ಬಾಬಣ್ಣನ ಮತ್ತೊಂದು ಪವಾಡ

16-img_1973

ಅದಿನ್ನೂ ಗೌರಿ ಹಬ್ಬದ ಹೊಳವು. ಮೂರು ತಿಂಗಳಿಂದ ಕಾನು ಬಯಲನ್ನು ಒಂದು ಮಾಡುವಂತೆ ಭೋರ್ಗರೆದ ಮಳೆ ಬಿಡುವು ನೀಡಿ, ಬಿಸಿಲ ಝಳ ನೆಲಕ್ಕೆ ತಾಗಿ ಜಡ್ಡುಗಟ್ಟಿದ ನೆಲದೆದೆಯಲ್ಲಿ ಬೆಚ್ಚನೆಯ ಬಸಿರು ಮೊಳೆವ ಕಾಲ. ಕಾಡಿನೆದೆಯಲ್ಲೂ ಸಣ್ಣಗೆ ಜೀವ ಜಗತ್ತು ಮೈಕೊಡವಿ ತಿಂಗಳುಗಳ ಜಡತೆ ಕಳಚಿ ಕೈಕಾಲು ಆಡಿಸುವ ಉಮೇದು ಪಡೆದಿತ್ತು.

ಹೊಳಗೋಡು ಬಾಬಣ್ಣ ಗದ್ದೆ ಬೇಸಾಯದ ಬಿಡುವು ಮಾಡಿಕೊಂಡು ಹಲವು ದಿನಗಳ ಬಳಿಕ ತೋಟಾ(ತೋಟಾಕೋವಿ) ಹೆಗಲಿಗೇರಿಸಿ ಹೊರಟ ಕಾವಿಕಲ್ಲಾಣಿಯತ್ತ ಮುಖ ಮಾಡಿ. ಜೊತೆಗೆ ಬಾಲದಂತೆ ಗಾಮ್ಯ ಮತ್ತವನ ಗೆಣೆಕಾರನೂ ಹೊರಟರು. ನಡು ಮಧ್ಯಾಹ್ನದ ಹೊತ್ತಾದ್ದರಿಂದ ಬಿಸಿಲು ಚೂರು ಚುರುಕಾಗೇ ಇತ್ತು. ಕಣ್ಣು ಹಾದೆಲ್ಲೆಲ್ಲಾ ಕಾಲುದಾರಿಯುದ್ದಕ್ಕೂ ಹಸಿರು ಹಾವಸೆಯ, ಹರಿವ ಜಲಬುಗ್ಗೆಯ ನೀರೇ. ನೀರದಾರಿಯಲ್ಲೇ ಹೆಜ್ಜೆ ಇಕ್ಕುತ್ತಾ ಹೊರಟರು ಮೂವರು.

ಮನೆಯ ಹಿತ್ತಿಲಿನಿಂದ ಹೊರಟು ಎರಡು ಫರ್ಲಾಂಗು ಕಾಡಿನ ಕಿರುದಾರಿಯಲ್ಲಿ ಸಾಗಿದ ಅವರು ಇನ್ನೇನು ಕಾವಿಕಲ್ಲಾಣಿ ಏರಬೇಕು ಎನ್ನುವ ಹೊತ್ತಿಗೆ ಆ ಕಾಲ್ದಾರಿ ತೊರೆದು ಗಿಡ(ಕಾನು) ನುಗ್ಗಿದರು. ದಟ್ಟ ಕುಮಸಲು ಮಟ್ಟಿ, ಕಾಂಗ್ರೆಸ್ ಗಿಡಗಳ ನಡುವೆ ಕಚ್ಚು ಕುಲ್ಡಿ ನೊಣ, ನೊರ್ಜುಗಳನ್ನು ಕೈಯಲ್ಲೇ ಜಾಡಿಸುತ್ತಾ ಹೆಚ್ಚೂ ಕಡಿಮೆ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ನಡುಬಗ್ಗಿಸಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನಡೆದರು.

ಬಾಬಣ್ಣ ಮುಂದೆ ಕಣ್ಣುಗಳನ್ನು ಲಂಟಾನದ ಗೀಜಿನ ನಡುವೆ ಕಣ್ಣು ಹಾಯಿಸುವವರೆಗೆ ದೃಷ್ಟಿ ನೆಟ್ಟು, ಪ್ರಾಣಿಗಳ ಹೆಜ್ಜೆ ಸಪ್ಪಳ ಕೇಳಲು ಕಿವಿಯಗಲಿಸಿ ಚುರುಕುಗಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಇತ್ತ ಗಾಮ್ಯ ತನ್ನ ಚೋಟು ಬೀಡಿ ಬಾಯಲ್ಲಿ ಕಚ್ಚಿ, ಒಡೆಯನ ಹಿಂದೆ ಹಿಂದೆ ಪಾಲಿಸುತ್ತಿದ್ದ. ನಡುವೆ ಕಚ್ಚಿದ ಬೀಡಿಯ ಹೊಗೆ ಎದೆಯಲ್ಲಿ ಸಿಕ್ಕಿ, ಕೊಸಕ್ಕನೆ ಕೆಮ್ಮಿದ. ಬಾಬಣ್ಣ ಇನ್ನೇನು ಹಿಂತಿರುಗಿ ಗಾಮ್ಯಗೆ ಉಗಿಯಬೇಕು ಮಕಕ್ಕೆ ಎನ್ನುವಷ್ಟರಲ್ಲಿ ಹತ್ತೇ ಮಾರು ದೂರದಲ್ಲಿ ದಡಕ್ಕೆಂದ ಸದ್ದು ಕೇಳಿತು. ಬಾಬಣ್ಣ ಸರಸರನೆ ಸಾಗಿ ನೋಡುತ್ತಾರೆ; ಭರ್ಜರಿ ಕಡವೆಯ ಜೋಡಿಯೊಂದು ಕುಮಸಲು ಮಟ್ಟಿಯ ಮೇಲೇ ಜಿಗಿದು ಮರೆಯಾಯಿತು.

ಇದು ಈ ಗಾಮ್ಯನ ಕೆಮ್ಮು ಮಾಡಿದ ಎಡವಟ್ಟು. ಇಲ್ಲವಾಗಿದ್ರೆ ಜೋಡಿಯಾಗೇ ನಿಂತಿದ್ದ ಎರಡನ್ನೂ ಒಂದೇ ಈಡಿಗೆ ಹೊಡೆದುರುಳಿಸುತ್ತಿದ್ದೆ ಎಂದು ಹಣೆ ಚಚ್ಚಿಕೊಂಡು ಬಾಬಣ್ಣ, “ಥೂ ಲೌಡಿಮಗನೆ,.. ನಿನಗೇನಾತೊ, ಯಾವಾಗ್ನೋಡಿದ್ರೂ ಆ ಬೀಡಿ ಕಚ್ಚಕೊಂಡಿರ್ತಿಯಲ್ಲೊ. ನಿನ್ನ ಮನೆಹಾಳಾಗ… ರಂಡೇ ಮಗನೆ,.. ” ಎಂದು ವಾಚಾಮಗೋಚರ ಉಗಿದರು. ಅದನ್ನೂ ಗುಸುಗುಸು ದನಿಯಲ್ಲೇ !

ಆದರೆ, ಅವರಿಗೆ ಒಂದು ನಂಬಿಕೆ ಇತ್ತು. ಜೋಡಿ ಮಿಕ ಏನೇ ಆದರೂ ಬಹಳ ದೂರ ಹೋಗಲಾರವು. ಹೇಗಾದರೂ ಮಾಡಿ ಪತ್ತೆ ಮಾಡಲೇಬೇಕು ಎಂದು ಕಡವೆಗಳ ಹೆಜ್ಜೆ ಜಾಡು ಹಿಡಿದು ಸಾಗಿದರು. ಸದ್ಯ ಅವತ್ತು ಅವರ ಬೇಟೆನಾಯಿಗಳು ಜೊತೆಗಿರಲಿಲ್ಲ. ಕಾವಿಕಲ್ಲಾಣೆಯ ಬದಿಯಲ್ಲೇ ಇರುವ ಸಂಪಳ್ಳಿ ಮನೆಯ ನಾಯಿಗಳೂ ಇವರ ಸುಳಿವು ಹಿಡಿದು ಬಂದಿರಲಿಲ್ಲ. ಹಾಗಾಗಿ ಬಾಬಣ್ಣದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇರಲಿಲ್ಲ. ಕಾವಿ ಕಲ್ಲಾಣೆಯನ್ನು ಏರಿ, ಇಳಿದು ಬಳುವಳಿಗುಡ್ಡದ ಕಾಲಿನ ಕಣಿವೆಯತ್ತ ಹೆಜ್ಜೆ ಹಾಕಿದರು. ದನಕರುಗಳ ಸದ್ದೂ ಇರಲಿಲ್ಲ. ಹಸಿ ನೆಲವಾದ್ದರಿಂದ ಕಡವೆ ಹೆಜ್ಜೆಗಳು ಅರ್ಧ ಫರ್ಲಾಂಗು ಆದರೂ ಅಚ್ಚಳಿಯದೇ ಮೂಡಿದ್ದವು. ಇನ್ನಷ್ಟು ದೂರು ಸಾಗಿದರೂ ಅವುಗಳನ್ನು ಪತ್ತೆ ಮಾಡುವುದು ಕಷ್ಟವೇನಿರಲಿಲ್ಲ.

ಆದರೆ, “ಕೈಯಲ್ಲೇ ವಿದ್ಯೆ ಇಟ್ಟುಕೊಂಡು ಸುಖಾಸುಮ್ಮನೆ ಅಲೆಯುವುದೇಕೆ ಮಾರಾಯ್ರೆ, ನೋಡಾಣ, ಮದ್ದು ಹೂಡಿ” ಎಂದ ಗಾಮ್ಯ ಅಂಜುತ್ತಲೇ. ತಿರುಗಿ ಉಗಿದಾರು ಎಂಬ ಅಂಜಿಕೆ ಅವನದ್ದು. ಮೇಲೆ ಮುಗಿಲು ದಟ್ಟೈಸುತ್ತಿದ್ದುದನ್ನು ಕಂಡು ಮಳೆ ಬಂದರೆ ಕೆಲಸ ಕೆಟ್ಟಂತೆಯೇ ಎಂದು ಎಣಿಸಿದ ಬಾಬಣ್ಣ ಗಾಮ್ಯನ ಸಲಹೆ ಸಮಯೋಚಿತವೆ ಎಂದುಕೊಂಡು, ಮಿಕದ ಹೆಜ್ಜೆಯನ್ನು ಸರಿಯಾಗಿ ಪರಾಂಬರಿಸಿ “ಇಲ್ಲೇ ಇರ್ರೋ, ಬಂದೆ..” ಎಂದು ತನ್ನ ಕಾಲಾಳುಗಳಿಗೆ ಹೇಳಿ ಮಟ್ಟಿ ನುಗ್ಗಿ ಹೋದರು.

ಐದೇ ನಿಮಿಷದಲ್ಲಿ ಕೈಯಲ್ಲಿ ಸೊಪ್ಪು ಹಿಡಿದು ಬಂದ ಬಾಬಣ್ಣ ಪ್ರಾಣಿಯ ಹೆಜ್ಜೆಯ ಮೇಲೆ ಸೊಪ್ಪು ಇಟ್ಟು ತನ್ನ ಕಾಲಿನ ಹೆಬ್ಬೆರಳಲ್ಲಿ ಮೆಟ್ಟಿ ಮುಗಿಲತ್ತ ಮುಖಮಾಡಿ ಮಂತ್ರದಂತೆ ಏನನ್ನೋ ಪಠಿಸಿದ. ಬಳಿಕ ಕಡವೆ ಹೋದ ದಿಕ್ಕಿಗೆ ನಳಿಕೆ ತೋಟಾವನ್ನು ನೇರ ಗುರಿಮಾಡಿ ಕಣ್ಣಮುಂದೆ ಯಾವುದೋ ಪ್ರಾಣಿ ಇದೆ ಎಂಬಂತೆ ಕಾದ. ಗಾಮ್ಯ ಮತ್ತು ಆತನ ಗೆಣೆಕಾರ ತುಸು ಹಿಂದಕ್ಕೆ ದೂರ ಸರಿದು ಮರದ ಮರೆಯಲ್ಲಿ ಅಡಗಿ ನಿಂತರು. ಒಂದು, ಎರಡು, ಮೂರು,… ಐದು ನಿಮಿಷವಾಯ್ತು, ಆರು, ಏಳು…. ಢಂ!

ಇಡೀ ಕಾಡೇ ಮೊಳಗಿತು ಗುಂಡಿನ ಸದ್ದಿಗೆ. ಗಾಮ್ಯ ದಢಕ್ಕನೆ ಜಿಗಿದು ನೋಡುತ್ತಾನೆ, ಗುಂಡು ಸಿಡಿದ ಹೊಗೆ, ಎದುರಿಗೆ ನಗುತ್ತಾ ನಿಂತಿದ್ದ ಬಾಬಣ್ಣ.. ಬಿಟ್ಟರೆ ಇನ್ನೇನು ಕಾಣಿಸುತ್ತಿಲ್ಲ. ಅರೆ! ಗುಂಡು ಹಾರಿದ್ದು ಕೈತಪ್ಪಿಯೇ? ಎಂದುಕೊಂಡ ಗಾಮ್ಯ, “ಒಡೆಯಾ ಏನಾತು? ಯಾಕ್ರೀ.. ” ಕಾಳಜಿ, ಭಯ ಮತ್ತು ನಿರಾಶೆ ಬೆರೆತ ದನಿಯಲ್ಲಿ.

“ಮುಂದೆ ಬಂದು ನೋಡಾ ಪುಕ್ಕಲು ಲೌಡಿಗಂಡ..” ಎಂದ ಬಾಬಣ್ಣ ಇನ್ನು ತನ್ನ ಕೆಲಸ ಮುಗಿಯಿತು ಎಂಬಂತೆ ನಿರಾಳನಾಗಿ ನಾಲ್ಕು ಹೆಜ್ಜೆ ಹಾಕಿ ಮುಂದೆ ನೆಲಕ್ಕೆ ಒರಗಿದ್ದ ಕಡವೆಯ ಬಳಿ ಸಾಗಿದ. ಅವರನ್ನು ಹಿಂಬಾಲಿಸಿದ ಗಾಮ್ಯ, ಕಡವೆಯ ಕಂಡು ಹೌಹಾರಿದ. ಭರ್ಜರಿ ನಾಕಾಳು ಹೋರಿ(ನಾಲ್ವರು ಹೊರುವಷ್ಟು ಭಾರದ್ದು) ಕಂಡು “ಭಾರೀ ಹೋರಿ ಕಣ್ಲಾ, ಒಂದೇ ಏಟಿಗೆ ಒರಗ್ತು ನೋಡು ಹೆಂಗೆ” ಎಂದು ಗೆಣೆಕಾರಗೆ ಹೇಳಿ, ಕೊಂಬು ಹಿಡಿದು ಅಲುಗಾಡಿಸಿ, ಆಗಷ್ಟೇ ಬಿಸಿಯುಸಿರುವ ಸೂಸುತ್ತಿದ್ದ ಮೂಗಿನ ಹೊಳ್ಳೆಗಳನ್ನು ಗಮನಿಸಿದ. ಬಾಯಲ್ಲಿ ಬುರುಬು ಬರಲಾರಂಭಿಸಿತ್ತು. ಗುಂಡೇಟು ನೇರ ಎದೆಯ ಪಕ್ಕೆಗೇ ಬಿದ್ದಿದ್ದರಿಂದ ರಕ್ತ ಚಿಲ್ಲನೆ ಚೀರುತ್ತಿತ್ತು.

ಗಾಮ್ಯ ಮಿಕವನ್ನು ಹೊರಳಿಸಿ, ಕಾಲು, ಕತ್ತು ಸರಿಸಿ ನೋಡುತ್ತಲೇ ಇದ್ದ. ಅಷ್ಟರಲ್ಲಿ, ಬಾಬಣ್ಣ, “ಲೇ,.. ಇನ್ನೂ ಏನ್ ನೋಡ್ತಿಯಾ, ಗುಡುಗು ಶುರುವಾತು, ಬೇಗೆ ದಂಡಿಗೆ ಕಡಿ, ಹೆಗಲು ಕೊಡ್ರಿ,.. ಹೊತ್ತಾತು..” ಎಂದ. ಬಾಬಣ್ಣ ಧಾವಂತ ಅರಿತ ಕಾಲಾಳುಗಳಿಬ್ಬರೂ ಬಾಡೂಟ, ಸೇಂದಿಯ ಮತ್ತಿನಲ್ಲಿ ಆಗಲೇ ಖದರುಗುಟ್ಟಿ ಲಗುಬಗೆಯಲ್ಲಿ ದಂಡಿಗೆ ಕಡಿದು, ಮಿಕದ ಕಾಲು ಕಟ್ಟಿ ದಂಡಿಗೆ ತೂರಿಸಿ ಹೆಗಲು ಕೊಟ್ಟರು…

ತಪ್ಪುಗಳ ಪಹರೆಯಲಿ….

ಮತ್ತೆ ಮತ್ತೆ ಖುಷಿಯಾಗುಗ ಓದು..

ಮಲೆಯ ಮಾತು

ಇಡಿಯಾಗುವುದೊಂದು

ಮೆಲುನಡಿಗೆಯ ಸಾವು.

ನಾನಂದುಕೊಂಡ, ಕನಸಿದ

ಎಲ್ಲವೂ ತದ್ರೂಪದಂತೆ

ನಿಜವಾದರೆ,…..

ಬದುಕೊಂದು ಕೊನೆಯಿಲ್ಲದ

ಯಶಸ್ಸುಗಳ ಹಳಸಲು ಪಲ್ಲವಿ.

ತಪ್ಪು;

ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.

ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ

ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….

ಆದರೂ,

ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,

ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ

ಭ್ರಮೆಯ ಕೂಸು;

ತಪ್ಪಿಗೆ ನಾನೇ ಅಂಜುವ ಪರಿ.

ಕೊನೆಗೂ ತಪ್ಪು-

ನಾನಿರುವ ಪರಿಗೊಂದು ರುಜುವಾತು,

ನಾನಾಗುವ ಸ್ಥಿತಿಗೊಂದು ಕದಲಿಕೆ

ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.

ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ

ನಾನು ಇಂಚಿಂಚೇ ಬೆಳೆದೆ!

(ಇದು ಹ್ಯೂ ಪ್ರಾಥರ್ ಎಂಬ ಅಮೆರಿಕನ್ ಲೇಖಕನ ‘ನೋಟ್ಸ್ ಟು ಮೈಸೆಲ್ಫ್’ ಕೃತಿಯಲ್ಲಿನ ಒಂದು ‘ನೋಟ್’ನ ಭಾವಾನುವಾದ ಕಾವ್ಯ ರೂಪ 2000ನೇ ಸಾಲಿನಲ್ಲಿ ಅನುವಾದಿಸಿದ್ದು)

View original post

ಪ್ರೇಮದ ಬಗ್ಗೆ…

ಮಲೆಯ ಮಾತು

ನಿನ್ನೆಯ ಸತ್ಯ ನಾಳೆಗೆ ಸುಳ್ಳಾಗುವುದೇ ದಿಟವಿರುವ

ಇಲ್ಲಿ;

ನಾವೆಲ್ಹ ಹಸಿ ಸುಳ್ಳರು.

ಆದರೆ, ಲಿಪಿಯ ಮಾತು ಬೇರೆ;

ಅದು ಅಳಿಸಲಾರದ್ದು, ಅಳಿಸಬಾರದ್ದು,

ನಾವು ಆ ದಿಟದ ಸಾಕ್ಷ್ಯವನ್ನೇ ನೆಚ್ಚಿದ್ದೇವೆ.

ನಿನ್ನ ಮೇಲಿನ ಈಗಿನ ನನ್ನ ಪ್ರೇಮ

ಕಳೆದ ವಸಂತಕ್ಕಿಂತ ಭಿನ್ನ,

ಅದು ಹಾಗಲ್ಲವೆಂದಾದರೆ, ಅದು ಪ್ರೇಮವೆಂಬುದೇ ಸುಳ್ಳು!

ಇದು ತಿಳಿದೂ,

ನಾವು ಪ್ರೇಮ-ಪ್ರೇಮವೆಂದು ಹಲಬುತ್ತೇವೆ,

ಹೊಸ ಮೊಗ್ಗಿಗೆ ತಾವು ನೀಡಿ

ಉದುರುವ ಹೂವೆಂದು ಅರಿಯದೆ,

ಕಿಲುಬು ಪ್ರೇಮವನ್ನೇ ಕಾಸಿನ ಬಿಲ್ಲೆಯಂತೆ ಜತನ ಮಾಡುತ್ತೇವೆ!

(ಡಿ.ಎಚ್. ಲಾರೆನ್ಸ್  Lies About Love ಪದ್ಯದ ಭಾವಾನುವಾದ ಇದು)

View original post

ಮಠ-ಮಾನ್ಯಗಳಲ್ಲಿರುವುದೂ ಕಪ್ಪುಹಣವೇ ಅಲ್ಲವೇ?!

 

 

 

 

 

 

 

 

 

ಕಪ್ಪು ಹಣ…!

ದೇಶದಲ್ಲಿ ಕಳೆದ ಒಂದು ತಿಂಗಳಿಂದ ಕಿವಿ ಮುಚ್ಚಿದರೂ ಮಾರ್ದನಿಸುತ್ತಲೇ ಇರುವ ಪದಪುಂಜ… ಯಾರ ಬಾಯಲ್ಲಿ ಕೇಳಿದರೂ ಕಪ್ಪು ಹಣದ ಮಾತೇ! ಬಾಬಾ ರಾಮ ದೇವ ಎಂಬ ಮೂಲಿಕೆ ಹಿಡಿದುಕೊಂಡು ಯೋಗಾಯೋಗ ಪರೀಕ್ಷೆಗೆ ಬಂದ ವ್ಯಕ್ತಿ ರಾಜಕೀಯ ಪಕ್ಷ ಕಟ್ಟುವ ಪೂರ್ವ ತಯಾರಿಗಾಗಿ ನಡೆಸಿದ ತಾಲೀಮು ಇದೀಗ ದೇಶವ್ಯಾಪಿ ಮಾತು- ತರತರ ಕಥೆಯೂ ಆಗಿಬಿಟ್ಟಿದೆ. ಬಾಬಾನ ಅಸಲೀ-ನಕಲೀ ಮುಖಗಳ ಅನಾವರಣವೂ ದೈನಿಕ ಧಾರಾವಾಹಿಯ ಸ್ವರೂಪ ಪಡೆದುಕೊಂಡಿದೆ.

ಯಾವುದೇ ವ್ಯವಸ್ಥೆಯಲ್ಲಿ ತೀರಾ ಸುಲಲಿತವಲ್ಲದ ರಾಜಕೀಯ-ಆರ್ಥಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತೀರಾ ಸಾಮಾನ್ಯನ ಹುಂಬತನದಿಂದ ಪ್ರಯತ್ನಿಸಿದರೆ ಎಂಥ ಎಡವಟ್ಟುಗಳು, ಪ್ರಹಸನಗಳಿಗೆ ಈಡಾಗಬಹುದು ಎಂಬುದಕ್ಕೆ ಈ ಬಾಬಾ ಸಾಕ್ಷಿಯಾಗಿ ನಿಂತಿದ್ದಾರೆ. ಸಂವಿಧಾನದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ, ದೇಶದ ಪ್ರಜಾತಂತ್ರದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಇಲ್ಲದೆ ಈ ಬಾಬಾ ನಗೆಪಾಟಲಿಗೂ ಈಡಾಗಿಬಿಟ್ಟರು. ಅವರು ಎತ್ತಿಕೊಂಡ ವಿಷಯದ ಮಹತ್ವದ ಬಗ್ಗೆ ಅರಿವಿದ್ದ ಜನತೆ ಕೂಡ ಅವರ ಶಸಸ್ತ್ರ ಪಡೆ ರಚನೆ, ಹಣ ತರಲು ಇದೀಗಲೇ ನಿರ್ಧಾರ ಕೈಗೊಳ್ಳಬೇಕು ಎಂಬಂತಹ ಬಾಲಿಶಃ ಮತ್ತು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾದ ನಿಲುವುಗಳನ್ನು ನೋಡಿ ಇದು ಮೂರ್ಖರ ಆಟ ಎಂದುಕೊಂಡರು.

ಈ ಬಾಬಾರ ಈ ಪ್ರಹಸನ (ಸತ್ಯಾಗ್ರಹ ಎಂಬ ಮೌಲಿಕ ಪದವನ್ನು ಬಳಸಲಾಗದ)ದಿಂದಾಗಿ ಬಾಬಾ ಅವರ ಸಣ್ಣತನ, ಅವರನ್ನು ಛೂ ಬಿಟ್ಟ (ಕಾಂಗ್ರೆಸ್ ವರಸೆ) ಸೂತ್ರಧಾರರ ತಂತ್ರದ ವೈಫಲ್ಯ,  ಇದೆಲ್ಲದರಿಂದಾಗಿ ದೇಶದ ಭವಿಷ್ಯದ ದೃಷ್ಟಿಯಿಂದ ತೀರಾ ಮಹತ್ವದ್ದಾಗಿದ್ದ ಕಪ್ಪುಹಣದ ಅಜೆಂಡಾ ಹಳಿತಪ್ಪಿದ್ದು ಎಲ್ಲರಿಗೆ ಈಗ ಮನವರಿಕೆಯಾಗುತ್ತಿದೆ. ಅದೇ ಹೊತ್ತಿಗೆ ಮತ್ತೊಂದು ಅವಘಡವೂ ಘಟಿಸಿಬಿಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಹಜಾರೆ ಅವರು ಕೈಗೊಂಡಿದ್ದ ಸತ್ಯಾಗ್ರಹ(ಇಲ್ಲಿ ಸತ್ಯಾಗ್ರಹ ಪದಕ್ಕೆ ಸಲ್ಲುವ ಎಲ್ಲ ಮರ್ಯಾದೆಯೂ ಸಲ್ಲುತ್ತದೆ ಎನ್ನಬಹುದು) ಕೂಡ ತನ್ನ ಗಂಭೀರತೆಗೆ ಮುಕ್ಕು ತಂದುಕೊಂಡಿದೆ. ಬಾಬಾ ಅಂದು ಹಜಾರೆಯವರನ್ನು ಬೆಂಬಲಿಸಿದ್ದು, ಅದಕ್ಕೆ ಪ್ರತಿ

ಯಾಗಿ ಹಜಾರೆ ಬಾಬಾರನ್ನು ಬೆಂಬಲಿಸಿದ್ದು, ಈ ಸಂಬಂಧ ನಡೆದ ಹಲವು ಬೆಳವಣಿಗೆಗಳು ಜನಲೋಕಪಾಲ್ ಮಸೂದೆಯ ಕರಡು ಸಮಿತಿ ಪ್ರಕ್ರಿಯೆಗಳಿಗೆ ಕೂಡ ಹಿಂದೇಟು ನೀಡಿದವು.

ವಿವೇಚನೆ ಮತ್ತು ವಾಸ್ತವತೆ

ಯ ಅರಿವಿಲ್ಲದ ಒಬ್ಬ ವ್ಯಕ್ತಿಯಿಂದಾಗಿ ಒಂದು ಘನಗಂಭೀರ ವಿಷಯ ಮತ್ತು ಚಳವಳಿ ಹೇಗೆ ನಗೆಪಾಟಲಿನ ಸಂಗತಿಯಾಗಿ ಪರ್ಯಾವಸಾನ ಹೊಂದಬಹುದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಈ ಬಾಬಾ ಪ್ರಹಸನಕ್ಕಿಂತ ಬೇರೊಂದು ನಿದರ್ಶನ ಸಿಗಲಾರದು. ಹೀಗೆ ಅನ್ನಿಸಲು ರಾಜನೀತಿ, ಸಂವಿಧಾನಿಕ ಅಂಶಗಳು, ಆಡಳಿತ ವ್ಯವಸ್ಥೆ ಮುಂತಾದ ಬಗೆಗಿನ ಬಾಬಾರ ತಿಳಿವಳಿಕೆಯ ಮಿತಿಯೊಂದೇ ಕಾರಣವಲ್ಲ. ಬದಲಾಗಿ, ಅವರು ಅನುಸರಿಸಿದ ಅನುಮಾನಾಸ್ಪದ ದಾಟಿ, ಬೇಡಿಕೆ ಮತ್ತು ಚಳವಳಿಯನ್ನು ಸಂಘಟಿಸಿದ ರೀತಿ ಕೂಡ ಕಾರಣ. ಕಪ್ಪುಹಣದ ಬಗ್ಗೆ ಮಾತನಾಡುವಾಗ, ದುಂದುವೆಚ್ಚ, ರಾಷ್ಟ್ರೀಯ ಆದಾಯ ನಷ್ಟ ಮುಂತಾದ ವಿಷಯಗಳು ಅದರೊಂದಿಗೇ ಮಿಳಿತವಾಗಿರುತ್ತವೆಯಾದ್ದರಿಂದ ಹಣಕಾಸಿನ ಬಗ್ಗೆ ತಾವು ಎಚ್ಚರದಿಂದರಬೇಕು, ಸರಳತೆ ಕಾಯ್ದುಕೊಳ್ಳಬೇಕು ಎಂಬ ಪ್ರಾಥಮಿಕ ತಿಳಿವಳಿಕೆ ಕೂಡ ಇಲ್ಲದೆ ಐಶಾರಾಮಿ ವ್ಯವಸ್ಥೆಯಡಿ ಚಳವಳಿ ಸಂಘಟಿಸಿ ದಿಗ್ವಿಜಯ ಸಿಂಗ್ ರಂಥವರ ಕಟು ಟೀಕೆಯನ್ನು ಕಟ್ಟಿಕೊಂಡೇ ‘ಉಪವಾಸ’ ಆರಂಭಿಸಿದ್ದು ಕೂಡ ಪ್ರಮಾದವೇ. ಇನ್ನು ತನ್ನ ಟ್ರಸ್ಟ್ನಲ್ಲೇ ಸಾವಿರಾರು ಕೋಟಿ ಹಣ ಇಟ್ಟುಕೊಂಡು ಗಾಜಿನ ಮನೆಯಲ್ಲಿದ್ದುಕೊಂಡು ಮತ್ತೊಬ್ಬರ ಮನೆಯತ್ತ ಕಲ್ಲು ಬೀಸುವ ಹುಚ್ಚುತನ ಬೇಡವಾಗಿತ್ತು. ಹಾಗೇ ಈ ಬಾಬಾ ಕೆಲವೇ ದಿನಗಳ ಹಿಂದೆ ನಡೆಸಿದ ರಾಷ್ಟ್ರವ್ಯಾಪಿ ಯೋಗ ಶಿಬಿರ ಯಾತ್ರೆಯ ಅಂಗವಾಗಿ ಕರ್ನಾಟಕಕ್ಕೆ ಬಂದಾಗ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮುಖ್ಯವಾಗಿ ಪ್ರಸ್ತಾಪವನ್ನೇ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಕೂಡ.

ಅದಕ್ಕಿಂತ ಮುಖ್ಯವಾಗಿದ್ದು,

ದೇಶದ ಮಠ-ಮಾನ್ಯ, ದೇವಾಲಯ, ಚರ್ಚು, ಮಸೀದಿ- ದರ್ಗಾಗಳಲ್ಲಿ ಸಂಗ್ರಹವಾಗಿರುವ ಲೆಕ್ಕವಿಲ್ಲದಷ್ಟು ಹಣದ ಬಗ್ಗೆ ಈ ಬಾಬಾ ಆದಿಯಾಗಿ ಯಾರೂ- ಬಿಜೆಪಿಯವರಾಗಲೀ, ಸಂಘ-ಪರಿವಾರದವರಾಗಲೀ, ಕೊನೆಗೆ ಕಾಂಗ್ರೆಸ್ ಆಗಲೀ- ತುಟಿಬಿಚ್ಚದಿರುವುದು. ಈ ಧಾರ್ಮಿಕ ಕೇಂದ್ರಗಳಲ್ಲಿ ಸಂಗ್ರಹವಾಗುವ ದೇಣಿಗೆ, ಕಾಣಿಕೆ, ಕೊಡುಗೆ, ಬಹುತೇಕ ಸಂದರ್ಭದಲ್ಲಿ ರಾಜಕಾರಣಿಗಳ ಕಪ್ಪುಹಣ ಕೂಡ ದೇಶದ ತೆರಿಗೆ ವಂಚ

ನೆಯೊಂದಿಗೆ ಅಕ್ರಮವೇ ಅಲ್ಲವೇ? ತೆರಿಗೆ ಕಾನೂನಿನಡಿಯೇ ದೇಣಿಗೆ ನೀಡಿದ್ದರೂ ಅದು ದೇಶದ ತೆರಿಗೆಯಿಂದ ವಿನಾಯ್ತಿ ಪಡೆದ ಮೇಲೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕಲ್ಲವೇ? ಆದರೆ, ಇವತ್ತು ಎಷ್ಟು ಧಾರ್ಮಿಕ ಸಂಸ್ಥೆಗಳು ತಮ್ಮಲ್ಲಿ ಕೊಳೆಯುತ್ತಿರುವ ಹಣವನ್ನು ‘ಶಿಕ್ಷಣವೆಂಬ ದಂಧೆ’ಯನ್ನು ಹೊರತುಪಡಿಸಿ ಇನ್ನಿತರ ಸಾರ್ವಜನಿಕ (ಅದರಲ್ಲೂ ಸಮಾಜದ ಎಲ್ಲ ಸ್ತರದ, ಸಮುದಾಯಗಳ ಜನ) ಉದ್ದೇಶಕ್ಕೆ ಬಳಸುತ್ತಿವೆ? ಇನ್ನು ಅಧಿಕಾರದಲ್ಲಿರುವ ರಾಜಕಾರಣಿಗಳು ಭ್ರಷ್ಟಾಚಾರದ ಹಣವನ್ನು ಮಠಗಳಲ್ಲಿ ಇಟ್ಟು ಭದ್ರಪಡಿಸುವ ಸಂಗತಿ ಕನ್ನಡಿಗರಿಗೆ ಹೊಸದೇನಲ್ಲ.

ಪರಿಸ್ಥಿತಿ ಹೀಗಿರುವಾಗ ಮಠ-ಮಂದಿರಗಳೂ (ಎಲ್ಲಾ ಧರ್ಮದ) ರಾಷ್ಟ್ರೀಕರಣಗೊಂಡರೆ ನಿಜವಾಗಿಯೂ ದೇಶದ ಹಣ ದೇಶದ ಸರ್ವಜನತೆಯ ಶ್ರೇಯೋಭಿವೃದ್ಧಿಗೆ ಬಳಕೆಯಾಗಬಹುದಲ್ಲವೆ? ಈ ನಿಟ್ಟಿನಲ್ಲಿ ಬಿಜೆಪಿ, ಸಂಘ-ಪರಿವಾರ, ಬಾಬಾಗಳು ಪರವಾಗಿ ಬರುವುದಿರಲಿ ಅದನ್ನು ವಿರೋಧಿಸಿ ಇದೇ ರಾಮ್ದೇವ್ ನೇತೃತ್ವದಲ್ಲೇ ಮತ್ತೊಂದು ಪ್ರಹಸನಕ್ಕೆ ಇಳಿದಾರು. ಆದರೆ, ನಮ್ಮ ಎಡ ಪಕ್ಷಗಳು, ಬ್ಯಾಂಕ್ ರಾಷ್ಟ್ರೀಕರಣದಂತಹ ಪ್ರಗತಿಪರ ನಿಲುವು ತೆಗೆದುಕೊಂಡಿದ್ದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಆರ್ ಜೆಡಿ, ಡಿಎಂಕೆಯಂತಹ ಪಕ್ಷಗಳು ಏನು ಹೇಳಬಹುದು? !