ ಹೋಗುವುದು ಗೊತ್ತಾಗಿದ್ದರೆ ಅಪ್ಪ ಸರಿಯಾಗಿ ಭಾರಿಸುವುದು ಗ್ಯಾರಂಟಿಯಾಗಿತ್ತು.

ಸರಿ ಇಬ್ಬರೂ ಕೆರೆಯ ಬಳಿ ಹೋದೆವು. ಕೆರೆಯ ದಾರಿಯಲ್ಲಿ ಅವನಿಗೆ ಇವತ್ತು ಎಷ್ಟು ಜಿಂಕೆ- ಹಂದಿಗಳು ಬರಬಹುದು, ಬಂದರೆ ಹೇಗೆ ಅವನ್ನು ಉಡಾಯಿಸಬೇಕು ಎಂಬ ಯೋಚನೆಯಾದರೆ, ನನಗೆ ಹಬ್ಬಿದ ಬೆಳದಿಂಗಳ ನಡುವೆ ರಾತ್ರಿ ಹೊತ್ತಲ್ಲಿ ಕೆರೆ ಅಂಚಲ್ಲಿ ಕೂತು ಪ್ರಾಣಿಗಳನ್ನು ಸಾಕ್ಷಾತ್ ನೋಡುವ, ಬೇಟೆಯನ್ನು ಕಣ್ಣಾರೆ ಕಾಣುವ ಖುಷಿ, ಒಳಗೊಳಗೇ ಸಣ್ಣ ಭಯ… ಏಕೆಂದರೆ, ನನಗೆ ಹಂದಿ ಎಂದರೆ ಭಯ. ಅದರಲ್ಲೂ ಅದಕ್ಕೆ ಗುಂಡು ಹೊಡೆಯುವವನ ಜೊತೆಯಲ್ಲೇ ಇರುವುದು, ರಾತ್ರಿ ಹೊತ್ತಲ್ಲಿ…! ಅಬ್ಬಾ… ಆದರೂ ಒಂಥರಾ ಕೆಟ್ಟ ಕುತೂಹಲ ಬೇರೆ. ಸರಿ ನಾವು ಸಿದ್ಧಪಡಿಸಿದ ಪೊದೆ ತಲುಪಿಯಾಯಿತು…

ಪೊದೆ ಬಳಿ ಹೋಗುತ್ತಲೇ ಒಮ್ಮೆ ಕಾಲಿನಿಂದ ನೆಲವನ್ನು ಬಡಿದು, ಏನಾದರೂ ಹಾವು- ಹಪ್ಪರೆ ಇದ್ದರೆ ದೂರ ಹೋಗಲಿ ಎಂದು ಸದ್ದುಮಾಡಿದೆವು. ನಂತರ ಪೊದೆ ಏರಿ ಕೂತಾಯಿತು. ಅದೂ ಸದ್ದು ಮಾಡದೆ ಕೂರಬೇಕು. ಮಾತಾಡುವುದು ಕೂಡ ಗುಸು-ಗುಸು ಅಷ್ಟೆ. ಸುಮ್ಮನೆ ಕೂತರೂ ಆ ಪೊದೆ ಬೇರೆ ಕಟ-ಕಟ ಎನ್ನುತ್ತಲೇ ಇರುತ್ತದೆ. ಗಾಳಿ ಬಂದರೂ ಸದ್ದು ಮಾಡುವ ಅದರ ಮೇಲೆ ಇಬ್ಬರು ಕೂತು ಅತ್ತ- ಇತ್ತ ನೋಡುತ್ತಾ ಹೊರಳಾಡುತ್ತಿದ್ದರೆ ಇನ್ನೆಷ್ಟು ಸದ್ದಾಗದೆ ಇರದೆ..? !

ಒಂದು ಗಂಟೆ ಕಳೆಯಿತು…. ಚಂದ್ರ ಬೆಳಗುತ್ತಾ ಮೇಲೇರುತ್ತಲೇ ಇದ್ದಾನೆ. ನಿಧಾನಕ್ಕೆ ಮನೆಯ ಕಡೆಯ ಮಾತು- ಹಾಡು, ಸದ್ದೆಲ್ಲಾ ಅಡಗಿತು,.. ಮಿಣುಕು ಹುಳದಂತೆ ಹೊಳೆಯುತ್ತಿದ್ದ ಬೆಳಕೂ ಆರಿದವು. ಕೊಟ್ಟಿಯ ದನಗಳ ಕೊರಳ ಘಂಟೆ, ಲೊಡಗ, ಲೊಟ್ಟೆಗಳ ಸದ್ದು, ದೂರದ ಕಬ್ಬಿನ ಗದ್ದೆಯ ಕಡೆಯಿಂದ ಗೂಬೆಯ ಗುಟುರು,… ಪಕ್ಕದ ಊರಿನ ಕಡೆಯಿಂದ ಏನೆಲ್ಲಾ ರೀಮಿಕ್ಸ್ ಸದ್ದು,.. ಬಹುದೂರದ ಸಾಗರ ರಸ್ತೆಯ ‘ಕೌಲುಮರದ ಉಬ್ಬಿ’ನ (ಅಪ್) ಏರನ್ನು ಏದುಸಿರು ಬಿಡುತ್ತಾ ಏರುತ್ತಿದ್ದ ಲಾರಿಗಳ ಗೋಳಿನ ದನಿ,… ಹೀಗೆ ಸದ್ದುಗಳ ಹಿನ್ನೆಲೆಯ ನಡುವೆ ನಮ್ಮ ಕಾಯುವಿಕೆ ಮುಂದುವರಿಯಿತು.

11 ಗಂಟೆ ಸುಮಾರಿಗೆ ನನಗೆ ನಿದ್ದೆ ಬರಲಾರಂಭಿಸಿತು. ಆದರೆ, ಏನುಮಾಡುವುದು ನಿದ್ದೆಯ ಮಂಪರಿದ್ದರೂ ಕಣ್ಣು ಮುಚ್ಚಿದರೆ ನಿದ್ದೆ ಹಾರುತ್ತದೆ… ಎಲ್ಲಾದರೂ ಜಿಂಕೆಗಳು ಬಂದರೆ? ನಾನು ಎಚ್ಚರಾಗುವುದರಲ್ಲಿ ಓಡಿಹೋದರೆ? ಎನ್ನೋದು ಒಂದು ಯೋಚನೆಯಷ್ಟೆ. ಅದಕ್ಕಿಂತ ಕಾಡುತ್ತಿದ್ದದ್ದು ಮಲಗಿದ್ದಾಗ ಎಲ್ಲಾದರೂ ಅಣ್ಣ ಪ್ರಾಣಿ ಎಂದು ಯಾವುದಕ್ಕಾದರೂ ಗುಂಡು ಹಾರಿಸಿ, ಅದು ಹುಲಿಯೋ, ಚಿರತೆಯೋ ಆಗಿದ್ದು, ಮೈಮೇಲೆ ಜಿಗಿದರೆ…!!

ಅಬ್ಬಬ್ಬ ಹೀಗೆ ನೆನಪಿಸಿಕೊಳ್ಳುತ್ತಲೇ ಸಣ್ಣಗೆ ಬೆವರತೊಡಗಿದ್ದೆ. ಈ ನಡುವೆ ರಾತ್ರಿ ಏರುತ್ತಿದ್ದಂತೆ ಊರಿನ ಕಡೆಯ ಸದ್ದುಗಳೆಲ್ಲಾ ಮಾಸುತ್ತಾ, ನಮ್ಮ ಸುತ್ತಮುತ್ತಲ ಕಾಡಿನ ನಡುವಿನ ಸದ್ದುಗಳು ರಂಗೇರತೊಡಗಿದ್ದವು. ಪಕ್ಕದ ಮರದಲ್ಲಿ ಕೂತಿದ್ದ ಯಾವುದೋ ಹಕ್ಕಿ ಜರುಗಿದ್ದಕ್ಕೆ ಮುರಿದ ಒಣ ಕಡ್ಡಿ ಬಿದ್ದ ಸದ್ದು, ಆಚೆ ಬದಿಯ ಪೊದೆಯಂಚಲ್ಲಿ ಕಪ್ಪೆ ನೀರಿಗೆ ಜಿಗಿದ ಸದ್ದು, ಮತ್ತೊಂದೆಡೆ ಕಾಡಿನ ಕಡೆಯಿಂದ ಬರುತ್ತಿದ್ದ ಹಂದಿಯ ಗುಟುರು,… ಹೀಗೆ ಸದ್ದುಗಳಿಗೆ ಕಿವಿಯಾಗಿ ನಿದ್ದೆ ಮಂಪರಿಗೆ ಜಾರುತ್ತಿರುವಾಗಲೇ… ನಾವಿದ್ದ ಪೊದೆಯಿಂದ ನಾಲ್ಕೇ ಮಾರು ದೂರದಲ್ಲಿ ಸಟ- ಸಟ ಸದ್ದಾಗತೊಡಗಿತು,…! ಅಣ್ಣ ನಿಧಾನಕ್ಕೆ ಅತ್ತ ಕೋವಿ ಗುರಿ ಮಾಡುತ್ತಾ ಏನದು ಎಂದು ಕಣ್ಣಲ್ಲೇ ಶೋಧಿಸತೊಡಗಿದ…. ಲಂಟಾನ ಪೊದೆ, ಎತ್ತರದ ಮರದ ನಡುವಿನ ಬೆಳದಿಂಗಳ ನೆರಳ ನಡುವೆ ಏನೋ ಸರಿದಾಡುತ್ತಿದೆ ಎಂಬುದಂತೂ ಗೋಚರ.. ಆದರೆ ಏನದು? .. ದನಕರು ಇದ್ದರೂ ಇರಬಹುದು, ನಾಯಿ ಇದ್ದರೂ ಇರಬಹುದು, ನರಿ, ಹಂದಿ, ಜಿಂಕೆ,… ಯಾವುದು?!…

ಇನ್ನೇನು ಅದು ಮತ್ತಷ್ಟು ಸಮೀಪಿಸುತ್ತಿದೆ ಎನ್ನುವಾಗ, ಅವ ಹಿಂದಕ್ಕೆ ಬಾಗಿ ಹೊರಳಿದ. ನಾವಿದ್ದ ಪೊದೆ ಲಟಕ್ಕೆಂದು ಸದ್ದು ಮಾಡಿತು,.. ಅತ್ತ ಡಬಾರ್ ಎಂದು ಸದ್ದಿನೊಂದಿಗೆ ಆ ಪ್ರಾಣಿ ದಿಕ್ಕೆಟ್ಟು ಓಡಿತು.. ಅದು ಓಡುವ ರಭಸ ಹೇಗಿತ್ತೆಂದರೆ.. ನಮ್ಮಿಂದು ಬಹುದೂರ ಸಾಗುವವರೆಗೆ ಅದರ ಕರಪುಟದ ಸದ್ದು, ಓಟಕ್ಕೆ ಮುರಿಯುತ್ತಿದ್ದ ಲಂಟಾನದ ಸದ್ದು ಕೇಳುತ್ತಲೇ ಇತ್ತು. … ಇಬ್ಬರೂ ಪೊದೆಯನ್ನು ಶಪಿಸುತ್ತಾ ಏನಿರಬಹುದು ಅದು ಎಂದು ಚರ್ಚಿಸತೊಡಗಿದೆವು… ಗುಸುಗುಸು ಎನ್ನುತ್ತಲೇ…!!

ನಮ್ಮ ಮಾತು ಮುಂದುವರಿದಿರುವಾಗಲೇ ನಮ್ಮ ಎದುರಿನ ಬದಿಯ ಕೆರೆಯಂಗಳದ ಕೋಡಿಯ ಕಡೆಯಿಂದ ದಡ-ಬಡ ಸದ್ದಾಗತೊಡಗಿತು. ಏನೋ ಪ್ರಾಣಿಗಳು ಬರುತ್ತಿವೆ.. ಎಂಬುದಂತೂ ನಿಜ.. ಯಾವುದಿರಬಹುದು. ಒಂದಂತೂ ಅಲ್ಲ, ನಾಲ್ಕಾರು ಪ್ರಾಣಿಗಳೇ ಬರುತ್ತಿರುವ ಸದ್ಗ್ದು, ಲಂಟಾನ ಮುರಿಯುತ್ತಿವೆ, ನೆಲ ಜಾಡಿಸುತ್ತಿವೆ,.. ಒಂದಕ್ಮೊಂದು ಗುದ್ದಾಡುತ್ತಿವೆ,… ಹಾಗೆಲ್ಲಾ ಮಾಡುತ್ತ ಕೆರೆಯತ್ತಲೇ ಹೆಜ್ಜೆ ಹಾಕುತ್ತಿವೆ…..

ಏನಿರಬಹುದು.. ಕುತೂಹಲ.. ನಿರೀಕ್ಷೆ,… ನನಗೋ ಸಣ್ಣ ಭಯ- ಅಳುಕು….

(ಮುಂದುವರಿಯಲಿದೆ)


ಹಕ್ಕಿ, ಅವಳು ಮತ್ತು ನಕ್ಷತ್ರಮೀನು

June 11, 2009

ರೆಕ್ಕೆ ಬಿಚ್ಚಿ, ಬಾನಿಗೆ

ಚಿಮ್ಮಿದ ಹಕ್ಕಿ

ಕಂಪಾಸ್ ಮರೆತು

ಮತ್ತೆ ಗೂಡಿಗೂ

ಹಿಂತಿರುಗಲಿಲ್ಲ!!

***

 

ಕಾಮನಬಿಲ್ಲಿನ

ಹೂವ ಮುಡಿಯುವ

ಆಸೆ ಕೈಗೂಡದೆ

ಒಂದೇ ಸಮನೆ ರೋತೆ

ತೆಗೆದಿದೆ ಮೋಡ… !!

***

 

ಅವಳ ಮೆಸೇಜು

ಬರದೆ ಮೊಬೈಲ್ ಗೆ ಈಗ

ಸಿಟ್ಟು..

ಮೌನಕ್ಕೆ ನಿರ್ಜೀವ

ಬ್ಯಾಟರಿ ನೆಪ ಅಷ್ಟೆ!

***

 

ನಿನ್ನ ಪರೀಕ್ಷಿಸಲು

ನಾ ಕವಿತೆ

ಬರೆದೆ ಎಂದಳು ಅವಳು…

ನನಗೋ ಅವಳೇ

ಎಂದೆಂದೂ ಮುಗಿಯದ ಕಥೆ!!

***

 

ಮಳೆ ಬಿದ್ದ ಕ್ಷಣ

ಮಣ್ಣು ಒದ್ದೆ

ಕಣ್ಣಿನ ರೆಪ್ಪೆ

ತೆರೆದಂತೆ

ಅರಳುವ ಹಸಿರು

ಕಾಮನಬಿಲ್ಲು!

***

 

ಕಾಡಿನ ತುಂಬ

ಈಗ ಮಂಗನ ಮದುವೆ

ಆಕಾಶದಲ್ಲಿ

ಕಾಮನಬಿಲ್ಲು, ಮನ್ಮಥ ಲಾಸ್ಯ!!

***

 

ನನ್ನ ಕಣ್ಣ ದಿಟ್ಟಿಸಬೇಡ

ಎಂದಳು ಅವಳು…

ಕಡಲ ಒಡಲಾಳದ

ನಕ್ಷತ್ರಮೀನ

ತೋರಿ ನಸುನಕ್ಕೆ!!

***


ಮಾನ್ಸೂನ್ ಮಂತ್ರದಂಡ

May 20, 2009

ಮಳೆ ಮಾಯೆಗೆ ಕಾದು

 

 

ಮಳೆ ಮಾಯೆಗೆ ಕಾದು

 

 

 

 

  

ನಿನ್ನದೇ ಬರುವಿಕೆಗೆ ಕಾದಿರುವ ನಮಗೆ, ನೀನು ನಾಲ್ಕು ದಿನ ಮುಂಚಿತವಾಗೇ ಬರುತ್ತೀಯ ಎಂದು ಕೇಳಿ ಖುಷಿ! ಮೊನ್ನೆ, ಮೊನ್ನೆಯ ತನಕ ನೀನು ಯಾವಾಗ ಬರುತ್ತೀಯ, ಈ ಬಾರಿ ಎಷ್ಟು ದಿನ ಇರುತ್ತೀಯ ಎಂಬ ಬಗ್ಗೆ ಯಾರೂ ಸರಿಯಾಗಿ ಹೇಳಿರಲೇ ಇಲ್ಲ. ನಿನ್ನೆ ತಾನೆ ಗೊತ್ತಾಯ್ತಂತೆ, ನೀನು ಈ ಬಾರಿ ನಾವಂದುಕೊಂಡದ್ದಕ್ಕಿಂತ ನಾಲ್ಕು ದಿನ ಮುಂಚೆಯೇ ಬರುತ್ತೀಯ, ಮತ್ತು ಹೋದ ವರ್ಷಕ್ಕಿಂತ ಹೆಚ್ಚು ದಿನ ನಮ್ಮೊಂದಿಗೆ ಇರುತ್ತೀಯ ಎಂದು. ಆ ಸುದ್ದಿ ಕೇಳುತ್ತಲೇ ನಾವೆಲ್ಲ ಈ ಇಳೆಯೆಂಬ ಕನಸಲ್ಲಿ ಬಣ್ಣದ ಕಾಮನಬಿಲ್ಲು ನೋಡುವ ಕಾತರದಲ್ಲಿದ್ದೇವೆ.

ನೀನು ಬರುತ್ತೀಯ ತಾನೆ? ಹವಾಮಾನ ಇಲಾಖೆಯವರು ಯಾವಾಗಲೂ ಹಾಗೆ, ನೀರು ಬರುತ್ತೀಯ ಎಂದಾಗ ಬರುವುದಿಲ್ಲ, ಬರಲಾರೆ ಎಂದುಕೊಂಡಾಗ ದಿಢೀರನೇ ಮುನಿಸಿಕೊಂಡವಳು ಆಟೋ ನಿಲ್ದಾಣದವರೆಗೆ ಹೋಗಿ ಮತ್ತೆ ಮರಳಿದಂತೆ ಬಂದುಬಿಡುತ್ತೀಯ ಎಂದು ಪ್ರತಿಬಾರಿ ತಮ್ಮ ಲೆಕ್ಕಾಚಾರ ತಪ್ಪಿದಾಗಲೂ ನಿನ್ನನ್ನೇ ದೂರುತ್ತಾರೆ ಕಣೇ. ಹಾಗಂತ ನೀನು ಮುನಿಸಿಕೊಳ್ಳುವುದಿಲ್ಲ, ಮುನಿಸಿಕೊಂಡರೂ ಅದು ಹುಸಿಮುನಿಸು ತಾನೆ?! ನಿನ್ನ ಆಗಮನದ ಕ್ಷಣಕ್ಕಾಗಿ ಯಾರೆಲ್ಲಾ ಕಾದಿದ್ದಾರೆ, ಹೇಗೆಲ್ಲಾ ಪರಿತಪಿಸುತ್ತಿದ್ದಾರೆ ಗೊತ್ತೇನೇ ನಿನಗೆ? ಕನ್ಯಾಕುಮಾರಿಯ ತುದಿಯಿಂದ ಹಿಮಾಲಯದ ನೆತ್ತಿಯವರೆಗೆ ನಿನ್ನ ಬಳಗ ಎಷ್ಟು ವಿಸ್ತಾರವೇ? ಮನ್ನಾರಿನ ‘ಬೆಟ್ಟದ ಜೀವ’ದಿಂದ ಹಿಮಾಲಯದ ತಪ್ಪಲಿನ ನದೀವೈಯ್ಯಾರಿಯತನಕ ಎಲ್ಲರೂ ನಿನ್ನದೇ ಕನಸಿನಲ್ಲಿದ್ದಾರೆ.

ಮನ್ನಾರಿನ ಬೆಟ್ಟದ ಜೀವ ಎಂದರೆ ಯಾರು ಎನ್ನುತ್ತೀಯಾ? ನೆನಪುಮಾಡಿಕೋ.. ನಿನ್ನ ಕಾತರದಲ್ಲಿ ನಭಚುಂಬಿತ ಬೆಟ್ಟಗಳ ತುತ್ತತುದಿಯಲ್ಲಿ ಎದೆಸೆಟೆಸಿ, ಕತ್ತು ಕೊಂಕಿಸಿ ಕಾಯುವ ಧೀರ ಯಾರೆಂದು? ನೆನಪಾಯ್ತ,.. ನೀಲಗಿರಿ ಥಾರ್ ಕಾದಿಹನೆಂದು?! ಪೆರಿಯಾರ್ ನ ಕೆಂದಳಿಲು, ವೈನಾಡಿನ ನವಿಲು, ನಾಗರಹೊಳೆಯ ಹುಲಿ, ಬಂಡೀಪುರದ ಕಾಡೆಮ್ಮೆ, ನಮ್ಮೂರಿನ ಸತ್ತ ಹುಲಿಯ ಅನಾಥ ಮರಿಗಳು, ಮುತ್ತೋಡಿಯ ಆನೆ, ಸಕಲೇಶಪುರದ ಮುರುಗೋಡು ಮೀನು, … ಹೀಗೆ ಉತ್ತರೋತ್ತರಕ್ಕೆ ಸರಿದಂತೆ ನಿನ್ನ ಬಳಗದ ವೈವಿಧ್ಯ ಇಮ್ಮಡಿಸುತ್ತಲೇ ಇರುತ್ತದೆ. ಸಾರಿಸ್ಕಾದ ಹೊಸ ಅತಿಥಿ ಹುಲಿಗಳಾಗಲೀ, ಕಾಜಿರಂಗದ ಘೆಂಡಾಗಳಾಗಲೀ, ಕೊನೆಗೆ ಹಿಮಾಲಯದ ತಳದ ಗಂಗೆಯೊಡಲಿನ ನದೀವೈಯಾರಿ ಮಹಷೀರ್ ಮೀನಿನತನಕ ಯಾರೆಲ್ಲಾ ನಿನ್ನ ದಾರಿಯ ಕಾದಿದ್ದಾರೆಯೇ?

ನೀನು ಬರುವ ಹೊತ್ತಿಗೆ, ಎರಡು ಮಕ್ಕಳ ತಾಯಿ ನೀಲಗಿರಿ ಥಾರ್ ಹೊಟ್ಟೆ ಬೆನ್ನಿಗೆ ಅಂಟಿ ಹೋಗಿದೆ ಕಣೆ, ನೀ ಬರಬೇಕು, ಮನ್ನಾರಿನ ಬೆಟ್ಟಗಳಲ್ಲಿ ಗರುಕೆ ಕುಡಿಯೊಡೆಯಬೇಕು, ಥಾರ್ ಹೊಟ್ಟೆ ತುಂಬ ಮೇಯಬೇಕು, ಹಾಲು ಕೂಡಬೇಕು, ಮರಿಗಳಿಗೆ ಉಣಿಸಬೇಕು,… ಮರಿಗಳ ಕಣ್ಣಲ್ಲಿ ಜೀವ ಚೈತನ್ಯ ಚಿಮ್ಮುವುದು ನಿನ್ನಿಂದಲೇ,.. ಮರೆಯುದಿರೇ… ಬಂಕಾಪುರದ ಬಿರುಬಿಸಿಲ ಸೀಮೆಯಿಂದ ವೈನಾಡಿನ ದಟ್ಟ ಕಾಡಿನವರೆಗೆ ಮೊಟ್ಟೆ ಇಟ್ಟು’ಕಾದಿರುವ’ ನವಿಲ ಸಂಕುಲಕ್ಕೂ ನಿನ್ನದೇ ಕಾತರ. ಮೊಟ್ಟೆಯೊಡೆದು ಮರಿ ಮೂಡುವ ಹೊತ್ತಿಗೆ ನೀನು ಬಂದರೆ ಅವಕ್ಕೆ ಜೀವ ಹಗುರ. ನಿನ್ನ ಕಾಲ್ಗುಣದ ಪವಾಡಕ್ಕೆ ನೆರೆಯುವ ಹುಳ- ಹುಪ್ಪಟೆಗಳ ಜಾತ್ರೆಯೇ ತೊದಲು ನಡಿಗೆಯ ಮರಿಗಳಿಗೆ ಜೀವದಾನ. ಆಗುಂಬೆಯ ಮಳೆಕಾಡಿನ ನಡುವೆ ಬಿದಿರ ಮೆಳೆಯ ಅಡಿ ಮೆತ್ತನೆ ಎಲೆಹಾಸಿಗೆ ಮೇಲೆ ಉರುಳಾಡುತ್ತಿರುವ ಕಾಳಿಂಗನ ಮೊಟ್ಟೆಗಳಿಗೆ ನಿನ್ನ ಸ್ಪರ್ಶವಿಲ್ಲದೇ ಭೂಮಿಗೆ ಪ್ರವೇಶವಿಲ್ಲ ಕಣೇ. ತಿಂಗಳಿಂದ ಮೊಟ್ಟೆಯ ಕಾವಲು ಕೂತ ಅಮ್ಮ ಕಾಳಿಂಗನ ತಪಸ್ಸು ಕೊನೆಗಾಣಲು ನಿನ್ನ ಕರುಣೆ ಬೇಕು.. ಬೇಸಿಗೆಯ ಬಸವಳಿದು ಬಟಾಬಯಲಾದ ಕಾಡಿನ ನಡುವೆ ಬೇಟೆಯೇ ಸಿಗದೇ ಹಸಿದ ಹೊಟ್ಟೆಯ ದಿನಗಳನ್ನೇ ಕಂಡ ನಮ್ಮೂರಿನ ಅನಾಥ ಹುಲಿ ಮರಿಗಳೂ ಒಂದಿಷ್ಟು ಊಟ ಕಾಣಲು ನೀನು ಬರಬೇಕು. ಕಾಡಿನ ನಡುವೆ ಲಂಟಾನ ಬೆಳೆಯಬೇಕು, ಮೊಲವೋ, ಹಂದಿ ಮರಿಯೋ, ಜಿಂಕೆ ಪಿಳ್ಳೆಯೋ,.. ಕೊನೆಗೆ ಎಳೆಕರುವೋ ಯಾವುದಾದರೂ ಒಂದು ಜೀವ ಊಟಕ್ಕೆ     ದಕ್ಕಬೇಕು ಅವಕ್ಕೂ,…   

ಹಾಗೇ ನಮ್ಮೂರಿನ ಗದ್ದೆಯ ಬದುವಿನ ಗುಳಿಯ ಆಳದಲಿ ನೀರ ಹನಿಯ ಸೆಳಕಿಗಾಗಿ ಹೊಟ್ಟೆಯಲ್ಲಿ ರಾಶಿ ಮೊಟ್ಟೆಗಳ ಬಚ್ಚಿಟ್ಟುಕೊಂಡು ಕಾದಿರುವ ಏಡಿಗೆ, ಗದ್ದೆ ಅಂಚಿನ ಕೆರೆಯ ನೀರಿನಾಳದಲಿ ಒಡಲ ತುಂಬ ತತ್ತಿ ಹೊತ್ತುಕೊಂಡು ಈಜಲಾರದೆ ಈಜುವ ಮುರುಗೋಡು ಮೀನಿನ ಭಾರ ಇಳಿಯಲು, ಕಪ್ಪೆಯ ಪ್ರೇಮೋತ್ಸಾಹದ ನಿರೀಕ್ಷೆ ನಿಜವಾಗಲೂ ನೀನೇ ಬರಬೇಕು. ಉಳುಮೆ ಮಾಡಿಟ್ಟ ಗದ್ದೆಯ ಮಣ್ಣ ಹೆಂಟೆಗಳ ನಡುವೆ ಕಲ್ಲು- ಮಣ್ಣಿನ ಮನೆಮಾಡಿ ಮೊಟ್ಟೆಯಿಟ್ಟು ಕಾವಲು ಕಾದಿರುವ ಟಿಟ್ಟಿಬಾ ಕೂಡ ಮುದ್ದು ಮರಿಗಳ ಕಾಣಲು ನೀ ಬರುವ ಮುಹೂರ್ತಕ್ಕೆ ಕಾದಿದೆ. ನಂದಿ ಮರದ ಪೊಟರೆಯ ಉಸಿರುಗಟ್ಟಿಸುವ ಗೂಡಿನಲ್ಲಿ ಒತ್ತೊತ್ತಾಗಿ ಕೂತಿರುವ ಗಿಳಿ ಮರಿಗಳಿಗೆ ಅಮ್ಮನ ಮೇಲೇ ಕೋಪ. ಏಕೆಂದರೆ, ಅಮ್ಮ ಊಟ ಕೊಡುತ್ತಿಲ್ಲವೆಂದೇನಲ್ಲ, ಅಮ್ಮ- ಅಪ್ಪ ತಂದು ಉಣಿಸುವ ಊಟ ತಿಂದು ದಿನಗಳೆದಂತೆ ಊದಿಕೊಳ್ಳುತ್ತಿರುವ ತಮಗೆ ಗೂಡೇ ಚಿಕ್ಕದಾಗುತ್ತಿದೆ. ರೆಕ್ಕೆ ಬಲಿತರೂ ಹೊರಗೆ ಹಾರಲು ಹೋದರೆ ಅಮ್ಮ ಕಚ್ಚಿ ಗೂಡಿಗೇ ಅಟ್ಟುತ್ತಾಳೆ! ಅವಳಿಗೂ ತನ್ನ ಮರಿಗಳ ಹಾರಿಸುವ ಮೊದಲು ನೀನು ಬರಬೇಕಂತೆ!!

ಮಲಬಾರಿನ ಕಡಲ ಕಿನಾರೆಯ ತುತ್ತ ತುದಿಯಿಂದ ಗೌರೀಶಂಕರದ ನೆತ್ತಿಯ ವರೆಗೆ ಇಡೀ ಭರತಖಂಡದ ಜೀವ ಸಂಕುಲವೇ ನಿನ್ನ ಆಗಮನದ ತವಕದಲ್ಲಿದೆ. ಇನ್ನು ತಡಮಾಡಬೇಡ. ನಾಲ್ಕೇ ದಿನ ತಾನೇ? ಖಂಡಿತವಾಗಿಯೂ ಬರುತ್ತೀಯಲ್ಲ? ಬಾ… ಬಾ ಮಳೆಯೇ… ಜೀವ ಪ್ರೀತಿಯ ಹನಿಯೇ.. ಜೀವ ಜಾತ್ರೆಯ ಮಂತ್ರದಂಡವೇ ಬಾ…

ಹಾಗೇ, ನಿನ್ನ ಬರುವಿಕೆಯ ಕಾತರಕ್ಕೆ ಕವಿತೆಯೊಂದರ ನೆನಪು;

ಜೀವ ಪ್ರೀತಿಯ ಹನಿಯೆ..

ಕಾಡಿನೆದೆಗೆ ಸುರಿವ

ಜೀವ ಪ್ರೀತಿಯ ಹನಿಯೆ,

 

ಹೂತ ಕನಸ

ಬೀಜಗಳಿಗೆ ಕೂಡಲೇ

ಪ್ರಾಣವ ನಿಜ ತ್ರಾಣವ ಕೊಡು.

 

ನಾಳೆಯ ಹೂವಿಗೆ

ಈಗಲೇ ಬಣ್ಣವ,

ಬಿನ್ನಾಣವ ಕೊಡು.

 

ಖುಷಿಯ ಹಾಡುಹಕ್ಕಿಗೆ

ಇಂದೇ ದಣಿಯದ

ಇನಿದನಿಯ ಕೊಡು.

 

ಭೀತಿಯ ಹೆಬ್ಬುಲಿಗೂ

ಕಸುವ, ಮೃಗ- ಹಸಿವ

ತಪ್ಪದೇ ಕೊಡು.

 

ನಿನ್ನ ಕರುಣೆಯ ಆಟಕೆ

ಉರುಳಿಸು ದಾಳವ ಈ ಕ್ಷಣವೆ…


ಕಣ್ಣೆದುರಿಗೆ ನೀಲ ನೀರ ರಾಶಿ…

April 3, 2009

 

pict3016

ಮೂರು ವರ್ಷದ ಹಿಂದೆ, ಅವತ್ತು ಶಿವಮೊಗ್ಗದಿಂದ ಬೈಕ್ ಏರಿದಾಗ ಬೆಳಿಗ್ಗೆ ಏಳರ ಆಸು-ಪಾಸು. ಚುಮು-ಚುಮು ಚಳಿಯ ಗಾಳಿಯನ್ನು ಸೀಳಿಕೊಂಡು ಎರಡು ಬೈಕಲ್ಲಿ ನಾವು ನಾಲ್ವರು ನುಗ್ಗಿದ್ದು ಸಾಗರದ ಕಡೆ. ಉಳ್ಳೂರು ಬಳಿ ಎಡಕ್ಕೆ ಹೊರಳಿ ನೇರ ಹೆಗ್ಗೋಡಿಗೆ ಹೋದರೆ ಅಲ್ಲಿನ ‘ಆಹಾರ್ಯ’ದಲ್ಲಿ ಟೀ ಕುಡಿಯದೇ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಎನಿಸತೊಡಗಿತು. ಸರಿ ಎಂದುಕೊಂಡು ಮೊದಲು ನೀನಾಸಂ ಕಚೇರಿಗೆ ಹೊಕ್ಕರೆ ಅಕ್ಷರ ಅಲ್ಲೇ ಇದ್ದರು. ಜೊತೆಗೆ ಶ್ರೀಪಾದ್ ಕೂಡ ಇಬ್ಬರೊಂದಿಗೆ ಮಾತನಾಡುತ್ತಾ ಟೀ ಕುಡಿದು, ಅಕ್ಷರ ಅವರ ಎಲೆಯಡಿಕೆ ಚಂಚಿಯ ಕವಳ ಹಾಕಿ, ಆಗಷ್ಟೇ ಪುರುಜ್ಜೀವನ ಕಾಮಗಾರಿ ನಡೆಯುತ್ತಿದ್ದ ಶಿವರಾಮಕಾರಂತ ರಂಗಮಂದಿರ ಸುತ್ತಾಡಿಕೊಂಡು ಲಾಂಚ್ ತಪ್ಪಿ ಹೋದೀತೆಂದು ಹೊಳೆಬಾಗಿಲಿನತ್ತ ಹೆಜ್ಜೆ ಹಾಕಿದೆವು.

ಹೊಳೆಬಾಗಿಲಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರು. ಹಸಿವು. ಏನೋ ಒಂದಿಷ್ಟು ತಿಂಡಿ ತಿಂದು ಆಚೆ ದಡಕ್ಕೆ ಹೋದಕೂಡಲೇ ತುಮರಿಯಲ್ಲಿ ಊಟ ಮಾಡಿದರಾಯಿತು ಎಂದು ಲಾಂಚ್ ಕಾಯುತ್ತಾ ಎದುರಿಗೆ ರಾಶಿ ಬಿದ್ದಿದ ನೀಲ ನೀರಿನತ್ತ ಮುಖಮಾಡಿ ಹರಟೆಗೆ ತೊಡಗಿದೆವು. ದಾವಣಗೆರೆಯ ಶಫಿ, ಕಿತ್ತೂರಿನ ಸಚ್ಚಿ ಪಾಲಿಗೆ ಅಲ್ಲಿನ ಕಾಡು- ನೀರು- ಲಾಂಚ್ ಎಲ್ಲವೂ ಹೊಸತು. ನಾರಾಯಣಗೆ ಮಾತ್ರ ಬೆಂಗಳೂರಿಗರಾದರೂ ತುಮರಿ ಸಂಪರ್ಕ ಆ ಪರಿಸರವನ್ನು ಹಳತು ಮಾಡಿತ್ತು. ಒಂದು ತಾಸಿನ ಬಳಿಕ ಲಾಂಚ್ ಬಂತು. ತುಮರಿಗೆ ಹೋಗಿ ತಲುಪುವ ಹೊತ್ತಿಗೆ ಐದೂವರೆಯಷ್ಟಾಗಿತ್ತು. ಅಲ್ಲಿ ನೋಡಿದರೆ ಇರುವುದೇ ಮೂರು ಕ್ಯಾಂಟೀನ್. ಮೂರು ಗಂಟೆ ನಂತರ ಊಟವಿಲ್ಲ, ಏನಿದ್ದರೂ ಬರಿ ಬೋಂಡ, ಟೀ ಎಂಬ ಉತ್ತರ ಸಿಕ್ಕಾಗ ಅಲ್ಲಿನ ಪರಿಚಯಸ್ತರ ನೆರವು ಅಂತೂ ನಮಗಾಗಿಯೇ ಅಡುಗೆ ಮಾಡಿ ಬಡಿಸುವ ಮಟ್ಟಿಗೆ ಕ್ಯಾಂಟೀನ್ ಮಾಲೀಕರ ಮನವೊಲಿಸಿತು.

ಊಟ ಮಾಡಿ ಹೊರಡುವ ಹೊತ್ತಿಗೆ ತುಮರಿಯಲ್ಲೇ ಸಂಜೆಗತ್ತಲು ಆವರಿಸತೊಡಗಿತ್ತು. ಆದರೆ, ನಮ್ಮ ಗಮ್ಯ ಅಲ್ಲಿಂದ ಇನ್ನೂ 70 ಕಿ.ಮೀ. ದೂರದಲ್ಲಿತ್ತು. ಮತ್ತೆ ಬೈಕುಗಳ ಕಿವಿ ಹಿಂಡತೊಡಗಿದೆವು. ಅಲ್ಲಿನ ಕಡಿದಾದ, ಕಿರುದಾರಿಯಲ್ಲಿ ಬೆಟ್ಟ-ಗುಡ್ಡಗಳ ಬಳಸುತ್ತಾ ಅಂಕು-ಡೊಂಕಿನ ದಾರಿ ಸವೆಸುವಾಗ ಕತ್ತಲೆಯ ಕಾಡುಪ್ರಾಣಿಗಳ ಭೀತಿಯ ನಡುವೆಯೂ ಒಂದು ಮಜಾ ಇತ್ತು. ಎಷ್ಟು ಹೋದರೂ ದಾರಿ ಸಾಗುತ್ತಲೇ ಇತ್ತು. ನಮ್ಮ ಗುರಿ ಮಾತ್ರ ಇನ್ನೂ ಸುಳಿವು ಕೂಡ ಸಿಗದಷ್ಟು ದೂರದಲ್ಲಿತ್ತು!

ಕೋಗಾರ್ ರಸ್ತೆ ತಲುಪುವ ಹೊತ್ತಿಗೆ ರಾತ್ರಿ ಎಂಟು! ಎಂದೂ ಓಡಾಡಿ ಅನುಭವವಿರದ, ಜನರ ಪರಿಚಯವೂ ಇರದ ದಾರಿಯಲ್ಲಿ ಎರಡು ಬೈಕಿನಲ್ಲಿ ನಾವು ನಾಲ್ವರು ಆಗಂತುಕರಂತೆ ಸಾಗುತ್ತಿದ್ದೆವು! ಕಾಡುಕೋಣ, ಹುಲಿ, ಕರಡಿ, ಚಿರತೆ, ಕಾಳಿಂಗಸರ್ಪ ಮುಂತಾದ ಅಪಾಯಕಾರಿ ಜೀವಿಗಳ ಸ್ವೇಚ್ಛೆಯ ಬೀಡಿನಲ್ಲಿ ನಾವು ನಿರಾಯುಧರಾಗಿ ಸಾಗುತ್ತಿದ್ದೆವು. ನಮ್ಮ ಬಳಿ ಇದ್ದ ಅಸ್ತ್ರಗಳೆಂದರೆ ನಮ್ಮ ಬೈಕುಗಳು ಮಾತ್ರ!

ಅಂತೂ ರಾತ್ರಿ ಹತ್ತಕ್ಕೆ ಮುಪ್ಪಾನೆ ಎಂಬ ಬೋರ್ಡು ನಮ್ಮ ಬಲಬದಿ ರಸ್ತೆಯಂಚಿಗೆ ನಿಂತದ್ದು ಕಣ್ಣಿಗೆ ಬೀಳುತ್ತಲೇ ಬಾಣದ ಗುರುತಿನ ಸೂಚನೆಗೆ ಸೈ ಎಂದು ಮಣ್ಣಿನ ರಸ್ತೆಯತ್ತ ಬೈಕ್ ತಿರುಗಿಸಿದೆವು. ಅಲ್ಲಿಯವರೆಗೆ ಗುರಿ ತಲುಪುವು ಧಾವಂತದಲ್ಲಿದ್ದವರಿಗೆ ಈಗ ಮತ್ತೊಂದು ಆತಂಕ ಶುರುವಾಯಿತು. ನಾವು ಫಾರೆಸ್ಟ್ ಆಫೀಸರಿಗೆ ಹೇಳಿದ್ದು, ಅವರು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ತಿಳಿಸುತ್ತೇನೆ ನೀವು ಹೋಗಿ ಯಾವ ಸಮಸ್ಯೆ ಇಲ್ಲ ಎಂದಿದ್ದೇನೋ ಸರಿ. ಆದರೆ, ಅವರು ಇಲ್ಲಿಗೆ ದೂರುವಾಣಿ ಸೌಲಭ್ಯವಿಲ್ಲ ಎಂದಿರುವಾಗ ಆತನಿಗೆ ವಿಷಯ ಹೇಗೆ ತಲುಪಿಸುತ್ತಾರೆ? ಒಂದು ವೇಳೆ ಆತ ಇಲ್ಲಿ ಇಲ್ಲದೇ ಇದ್ದರೆ ಏನು ಮಾಡುವುದು? ಯಾರನ್ನಾದರೂ ಕೇಳೋಣವೆಂದರೆ ಅಲ್ಲಿಂದ ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ….!!

ಏನಾದರಾಗಲಿ ಎಂದು ನಿಸರ್ಗಧಾಮದ ಗೇಟ್ ದಾಡುತ್ತಲೇ ನಾಲ್ಕಾರು ಬಾರಿ ಹಾರನ್ ಮಾಡಿದೆವು. ಹತ್ತು- ಹದಿನೈದು ನಿಮಿಷ ಕಳೆದ ಬಳಿಕ ದೂರದಿಂದ ಯಾರೋ ಟಾರ್ಚ್ ಹಾಕಿಕೊಂಡು ಬರುತ್ತಿರುವುದು ಕಂಡಿತು. ಅಷ್ಟರಲ್ಲೇ’ ಹೋಯ್..’ ಎಂಬ ಮಲೆನಾಡಿನ ವಿಶಿಷ್ಟ ಕೂಗು ಕೇಳಿತು. ನನಗೆ ಧೈರ್ಯ ಬಂತು. ಹೋಯ್ ಎಂದು ಮಾರುತ್ತರ ನೀಡಿದೆ. ಆ ಕಡೆಯಿಂದ “ಶಿವಮೊಗ್ಗದವರ..” ಎಂದರು. “ಹೌದು ಮಾರಾಯ್ರೆ… ನೀವು ಫಾರೆಸ್ಟ್ ಡಿಪಾರ್ಟ್ಮೆಂಟ್ನವರಾ..” ಎಂದೆ. ಮಾತಾಡುತ್ತಲೇ ಸಮೀಪಿಸಿದ ಆತ “ಹೌದು ನಾನೇ ಇಲ್ಲಿನ ಉಸ್ತುವಾರಿ ನೋಡಿಕೊಳ್ಳೋದು.. ಆರು ಗಂಟೆಗೆ ಬರುತ್ತಾರೆ ಎಂದಿದ್ರು ಸಾಹೇಬರು.  ಏಕೆ ಇಷ್ಟೊಂದು ತಡ” ಎಂದಿತು ಅಸಾಮಿ. ಏನಿಲ್ಲ, ಲಾಂಚ್ ಮಿಸ್ ಆಗಿ ಲೇಟಾಯ್ತು ಎಂದು ಅವರ ಹಿಂದೆ ಸಾಗಲಾರಂಭಿಸಿದೆವು. ಸುಮಾರು ಎರಡು ಕಿ.ಮೀ. ಸಾಗಿದ ಬಳಿಕ ಅಂತೂ ಅಲ್ಲೊಂದು ಬೀದಿ ದೀಪ ಉರಿಯುತ್ತಿದ್ದದ್ದು ಕಂಡಿತು!

ಊಟ ಮಾಡುವುದು? ಅಲ್ಲಿವರೆಗೆ ದಾರಿಯ ಹೆದರಿಕೆ, ಜಾಗಕ್ಕೆ ತಲುಪುತ್ತೀವೋ ಇಲ್ಲವೋ ಎಂಬ ಭಯ, ಅಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ಎಂಬ ಭೀತಿಗಳ ನಡುವೆ ಮರೆತೇಹೋಗಿದ್ದ ಹಸಿವು ಮತ್ತೆ ಊಟದ ನೆನಪಾಗಿಸಿತು. ಕೇಳಿದರೆ, ಇಲ್ಲೇನು ಸಿಗುವುದಿಲ್ಲ, 15 ಮಿ.ಮೀ. ಹೋದರೆ ಕಾರ್ಗಲ್ ಸಿಗುತ್ತೆ ಅಲ್ಲಿಂದ ಏನಾದರೂ ಪಾರ್ಸಲ್ ತರಬೇಕು! ಅದು ಅಷ್ಟೊತ್ತಲ್ಲಿ? ಬಾರ್-ರೆಸ್ಟೋರೆಂಟ್ ಒಂದಿದೆ ಅಲ್ಲಿ ಮಾತ್ರ 12ಗಂಟೆವರೆಗೆ ಏನಾದರೂ ಸಿಕ್ಕುತ್ತೆ ಎಂದರು! ಸರಿ ಎಂದು ಒಬ್ಬರು ಬೈಕ್ನಲ್ಲಿ ಆತನನ್ನು ಕರೆದುಕೊಂಡು ಕಾರ್ಗಲ್ಗೆ ಹೋಗಿ ಊಟ ತರುವುದು, ಉಳಿದವರು ಅಲ್ಲೇ ಎದುರಿನ ಹಿನ್ನೀರಿನಂಚಿನಲ್ಲಿ ಬೆಂಕಿಹಾಕಿ ನೀರು ಕಾಯಿಸಿಕೊಂಡು ಸ್ನಾನ ಮುಗಿಸುವುದು ಎಂದು ಪ್ರಯಾಣದ ಆಯಾಸದ ನಡುವೆಯೂ ಚಕಚಕ ಸಿದ್ಧರಾದೆವು.

ಕಾರ್ಗಲ್ನಿಂದ ಊಟ ಬರುವ ಹೊತ್ತಿಗೆ ಸ್ನಾನ ಮುಗಿಸಿದ್ದ ನಾವು ನೀರಲ್ಲಿ ಕಾಲು ಬಿಟ್ಟುಕೊಂಡು ಬಂಡೆ ಮೇಲೆ ಕೂತು ಅಮಾವಾಸ್ಯೆಯ ರಾತ್ರಿ ನಕ್ಷತ್ರ ಎಣಿಸುತ್ತಿದ್ದೆವು. ದೂರದಲ್ಲಿ ಹುಲಿ ಗರ್ಜನೆ ಮೊಳಗಿದ್ದನ್ನು ನಾನಷ್ಟೇ ಗುರುತಿಸಲು ಸಾಧ್ಯವಾಯಿತು. ಉಳಿದಿಬ್ಬರು ಬಯಲುಸೀಮೆಯವರಾದ್ದರಿಂದ ಅವರಿಗೆ ಅದು ಯಾವುದೋ ಪ್ರಾಣಿಯ ಕೂಗು ಎಂಬುದಷ್ಟೇ ಗೊತ್ತಾಗಿತ್ತು. ರಾತ್ರಿ ಊಟ ಮಾಡಿ ಮಲಗುವ ಹೊತ್ತಿಗೆ 2ಗಂಟೆ!

ಮಾರನೇ ದಿನ ಎದ್ದು ನೋಡಿದರೆ ಬಾಗಿಲು ತೆರೆಯುತ್ತಲೇ ಕಣ್ಣು ಹಾಯಿಸುವವರೆಗೆ ನೀರ ರಾಶಿ!! ರಾತ್ರಿಯ ಕತ್ತಲೆಯಲ್ಲಿ ನಾವು ಇಳಿದುಕೊಂಡಿದ್ದ ಬಿಡಾರದ ಎದುರು ನೀರಿದೆ ಎಂಬುದು ಗೊತ್ತಿತ್ತೇ ಹೊರತು ಅದರ ಆಳ- ವಿಸ್ತಾರಗಳ ಕಿಂತಿತ್ತೂ ಕಲ್ಪನೆಯೇ ಇರಲಿಲ್ಲ! ಬೆಳಿಗ್ಗೆಯ ತಿಂಡಿ ಮುಗಿಸಿಕೊಂಡು ಮತ್ತೆ ಹೊರಟದ್ದು ನೀರಿನ ತೀರದ ಗುಂಟ ಒಂದು ಲಾಂಗ್ ವಾಕ್! ಮಧ್ಯಾಹ್ನದ ಹೊತ್ತಿಗೆ ವಾಪಸ್ ಬಂದು ಮತ್ತೆ ಅಲ್ಲೇ ಇದ್ದ ಬೋಟನ್ನೇರಿ ಎದುರಿನ ದ್ವೀಪದತ್ತ ಹೊರಟರೆ ಅದರ ಅನುಭವವೇ ಬೇರೆ. ನಾವೇ ದೋಣಿಯ ಹರಿಗೋಲು ಹಾಕುತ್ತಾ ದ್ವೀಪ ಮುಟ್ಟಿ ಕಾಡುಹೊಕ್ಕರೆ ಅಬ್ಬಾ ಎಂತಹ ದಟ್ಟಣೆಯ ಕಾಡೆಂದರೆ ಕೆಲವು ಕಡೆ ನಾವು ಅಕ್ಷರಶಃ ನುಗ್ಗಿ ನಡೆಯುವುದೇ ಕಷ್ಟವಾಗುತ್ತಿತ್ತು! ದ್ವೀಪದ ಇನ್ನೊಂದು ಬದಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರೂವರೆ! ಆಚೆ ಬದಿಯ ಸಮತ್ತಟ್ಟಾದ ನೆಲದಾಳದ ನೀರಲ್ಲಿ ಒಂದು ತಾಸು ಈಜಾಡಿ ಮತ್ತೆ ದಡದಲ್ಲಿ ಸೂರ್ಯಸ್ನಾನ (!) ಮಾಡಿ ಮತ್ತೆ ದ್ವೀಪವೇರಿ ಇಳಿದು ಬೋಟನ್ನೇರಿ ವಾಪಸ್ ಬಂದಾಗ ನಮ್ಮೊಡನಿದ್ದ ಆತ ಹೇಳಿದ್ದು “ಅಲ್ಲಿ ಸಿಕ್ಕಾಪಟ್ಟೆ ಮೊಸಳೆ ಇರ್ತವೆ, ಜೊತಿಗೆ ಇದು ಹಿನ್ನೀರು ಅಲ್ವ ಸುಳಿ ಜಾಸ್ತಿ, ಎಲ್ಲಿ ಗಟ್ಟಿ ನೆಲ, ಎಲ್ಲಿ ಉಸುಕು ಎನ್ನೋದು ಗೊತ್ತಾಗಕ್ಕಿಲ್ಲ.. ನೀವು ಅಲ್ಲಿ ಈಜುವಾಗ ನನಗೆ ಎದೆ ಪುಕುಪುಕು ಅಂತಿತ್ತು… ” ಎಂದು!!

ನಮಗೆ ಅಲ್ಲಿನ ನೀರಿನ ಸುಳಿಯದ್ದಾಗಲೀ, ಮೊಸಳೆಯದ್ದಾಗಲೀ ಕಲ್ಪನೆಯೇ ಇರಲಿಲ್ಲ!! ಅಂತೂ ಮುಪ್ಪಾನೆಯ ಮರೆಯದ ಅನುಭವ ಜೀವನವಿಡೀ ಮೆಲುಕುಹಾಕುವಂತಾಗಿದ್ದು ಮಾತ್ರ ಅಂತಹ ಅಚ್ಚರಿ, ಭೀತಿಗಳಿಂದಲೇ!!


ಅಂಗುಲ ಹುಳುವಿನ ವಿನಯ

February 11, 2009

history1

ನೆಲದೆದೆಯ ಮೇಲೆ

ಕಲ್ಲು, ಮಣ್ಣು, ಕಸ, ಕಡ್ಡಿ,

ಹುಳ-ಹುಪ್ಪಟೆ, ಹಣ್ಣಲೆ, ಕೊರಡು,…

 

ಹಚ್ಚನೆ ಗರುಕೆ, ಅರಳು ಹೂ,

ತೊನೆವ ಬಳ್ಳಿ, ನಿಲುಕದ ಹೆಮ್ಮರ

ಹಬ್ಬುವ ಹರೆ, ಹನಿಯುವ ಜೇನು,…

 

ಪಲ್ಲವಿಸುವ ಚೆಲುವು

ಪಸರಿಸುವ ಗಂಧ

ಜೀವ ಸಂಭ್ರಮದ ಜಾತ್ರೆಯಲಿ…

 

ಮೈಮರೆಯುವ ಮನದ

ಮೂಲೆಯಿಂದ ಎದ್ದುಬರುವ

ಚರಿತ್ರೆಯ ನೆನಪು!

 

ಕಲ್ಲಿಗಂಟಿದ ನೆತ್ತರು,

ಮಣ್ಣಿಗಂಟಿದ ಬೆವರು,

ಕಾಲ ಹರಿವಿನಲಿ ಕೊಚ್ಚಿಹೋಗದ ಕಲೆ..!

 

ಹಸಿರ ನಲಿವು, ಹೂವ ಒಲವು

ಮರದ ಹಮ್ಮು, ಜೇನ ಹಿತ…

 

ಎಲ್ಲವ ತೂಗುವ ಕೈಗೆ

ಕಸುವು ಕೊಟ್ಟ ಪ್ರಾಚ್ಯ ನಿಟ್ಟುಸಿರು

 ತಿದಿಯೊತ್ತುತ್ತಿದೆ ತಣ್ಣಗೆ

ಸರಿವ ಅಂಗುಲ ಹುಳುವಿನ

ಪುರಾತನ ವಿನಯದಲ್ಲೂ…!


ಒಂದು ಪ್ರಶ್ನೆ ಮತ್ತು ನಿರೀಕ್ಷೆ….

January 23, 2009
shashi

shashi

 

 

 

 

 

 

 

 

 

 

ಸಾಹಿತ್ಯ ಎಂಬುದು ಆಯಾ ಕಾಲದ ಸಮಾಜದ ಪ್ರತಿಬಿಂಬವೇ ಆಗಿರುವುದರಿಂದ ಸಮಾಜದಲ್ಲಿ ಆಗುವ ಎಲ್ಲಾ ಬಗೆಯ ಬದಲಾವಣೆಗಳು ಅಲ್ಲೂ ಕಾಣಿಸಿಕೊಳ್ಳುತ್ತವೆ. ನವೋದಯದ ಕಾಲದ ರಾಷ್ಟ್ರೀಯತೆಯ ಆವೇಗದಲ್ಲಿ ಸಾಹಿತ್ಯ ಕೂಡ ವಸ್ತು ಮತ್ತು ಸ್ವರೂಪದಲ್ಲಿ ಅದನ್ನೇ ಪ್ರತಿಬಿಂಬಿಸುವಂತೆ ರೂಪುಗೊಂಡಿತ್ತು. ಹಾಗೇ ನವ್ಯದ ಹೊತ್ತಿಗೆ ಆಧುನೀಕತೆಯ ಪ್ರಭಾವದಿಂದಾಗಿ ಉಂಟಾದ ವೈಚಾರಿಕ ವ್ಯಕ್ತಿ ಮತ್ತು ಸಾಂಪ್ರದಾಯಿಕ ಸಮಾಜದ ನಡುವಿನ ಸಂಘರ್ಷ ಸಾಹಿತ್ಯದಲ್ಲೂ ಕಾಣಿಸಿಕೊಂಡಿತು. ವಸ್ತು ಆಯ್ಕೆಯಂತೆಯೇ ಅಭಿವ್ಯಕ್ತಿ ಮಾದರಿ ಕೂಡ ಬದಲಾವಣೆ ಕಂಡಿತು. ಹಾಗೇ ನವ್ಯೋತ್ತರ ಕಾಲಘಟ್ಟದ ಬಂಡಾಯ ಸಾಹಿತ್ಯದಲ್ಲೂ, ಆ ನಂತರದ ತಲೆಮಾರಿನ ಸಾಹಿತ್ಯದಲ್ಲೂ ಆಯಾ ಕಾಲಧರ್ಮವೇ ಸಾಹಿತ್ಯದಲ್ಲೂ ಪ್ರತಿಫಲಿಸಿತು.

ಹಾಗೇ, ಇಂದು ಕೂಡ ನಮ್ಮ ಕಾಲದ ಸಮಾಜ ಸಾಹಿತ್ಯದಲ್ಲೂ ಪ್ರತಿಫಲಿಸತೊಡಗಿದೆ. ಆದರೆ, ಒಂದೇ ವ್ಯತ್ಯಾಸವೆಂದರೆ; ಹಿಂದಿನೆಲ್ಲಾ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲಿ ಬದಲಾದ ಸಮಾಜದೊಂದಿಗೆ ವ್ಯಕ್ತಿಯ ಗ್ರಹಿಕೆ ಮತ್ತು ಅಭಿವ್ಯಕ್ತಿಯನ್ನು ಪ್ರಭಾವಿಸುವಂತಹ ತಾತ್ವಿಕತೆಗಳು(ಫಿಲಾಸಫಿಗಳು) ಕೂಡ ಜೊತೆ- ಜೊತೆಗೇ ರೂಪುಗೊಂಡಿದ್ದವು. ಅವು ಪರಂಪರೆಯಿಂದಲೋ ಅಥವಾ ಪಾಶ್ಚಾತ್ಯರಿಂದ ಎರವು ಪಡೆದೋ ಅಂತೂ ಆಯಾ ಕಾಲದ ಬದುಕಿನಿಂದ ಪ್ರೇರಣೆ ಪಡೆದ ಸಾಹಿತ್ಯಕ್ಕೂ, ಹಾಗೇ ಸಾಹಿತ್ಯದಿಂದ ಪ್ರಭಾವಿತವಾದ ಬದುಕಿಗೂ ಒಂದು ನಿರ್ದಿಷ್ಟ ತಾತ್ವಿಕತೆಯ ಹಿನ್ನೆಲೆ ಇತ್ತು. ಹಾಗಾಗೇ ನವ್ಯದ ಹೊತ್ತಿಗೆ ನಮ್ಮ ಸಮಾಜದಲ್ಲೂ ಸಾಕಷ್ಟು ಪ್ರಗತಿಪರ ಚಳವಳಿಗಳು ಹುಟ್ಟಿಕೊಂಡವು. ಹೋರಾಟಗಳಿಗೆ ಆ ಸಾಹಿತ್ಯ ಪ್ರೇರಣೆಯಾಯಿತು. ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯ ಸಮುದಾಯಕ್ಕಿಂತ ಹೆಚ್ಚು ಮುಖ್ಯ ಮತ್ತು ಮೂಲಭೂತವಾದ ಸಾತಂತ್ರ್ಯದ ಪ್ರಶ್ನೆ ಎಂಬುದರ ಹಿನ್ನೆಲೆಯಲ್ಲೇ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಹಲವು ಹೊಸ ಬೆಳವಣಿಗೆಗಳು ಸಂಭವಿಸಿದವು.

ಇದೇ ಮಾತು ನಂತರದ ಬಂಡಾಯಕ್ಕೂ, ದಲಿತ ಚಳವಳಿಯ ಸಂದರ್ಭಕ್ಕೂ ಅನ್ವಯವಾಗದೇ ಇರದು. ಆದರೆ, ಇಂದು ಅಂತಹ ‘ಒಂದು’ ಎನ್ನಬಹುದಾದ, ಮುಖ್ಯವಾಗಿ ಗುರುತಿಸಬಹುದಾದ ತಾತ್ವಿಕತೆ ನಮ್ಮನ್ನು ಆವರಿಸಿಲ್ಲ. ಸಾಮಾಜಿಕವಾಗಿಯಾಗಲೀ, ರಾಜಕೀಯವಾಗಲೀ ಒಂದು ಪ್ರಭಾವಶಾಲಿ ತಾತ್ವಿಕತೆ ಎಂಬುದು ಗೈರು ಹಾಜರಾಗಿದೆ. ಅದೇ ಸ್ಥಿತಿ ಸಾಹಿತ್ಯದಲ್ಲೂ ಇದೆ. ಇದೇ ಪೋಸ್ಟ್ ಮಾರ್ಡನ್ (ಆಧುನಿಕೋತ್ತರ) ಕಾಲಘಟ್ಟದ ಲಕ್ಷಣ ಎನ್ನಬಹುದು. ಆದರೆ, ಹಾಗೇ ಒಂದು ನಿರ್ದಿಷ್ಟವಾದ ತಾತ್ವಿಕತೆ ಎಂಬುದು ಇಲ್ಲದೇ ಇದ್ದರೂ ಎಲ್ಲೋ ಒಂದು ಸಮಾನ ಅಂಶದ ತಾತ್ವಿಕ ಸೆಳವುಗಳು ಈ ಕಾಲದ ಕೃತಿಗಳಲ್ಲಿ ಇರಬಹುದಲ್ಲವೆ? ಅದನ್ನ ಸ್ಪಷ್ಟವಾಗಿ ಗುರುತಿಸಿ ಚರ್ಚೆ ಮತ್ತು ಸಂವಾದದ ಮೂಲಕ ಸ್ಪಷ್ಟಪಡಿಸಿಕೊಳ್ಳುತ್ತಾ ಹೋಗುವುದು ಸಾಧ್ಯವಿಲ್ಲವೆ? ಹಾಗೆ ಮಾಡುತ್ತಲೇ ‘ಶೂನ್ಯ ಕಾಲ’ ಎಂಬ ಈ ಹೊತ್ತಿನ ಸಾಹಿತ್ಯಕ್ಕೆ ಒಂದು ತಾತ್ವಿಕತೆ ರೂಪಿಸುವುದು ಅಗತ್ಯವಲ್ಲವೆ? ಈ ನಿಟ್ಟಿನಲ್ಲಿ ನನ್ನ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ, ಗಟ್ಟಿ ತಾತ್ವಿಕತೆಯ ಕೆಲವಾದರೂ ಕೃತಿಗಳು ಈ ಕಾಲದ ಹೊಸ ಲೇಖಕರಲ್ಲಿವೆ. ಅವುಗಳು ಇದೀಗ ವಿಮರ್ಶೆ ಅಥವಾ ಜಿಜ್ಞಾಸೆಯ ಮೂಲಕ ಬೆಸೆಯಬಹುದಾದ ತಂತುಗಳಿಗಾಗಿ ಕಾಯುತ್ತಿವೆ. ಆ ಮೂಲಕ ಗಂಭೀರವಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಕೆಲವರಾದರೂ ಕತೆಗಾರರು, ಕವಿಗಳು ಮತ್ತು ಕಾದಂಬರಿಕಾರರ ಕೃತಿಗಳಿಗೆ ಈ ಕಾಲಕ್ಕೆ ಸಲ್ಲಬೇಕಾದ ಅರ್ಥವಿಸ್ತಾರ ಮತ್ತು ಓದು ಸಲ್ಲುವಂತಾಗಬೇಕಿದೆ.

ಅದಕ್ಕೆ ವಿಮರ್ಶೆಯ ಹೊಣೆಗಾರಿಕೆ ಸಾಕಷ್ಟು ಇದೆ. ಹೊಸ ತಲೆಮಾರಿನ ಲೇಖಕರು ವಿಮರ್ಶೆಯತ್ತ ಗಮನಕೊಟ್ಟು ತಮ್ಮ ಕಾಲದ ಸಾಹಿತ್ಯಕ ಆಶಯ ಮತ್ತು ಹುಡುಕಾಟಗಳನ್ನು ಗುರುತಿಸಿ, ಜೀವನದೃಷ್ಟಿಯನ್ನು ಗ್ರಹಿಸಿ ನಿರ್ವಚಿಸುವ ಸವಾಲು ಸ್ವೀಕರಿಸಬೇಕು. ಆಗ ಒಂದೋ ಇನ್ನೂ ನವ್ಯ- ನವೋದಯ ಪರಿಕರಗಳನ್ನೇ ನೆಚ್ಚಿಕೊಂಡು ವಿಮರ್ಶೆ ಬರೆಯುವ ವಿಮರ್ಶಕರು ಅಥವಾ ಗುಂಪುಗಾರಿಕೆ ಮಾಡುತ್ತಾ ಪರಸ್ಪರರ ಬೆನ್ನು ತಟ್ಟಿಕೊಳ್ಳುತ್ತಾ ಕೇಕೆ ಹಾಕುವ ವಿ(ಕಟ)ಮರ್ಶಕರ ಹಂಗಿಲ್ಲದೆ ನಿಜವಾದ ಅರ್ಥದಲ್ಲಿ ನಮ್ಮ ಕಾಲದ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಜೊತೆಗೆ, ಮುಕ್ತ ವಿಮರ್ಶೆಯ ನಿಕಷವಿಲ್ಲದೆ ತೆಳು ನಿರೂಪಣೆ, ಮೇಲುಸ್ತರದ ಓದು, ರಂಜಕತೆಯ ದಾಟಿಗೆ ಬಿದ್ದಿರುವ ಸಾಹಿತ್ಯವನ್ನೂ ಅಂತಹ ಸ್ಪಷ್ಟ ತಾತ್ವಿಕತೆ ಕೈಹಿಡಿದು ಮೇಲೆತ್ತಬಲ್ಲದು.

ಆಗ, ಡಿ.ಆರ್. ನಾಗರಾಜ್ ಅವರು ಹೇಳಿದಂತೆ, ‘ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಆಂಟಿ ಇಂಟೆಲೆಕ್ಚುವಲ್ ಮನಸ್ಥಿತಿ ಬೆಳೆಯುತ್ತಿದೆ. ಯಾವುದರ ಬಗ್ಗೆಯೇ ಆಗಲೀ ಗಂಭೀರವಾಗಿ ಯೋಚನೆ ಮಾಡುವುದು, ಬರೆಯುವುದೇ ಅಪಾಯ’ (ಹತ್ತು ವರ್ಷಗಳ ಹಿಂದಿನ ಡಿಆರ್ ಅವರ ಆ ಮಾತು ಎಷ್ಟು ನಿಜ ಎಂಬುದು ಹಿಂದಿನ ನನ್ನ ಲೇಖನ ಹಾಕಿದಾಗಲೇ ಮನದಟ್ಟಾಯಿತು!!)ಎನ್ನುವ ಸ್ಥಿತಿಗೆ ಇನ್ನಾದರೂ ಒಂದಿಷ್ಟು ವಿರಾಮ ಹಾಕುವುದು ಒಳಿತು. ಆ ನಿಟ್ಟಿನಲ್ಲಿ ನಮ್ಮ ಹೊಸ ತಲೆಮಾರಿನ ಲೇಖಕರು ಯೋಚಿಸಬಹುದೆ?!

ಇದೊಂದು ಪ್ರಶ್ನೆ ಮತ್ತು ನಿರೀಕ್ಷೆ….


ರಂಜನೆಯಾಗುತ್ತಿದೆ ಸಾಹಿತ್ಯ

December 19, 2008

crb2170061

ಕನ್ನಡದ ಇವತ್ತಿನ ಸಾಹಿತ್ಯದ ಕುರಿತು ಯೋಚಿಸುತ್ತಿರುವಾಗ ಯಾಕೋ ಮತ್ತೆ- ಮತ್ತೆ ಎಫ್.ಆರ್. ಲೆವಿಸ್ ಮಾತುಗಳು ನೆನಪಾಗುತ್ತವೆ. ಜನಪ್ರಿಯ ಸಾಹಿತ್ಯ ಯಾವಾಗಲೂ ಬಂಡವಾಳಶಾಹಿ ಶಕ್ತಿಗಳಿಂದಲೇ ಪ್ರೇರಿತವಾಗಿರುವುದರಿಂದ ಅದರ ಏಕೈಕ ಉದ್ದೇಶ ಸದಾ ಹಣವಷ್ಟೇ ಆಗಿರುತ್ತದೆ ಎಂಬ ಆತನ ಮಾತನ್ನು ಈಗಿನ ಸಂದರ್ಭದಲ್ಲಿ ತುಸು ಮಾರ್ಪಾಡು ಮಾಡಿ ಹೀಗೆ ಹೇಳಬಹುದೇನೋ.. ‘ಜನಪ್ರಿಯ ಸಾಹಿತ್ಯ ಈಗ ಸದಾ ದುಡ್ಡು ಮಾಡುವುದರ ಮೇಲೇ ಕಣ್ಣಿಟ್ಟು ತಾನೇ ಸ್ವತಃ ಬಂಡವಾಳಶಾಹಿಯಾಗಿ ವರ್ತಿಸುತ್ತಿರುವುದರಿಂದ ಅದರ ಕಣ್ಣಿಗೆ ಹಣವಲ್ಲದ ಬೇರೆ ಜಗತ್ತು ಕಾಣುತ್ತಿಲ್ಲ’!?

ಈ ಮಾತನ್ನು ಹೀಗೆ ಅಚಾನಕ್ಕಾಗಿ ಹೇಳುತ್ತಿಲ್ಲ, ಕಳೆದ ಏಳೆಂಟು ವರ್ಷಗಳಿಂದ ಕನ್ನಡದ ಬಹುತೇಕ ಲೇಖಕರನ್ನು ಗಮನಿಸಿದಾಗೆಲ್ಲಾ ಯೋಚನೆಗೆ ಹಚ್ಚಿದ್ದು ಎಫ್.ಆರ್. ಲೆವಿಸ್. ಆತನ ನಂತರ ಬಹಳಷ್ಟು ಸಾಹಿತ್ಯ ಥಿಯರಿಗಳು ಬಂದಿವೆ, ಪೋಸ್ಟ್ ಮಾರ್ಡನಿಸಂನಂತಹ ಆತನಿಗೆ ಬಹುತೇಕ ವಿರುದ್ಧವಾದ ಚಳವಳಿ ಕೂಡ ಬಂದಾಯಿತು. ಗಂಭೀರ ಮತ್ತು ಜನಪ್ರಿಯ ಎಂಬ ಪ್ರತ್ಯೇಕತೆಗಳನ್ನು ಅಳಿಸಿ ಹಾಕಿ ‘ಸೆಲೆಬ್ರೇಷನ್ ಆಫ್ ಫ್ರಾಗ್ಮಾಟಿಸಂ’ ಎಂದು ಹುಯಿಲೆದ್ದಿದ್ದೂ ಆಯಿತು. ಆದರೆ, ಈಗಿನ ಪ್ರಶ್ನೆಯೆಂದರೆ, ಸಾಹಿತ್ಯ ಎಲ್ಲರಿಗೂ ತಲುಪಬೇಕು, ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂಬುದು ಯಾವ ಬೆಲೆ ತೆತ್ತು ಸಾಧಿಸಬೇಕಾಗಿರುವ ಉದ್ದೇಶ? ನಾನು ಬರೆದದ್ದನ್ನು ಸಾವಿರಾರು ಜನ ಓದಬೇಕು, ಟಾಪ್ಟೆನ್ ಎಂಬ ಪ್ರಹಸನಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳಬೇಕು, ಪ್ರಕಾಶಕನ ಜೇಬು ತುಂಬಬೇಕು, ತಾನೂ ಬೇಡಿಕೆಯ ಬರಹಗಾರನಾಗಿ ಹಣ ಮಾಡಿಕೊಂಡು ಇರಬೇಕು,… ಎಲ್ಲದರ ಒಟ್ಟರ್ಥ ಬರವಣಿಗೆಯೆನ್ನುವುದೇ ಒಂದು ದಂಧೆ!

ಹಾಗೆ ದಂಧೆ ಮಾಡಿಕೊಳ್ಳುವುದರ ಬಗ್ಗೆಯಾಗಲೀ, ದುಡ್ಡು ಮಾಡುವುದರ ಬಗ್ಗೆಯಾಗಲೀ ಅಪರಾಧ ಎಂಬಂತೆ ಬಿಂಬಿಸುವುದು ಅಥವಾ ವಾದಿಸುವುದು ನನ್ನ ಉದ್ದೇಶವಲ್ಲ. ಆದರೆ, ಇಂದು ಕನ್ನಡದಲ್ಲಿ ‘ಜನಪ್ರಿಯ’ ಮತ್ತು ‘ಗಂಭೀರ’ ಎಂಬ ಮಾದರಿಗಳನ್ನು ಬದಿಗೊತ್ತಬೇಕಾದ ಕಾಲ ಇದು ಎಂಬುದನ್ನು ಒಪ್ಪುತ್ತಲೇ, ಅಂತಹ ಒಂದು ಸಮ್ಮಿಶ್ರ ಸಾಹಿತ್ಯದ ನೆಪದಲ್ಲಿ ಬದುಕಿನ ದೃಷ್ಟಿಕೋನವನ್ನೇ ಕಳೆದುಕೊಂಡ ಕೇವಲ ರಂಜನೆಯೊಂದನ್ನೇ ಮುಖ್ಯವಾಗಿಟ್ಟುಕೊಂಡ ಮೂರನೇ ದರ್ಜೆಯ ಸಾಹಿತ್ಯ ‘ಪ್ರಯೋಗಶೀಲ’ ಸಾಹಿತ್ಯದ ಮುಖವಾಡದಲ್ಲಿ ವ್ಯಾಪಿಸುತ್ತಿರುವುದರ ಬಗ್ಗೆ ಚರ್ಚೆ ಅಗತ್ಯವೆಂದುಕೊಂಡಿದ್ದೇನೆ.

 ಕನ್ನಡದಲ್ಲಿ ಇವತ್ತು ಏನಾಗುತ್ತಿದೆ ನೋಡಿ, ಒಬ್ಬ ಲೇಖಕ ಎರಡೋ- ಮೂರೋ ವರ್ಷಕ್ಕೆ ಒಂದು ಕಥೆ, ಕಾದಂಬರಿ ಪ್ರಕಟಿಸುತ್ತಾನೆ, ಉತ್ತಮ ತಾತ್ವಿಕತೆ, ಜೀವನದೃಷ್ಟಿಯೊಂದಿಗೆ, ಗಂಭೀರ ಓದನ್ನು ಬೇಡುವಂತಹ ಪುಸ್ತಕ ಅದಾಗಿರಬಹುದು. ಆದರೆ, ಆತನ ಆ ಪುಸ್ತಕ ಚರ್ಚೆಯ ವಿಷಯವಾಗುವುದು ಆತ ಬಹುತೇಕ ಬೆಂಗಳೂರೇತರ ಲೇಖಕರು ಹೇಳುವಂತೆ ಬೆಂಗಳೂರಿನ ‘ಸಾಫ್ಟ್ವೇರ್ ‘ಅಥವಾ ‘ಹಾರ್ಡ್ವೇರ್’ ಸಾಹಿತಿಗಳ ಪಡೆಯಲ್ಲಿ ಗುರುತಿಸಿಕೊಂಡಿದ್ದರೆ ಮಾತ್ರ. ಇಲ್ಲವಾದರೆ, ಅದು ಎಲ್ಲಿಯೂ ಚರ್ಚೆಯಾಗದೇ ಹೋಗಿಬಿಡುತ್ತದೆ. ಅದೇ ನೀವು ಯಾವುದಾದರೂ ‘ತುಂಬಾ ಇಷ್ಟವಾಗುವ’, ‘ಖುಷಿ ಕೊಡುವ’, ‘ಮಜಾ ಅನ್ನಿಸುವ’, ‘ಸಖತ್ ಆಗಿರುವ’, ‘ಥ್ರಿಲ್ಲಿಂಗ್’ ಆಗಿರುವ ಪುಸ್ತಕ ಪ್ರಕಟಿಸಿದರೆ ನಿಮಗೆ ಎಲ್ಲಿಲ್ಲದ ಹೊಗಳಿಕೆ, ಆನ್ ಲೈನ್ ಚರ್ಚೆ, ಟಾಪ್ಟೆನ್ ಪಟ್ಟ, ಬ್ಲಾಗ್ ಸಂಭ್ರಮ ಎಲ್ಲವೂ ಲಗ್ಗೆ ಇಡುತ್ತವೆ. ಅದೆಲ್ಲದರ ಹುಲುಸು ಫಸಲು ಪ್ರಕಾಶಕರಿಗೆ ಆದರೂ, ಲೇಖಕ ದಿನ ಬೆಳಗಾಗುವುದರಲ್ಲಿ ಕನ್ನಡದ ಮಹಾನ್ ಕಥೆಗಾರನೋ, ಕಾದಂಬರಿಕಾರನೋ ಆಗಿಬಿಡುತ್ತಾನೆ. ಹಾಗಾಗಿ, ಈಗೀಗ ಕನ್ನಡದ ‘ಬಹುಬೇಡಿಕೆ’ಯ ಬರಹಗಾರರೆಲ್ಲರ ನೆಟ್ಟನೇರ ದೃಷ್ಟಿ ಹಣದ ಮೇಲೇ ಎಂಬಂತಾಗಿಬಿಟ್ಟಿದೆ.

ಹಾಗಾಗಿ, 90ರ ದಶಕದಿಂದೀಚೆಗೆ ಬರೆಯುತ್ತಿರುವ ಹಲವರು (ಎಲ್ಲರನ್ನೂ ಈ ಕ್ಷಣಕ್ಕೆ ಹೆಸರಿಸುವುದು ಸಾಧ್ಯವಿಲ್ಲ!)ತಾತ್ವಿಕವಾಗಿ ಗಟ್ಟಿತನದ ಸಮಕಾಲೀನ ಬದುಕಿನ ಸೂಕ್ಷ್ಮಗಳನ್ನು ಅರ್ಥೈಸುವಂತಹ ಸತ್ವಶಾಲಿ ಕೃತಿಗಳನ್ನು ಕೊಡುತ್ತಿದ್ದರೂ ನಮ್ಮ ಜನಪ್ರಿಯ ಮಾಧ್ಯಮ(ಮುದ್ರಣ- ದೃಶ್ಯ)ಗಳಲ್ಲಿ ಅಂಥವರ ಬಗ್ಗೆ ಪ್ರಸ್ತಾಪವಾಗುವುದು ವಿರಳವೇ. ಆದರೆ, ಅದೇ ಹೊತ್ತಿಗೆ ಅಂತಹ ಸೂಕ್ಷ್ಮ ಬರವಣಿಗೆಯನ್ನೇನೂ ಹೊಂದದ ಆದರೆ, ನಿರೂಪಣೆಯ ತಂತ್ರಗಾರಿಕೆ, ಜನಪ್ರಿಯ ಶೈಲಿ, ಪತ್ತೇದಾರಿ ಅಂಶಗಳು, ಅವೈಚಾರಿಕವಾದ ಮತ್ತು ರಂಜನೀಯವಾದ ಬರಹಗಳ ಮೂಲಕ ಹಲವರು(ಅವರು ಹೆಸರು ಹೇಳುವುದು ಬೇಡ!) ‘ಪ್ರಚಾರ’ ಮತ್ತು ‘ಗಳಿಕೆ’ಯಲ್ಲಿ(ಎರಡೂ ಪದ ಜನಪ್ರಿಯ ಚಿತ್ರೋದ್ಯಮದ್ದವು!) ಮುಂದಿದ್ದಾರೆ!

ಈ ಸಾಲಿನ ಬರಹಗಾರರಲ್ಲಿ ಮುಖ್ಯವಾಗಿ ಕಾಣುವುದು ತನ್ನ ಕಣ್ಣೆದುರಿಗಿನ ಓದುಗ (ಒಂದು ರೀತಿಯಲ್ಲಿ ಫಾಸ್ಟ್ ಫುಡ್ ನಂತೆ ಸಾಹಿತ್ಯವನ್ನೂ ಧಾವಂತದಲ್ಲಿ ಮುಕ್ಕುವ, ರಂಜನೆಗಾಗಿಯೇ ಸಾಹಿತ್ಯವನ್ನು ಓದುವ ಮಂದಿ) ಹಸಿದಿದ್ದಾನೆ. ಆತನಿಗೆ ಈ ತಕ್ಷಣಕ್ಕೆ ಏನಾದರೂ ಕೊಡಲೇಬೇಕು. ಅವನ ತತಕ್ಷಣದ ಹಸಿವನ್ನು ನೀಗಿಸಿ ಸಂತೃಪ್ತಿಗೊಳಿಸಿದರೆ ಸಾಕು ಎಂಬಂತಹ ‘ದರ್ಶಿನಿ’ ಮಾದರಿಯ ಬರಹ. ಓದುಗನಿಗೆ ಒಂದು ಓದಿಗೆ ಎಲ್ಲವೂ ದಕ್ಕಿಬಿಡಬೇಕು. ಅದು ರಂಜನೀಯವಾಗಿರಬೇಕು, ಆತನಿಗೆ ಸಂತೃಪ್ತಿ, ಖುಷಿ ಕೊಡಬೇಕು, ವಾಹ್! ಎನ್ನುವಂತಿರಬೇಕು ಎಂಬಂತಹ ಸಿದ್ಧಸೂತ್ರಗಳು ಇಲ್ಲಿ ಕಾಣುತ್ತಿವೆ.

ಅಂದರೆ, ಸಾಹಿತ್ಯವೆಂಬುದು ಲೇಖಕ ಮತ್ತು ಓದುಗನ ಇಂಟ್ರೋಸ್ಪೆಕ್ಷನ್ ಗೆ ಸಾಧ್ಯವಾಗಬೇಕು, ಬದುಕನ್ನು ಅಥೈಸಿಕೊಳ್ಳುವ ಮನುಷ್ಯನ ನಿರಂತರ ಹುಡುಕಾಟದಲ್ಲಿ ಸಾಹಿತ್ಯ ಕೂಡ ಒಂದು, ಯಾವುದೇ ಕಲೆ ಅದರ ಕೇಳುಗ/ ನೋಡುಗ/ ಓದುಗನ ವ್ಯಕ್ತಿತ್ವದಲ್ಲಿ ಒಂದು ಸಣ್ಣ ಮಟ್ಟದ ಬದಲಾವಣೆಯನ್ನು ತರಬೇಕು ಎಂಬಂತಹ ನಿರೀಕ್ಷೆಗಳನ್ನು ಇಂತಹ ಕೃತಿಗಳಿಗೆ ಆರೋಪಿಸುವಂತಿಲ್ಲ. ಹಾಗಾಗಿ, ಇಂದು ಟಾಪ್ಟೆನ್ ಪಟ್ಟಿಗಳಲ್ಲಿ ಕಾಣುವುದೆಲ್ಲ ಇಂತಹ ಎರಡನೇ ದರ್ಜೆಯ ಸಾಹಿತ್ಯ ಕೃತಿಗಳೇ (ಸೃಜನಶೀಲ ಎನ್ನುವಂತಹ ಕೃತಿಗಳನ್ನು ಮಾತ್ರವೇ ಪರಿಗಣಿಸುವಾಗ). ಹಾಗಾದರೆ, ಇಂದು ಸಾಹಿತಿಯನ್ನು ಕಲೆ ಮತ್ತು ಏಸ್ತೆಟಿಕ್ ಪ್ರೇರಣೆಗಳಿಗಿಂತಲೂ ಮಾರುಕಟ್ಟೆಯ ಪ್ರೇರಣೆಯೇ ಹೆಚ್ಚು ಪ್ರಭಾವಿಸುತ್ತಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಬಹುತೇಕ ಬಹುಬೇಡಿಕೆಯ ಬರಹಗಾರರ ಪೈಕಿ ಹೌದು ಎಂಬುದೇ ಉತ್ತರವಾಗುತ್ತದೆ.

ಆದರೆ, ಎಲ್ಲಾ ಕಾಲದಲ್ಲೂ ಬಹುಬೇಡಿಕೆಯ ಲೇಕಖರು ಜನಪ್ರಿಯರೇ ಆಗಿದ್ದರು ಮತ್ತು ಅವರು ಮಾರುಕಟ್ಟೆಕೇಂದ್ರಿತವಾಗೇ ಬರೆಯುತ್ತಿದ್ದರು ಎಂದು ಯಾರಾದರೂ ವಾದಿಸಬಹುದು. ಆದರೆ, ಈಗಿನ ಪರಿಸ್ಥಿತಿಗೂ ಆಗಿನ ಸ್ಥಿತಿಗೂ ಭಿನ್ನತೆ ಇತ್ತು. ಆಗ ಹಾಗೆ ಬರೆಯುವವರನ್ನು ಅಕಾಡೆಮಿಕ್ ವಲಯ ಅಘೋಷಿತ ನಿಯಮದಂತೆ ಹೊರಗಿಡುತ್ತಿತ್ತು. ಆದರೆ, ಇವತ್ತು ಹಾಗಾಗುತ್ತಿಲ್ಲ. ಇವತ್ತು, ಅಕಾಡೆಮಿಕ್ ಆದ ಮತ್ತು ಸಾಹಿತ್ಯದ ಆಳ ಅಧ್ಯಯನದ ಕೊರತೆಯಿರುವ ಒಂದು ಪೀಳಿಗೆ ಪವರ್ಧಮಾನಕ್ಕೆ ಬಂದಿದೆ. ಅದಕ್ಕೆ ಅಕಾಡೆಮಿಕ್ ಮಾನದಂಡಗಳ ಮೂಲಕ ಒಂದು ಕೃತಿಯ ನೈಜತೆಯನ್ನು ನಿಕಶಕ್ಕೆ ಒಡ್ಡುವ ಶಕ್ತಿಯಾಗಲೀ, ಸಾಮರ್ಥ್ಯವಾಗಲೀ ಇಲ್ಲ. ಇನ್ನೊಂದು ಕಡೆ ‘ಜನಪ್ರಿಯ’ ಮತ್ತು ‘ಗಂಭೀರ’ ಎಂಬ ಪ್ರತ್ಯೇಕತೆ ಬೇಡ ಎಂಬ ವಾದ ಬಲವಾಗಿದೆ. ಹಾಗಿರುವಾಗ, ಇಂತಹ ಸಂದರ್ಭದ ಲಾಭ ಪಡೆದು ಮುನ್ನೆಲೆಗೆ ಬರುತ್ತಿರುವ ಮೀಡಿಯಾಕರ್ ಸಾಹಿತ್ಯದ ಬಗ್ಗೆ ಮಾತನಾಡುವವರಾರು?

ಹಾಗಾಗಿ, ಇಂದು ಕನ್ನಡದಲ್ಲಿ ಸದ್ದು ಮಾಡುತ್ತಿರುವುದೆಲ್ಲಾ ಬಹುತೇಕ ‘ರಂಜನೆ’ಯ ಸಾಹಿತ್ಯವೇ ವಿನಃ  ಬದುಕಿನ ಅರಿವಿನ ಪರಿಧಿಯನ್ನು ವಿಸ್ತರಿಸುವ ಬಗೆಯದ್ದಲ್ಲ…