ಅದಿನ್ನೂ ಗೌರಿ ಹಬ್ಬದ ಹೊಳವು. ಮೂರು ತಿಂಗಳಿಂದ ಕಾನು ಬಯಲನ್ನು ಒಂದು ಮಾಡುವಂತೆ ಭೋರ್ಗರೆದ ಮಳೆ ಬಿಡುವು ನೀಡಿ, ಬಿಸಿಲ ಝಳ ನೆಲಕ್ಕೆ ತಾಗಿ ಜಡ್ಡುಗಟ್ಟಿದ ನೆಲದೆದೆಯಲ್ಲಿ ಬೆಚ್ಚನೆಯ ಬಸಿರು ಮೊಳೆವ ಕಾಲ. ಕಾಡಿನೆದೆಯಲ್ಲೂ ಸಣ್ಣಗೆ ಜೀವ ಜಗತ್ತು ಮೈಕೊಡವಿ ತಿಂಗಳುಗಳ ಜಡತೆ ಕಳಚಿ ಕೈಕಾಲು ಆಡಿಸುವ ಉಮೇದು ಪಡೆದಿತ್ತು.
ಹೊಳಗೋಡು ಬಾಬಣ್ಣ ಗದ್ದೆ ಬೇಸಾಯದ ಬಿಡುವು ಮಾಡಿಕೊಂಡು ಹಲವು ದಿನಗಳ ಬಳಿಕ ತೋಟಾ(ತೋಟಾಕೋವಿ) ಹೆಗಲಿಗೇರಿಸಿ ಹೊರಟ ಕಾವಿಕಲ್ಲಾಣಿಯತ್ತ ಮುಖ ಮಾಡಿ. ಜೊತೆಗೆ ಬಾಲದಂತೆ ಗಾಮ್ಯ ಮತ್ತವನ ಗೆಣೆಕಾರನೂ ಹೊರಟರು. ನಡು ಮಧ್ಯಾಹ್ನದ ಹೊತ್ತಾದ್ದರಿಂದ ಬಿಸಿಲು ಚೂರು ಚುರುಕಾಗೇ ಇತ್ತು. ಕಣ್ಣು ಹಾದೆಲ್ಲೆಲ್ಲಾ ಕಾಲುದಾರಿಯುದ್ದಕ್ಕೂ ಹಸಿರು ಹಾವಸೆಯ, ಹರಿವ ಜಲಬುಗ್ಗೆಯ ನೀರೇ. ನೀರದಾರಿಯಲ್ಲೇ ಹೆಜ್ಜೆ ಇಕ್ಕುತ್ತಾ ಹೊರಟರು ಮೂವರು.
ಮನೆಯ ಹಿತ್ತಿಲಿನಿಂದ ಹೊರಟು ಎರಡು ಫರ್ಲಾಂಗು ಕಾಡಿನ ಕಿರುದಾರಿಯಲ್ಲಿ ಸಾಗಿದ ಅವರು ಇನ್ನೇನು ಕಾವಿಕಲ್ಲಾಣಿ ಏರಬೇಕು ಎನ್ನುವ ಹೊತ್ತಿಗೆ ಆ ಕಾಲ್ದಾರಿ ತೊರೆದು ಗಿಡ(ಕಾನು) ನುಗ್ಗಿದರು. ದಟ್ಟ ಕುಮಸಲು ಮಟ್ಟಿ, ಕಾಂಗ್ರೆಸ್ ಗಿಡಗಳ ನಡುವೆ ಕಚ್ಚು ಕುಲ್ಡಿ ನೊಣ, ನೊರ್ಜುಗಳನ್ನು ಕೈಯಲ್ಲೇ ಜಾಡಿಸುತ್ತಾ ಹೆಚ್ಚೂ ಕಡಿಮೆ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ನಡುಬಗ್ಗಿಸಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನಡೆದರು.
ಬಾಬಣ್ಣ ಮುಂದೆ ಕಣ್ಣುಗಳನ್ನು ಲಂಟಾನದ ಗೀಜಿನ ನಡುವೆ ಕಣ್ಣು ಹಾಯಿಸುವವರೆಗೆ ದೃಷ್ಟಿ ನೆಟ್ಟು, ಪ್ರಾಣಿಗಳ ಹೆಜ್ಜೆ ಸಪ್ಪಳ ಕೇಳಲು ಕಿವಿಯಗಲಿಸಿ ಚುರುಕುಗಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಇತ್ತ ಗಾಮ್ಯ ತನ್ನ ಚೋಟು ಬೀಡಿ ಬಾಯಲ್ಲಿ ಕಚ್ಚಿ, ಒಡೆಯನ ಹಿಂದೆ ಹಿಂದೆ ಪಾಲಿಸುತ್ತಿದ್ದ. ನಡುವೆ ಕಚ್ಚಿದ ಬೀಡಿಯ ಹೊಗೆ ಎದೆಯಲ್ಲಿ ಸಿಕ್ಕಿ, ಕೊಸಕ್ಕನೆ ಕೆಮ್ಮಿದ. ಬಾಬಣ್ಣ ಇನ್ನೇನು ಹಿಂತಿರುಗಿ ಗಾಮ್ಯಗೆ ಉಗಿಯಬೇಕು ಮಕಕ್ಕೆ ಎನ್ನುವಷ್ಟರಲ್ಲಿ ಹತ್ತೇ ಮಾರು ದೂರದಲ್ಲಿ ದಡಕ್ಕೆಂದ ಸದ್ದು ಕೇಳಿತು. ಬಾಬಣ್ಣ ಸರಸರನೆ ಸಾಗಿ ನೋಡುತ್ತಾರೆ; ಭರ್ಜರಿ ಕಡವೆಯ ಜೋಡಿಯೊಂದು ಕುಮಸಲು ಮಟ್ಟಿಯ ಮೇಲೇ ಜಿಗಿದು ಮರೆಯಾಯಿತು.
ಇದು ಈ ಗಾಮ್ಯನ ಕೆಮ್ಮು ಮಾಡಿದ ಎಡವಟ್ಟು. ಇಲ್ಲವಾಗಿದ್ರೆ ಜೋಡಿಯಾಗೇ ನಿಂತಿದ್ದ ಎರಡನ್ನೂ ಒಂದೇ ಈಡಿಗೆ ಹೊಡೆದುರುಳಿಸುತ್ತಿದ್ದೆ ಎಂದು ಹಣೆ ಚಚ್ಚಿಕೊಂಡು ಬಾಬಣ್ಣ, “ಥೂ ಲೌಡಿಮಗನೆ,.. ನಿನಗೇನಾತೊ, ಯಾವಾಗ್ನೋಡಿದ್ರೂ ಆ ಬೀಡಿ ಕಚ್ಚಕೊಂಡಿರ್ತಿಯಲ್ಲೊ. ನಿನ್ನ ಮನೆಹಾಳಾಗ… ರಂಡೇ ಮಗನೆ,.. ” ಎಂದು ವಾಚಾಮಗೋಚರ ಉಗಿದರು. ಅದನ್ನೂ ಗುಸುಗುಸು ದನಿಯಲ್ಲೇ !
ಆದರೆ, ಅವರಿಗೆ ಒಂದು ನಂಬಿಕೆ ಇತ್ತು. ಜೋಡಿ ಮಿಕ ಏನೇ ಆದರೂ ಬಹಳ ದೂರ ಹೋಗಲಾರವು. ಹೇಗಾದರೂ ಮಾಡಿ ಪತ್ತೆ ಮಾಡಲೇಬೇಕು ಎಂದು ಕಡವೆಗಳ ಹೆಜ್ಜೆ ಜಾಡು ಹಿಡಿದು ಸಾಗಿದರು. ಸದ್ಯ ಅವತ್ತು ಅವರ ಬೇಟೆನಾಯಿಗಳು ಜೊತೆಗಿರಲಿಲ್ಲ. ಕಾವಿಕಲ್ಲಾಣೆಯ ಬದಿಯಲ್ಲೇ ಇರುವ ಸಂಪಳ್ಳಿ ಮನೆಯ ನಾಯಿಗಳೂ ಇವರ ಸುಳಿವು ಹಿಡಿದು ಬಂದಿರಲಿಲ್ಲ. ಹಾಗಾಗಿ ಬಾಬಣ್ಣದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇರಲಿಲ್ಲ. ಕಾವಿ ಕಲ್ಲಾಣೆಯನ್ನು ಏರಿ, ಇಳಿದು ಬಳುವಳಿಗುಡ್ಡದ ಕಾಲಿನ ಕಣಿವೆಯತ್ತ ಹೆಜ್ಜೆ ಹಾಕಿದರು. ದನಕರುಗಳ ಸದ್ದೂ ಇರಲಿಲ್ಲ. ಹಸಿ ನೆಲವಾದ್ದರಿಂದ ಕಡವೆ ಹೆಜ್ಜೆಗಳು ಅರ್ಧ ಫರ್ಲಾಂಗು ಆದರೂ ಅಚ್ಚಳಿಯದೇ ಮೂಡಿದ್ದವು. ಇನ್ನಷ್ಟು ದೂರು ಸಾಗಿದರೂ ಅವುಗಳನ್ನು ಪತ್ತೆ ಮಾಡುವುದು ಕಷ್ಟವೇನಿರಲಿಲ್ಲ.
ಆದರೆ, “ಕೈಯಲ್ಲೇ ವಿದ್ಯೆ ಇಟ್ಟುಕೊಂಡು ಸುಖಾಸುಮ್ಮನೆ ಅಲೆಯುವುದೇಕೆ ಮಾರಾಯ್ರೆ, ನೋಡಾಣ, ಮದ್ದು ಹೂಡಿ” ಎಂದ ಗಾಮ್ಯ ಅಂಜುತ್ತಲೇ. ತಿರುಗಿ ಉಗಿದಾರು ಎಂಬ ಅಂಜಿಕೆ ಅವನದ್ದು. ಮೇಲೆ ಮುಗಿಲು ದಟ್ಟೈಸುತ್ತಿದ್ದುದನ್ನು ಕಂಡು ಮಳೆ ಬಂದರೆ ಕೆಲಸ ಕೆಟ್ಟಂತೆಯೇ ಎಂದು ಎಣಿಸಿದ ಬಾಬಣ್ಣ ಗಾಮ್ಯನ ಸಲಹೆ ಸಮಯೋಚಿತವೆ ಎಂದುಕೊಂಡು, ಮಿಕದ ಹೆಜ್ಜೆಯನ್ನು ಸರಿಯಾಗಿ ಪರಾಂಬರಿಸಿ “ಇಲ್ಲೇ ಇರ್ರೋ, ಬಂದೆ..” ಎಂದು ತನ್ನ ಕಾಲಾಳುಗಳಿಗೆ ಹೇಳಿ ಮಟ್ಟಿ ನುಗ್ಗಿ ಹೋದರು.
ಐದೇ ನಿಮಿಷದಲ್ಲಿ ಕೈಯಲ್ಲಿ ಸೊಪ್ಪು ಹಿಡಿದು ಬಂದ ಬಾಬಣ್ಣ ಪ್ರಾಣಿಯ ಹೆಜ್ಜೆಯ ಮೇಲೆ ಸೊಪ್ಪು ಇಟ್ಟು ತನ್ನ ಕಾಲಿನ ಹೆಬ್ಬೆರಳಲ್ಲಿ ಮೆಟ್ಟಿ ಮುಗಿಲತ್ತ ಮುಖಮಾಡಿ ಮಂತ್ರದಂತೆ ಏನನ್ನೋ ಪಠಿಸಿದ. ಬಳಿಕ ಕಡವೆ ಹೋದ ದಿಕ್ಕಿಗೆ ನಳಿಕೆ ತೋಟಾವನ್ನು ನೇರ ಗುರಿಮಾಡಿ ಕಣ್ಣಮುಂದೆ ಯಾವುದೋ ಪ್ರಾಣಿ ಇದೆ ಎಂಬಂತೆ ಕಾದ. ಗಾಮ್ಯ ಮತ್ತು ಆತನ ಗೆಣೆಕಾರ ತುಸು ಹಿಂದಕ್ಕೆ ದೂರ ಸರಿದು ಮರದ ಮರೆಯಲ್ಲಿ ಅಡಗಿ ನಿಂತರು. ಒಂದು, ಎರಡು, ಮೂರು,… ಐದು ನಿಮಿಷವಾಯ್ತು, ಆರು, ಏಳು…. ಢಂ!
ಇಡೀ ಕಾಡೇ ಮೊಳಗಿತು ಗುಂಡಿನ ಸದ್ದಿಗೆ. ಗಾಮ್ಯ ದಢಕ್ಕನೆ ಜಿಗಿದು ನೋಡುತ್ತಾನೆ, ಗುಂಡು ಸಿಡಿದ ಹೊಗೆ, ಎದುರಿಗೆ ನಗುತ್ತಾ ನಿಂತಿದ್ದ ಬಾಬಣ್ಣ.. ಬಿಟ್ಟರೆ ಇನ್ನೇನು ಕಾಣಿಸುತ್ತಿಲ್ಲ. ಅರೆ! ಗುಂಡು ಹಾರಿದ್ದು ಕೈತಪ್ಪಿಯೇ? ಎಂದುಕೊಂಡ ಗಾಮ್ಯ, “ಒಡೆಯಾ ಏನಾತು? ಯಾಕ್ರೀ.. ” ಕಾಳಜಿ, ಭಯ ಮತ್ತು ನಿರಾಶೆ ಬೆರೆತ ದನಿಯಲ್ಲಿ.
“ಮುಂದೆ ಬಂದು ನೋಡಾ ಪುಕ್ಕಲು ಲೌಡಿಗಂಡ..” ಎಂದ ಬಾಬಣ್ಣ ಇನ್ನು ತನ್ನ ಕೆಲಸ ಮುಗಿಯಿತು ಎಂಬಂತೆ ನಿರಾಳನಾಗಿ ನಾಲ್ಕು ಹೆಜ್ಜೆ ಹಾಕಿ ಮುಂದೆ ನೆಲಕ್ಕೆ ಒರಗಿದ್ದ ಕಡವೆಯ ಬಳಿ ಸಾಗಿದ. ಅವರನ್ನು ಹಿಂಬಾಲಿಸಿದ ಗಾಮ್ಯ, ಕಡವೆಯ ಕಂಡು ಹೌಹಾರಿದ. ಭರ್ಜರಿ ನಾಕಾಳು ಹೋರಿ(ನಾಲ್ವರು ಹೊರುವಷ್ಟು ಭಾರದ್ದು) ಕಂಡು “ಭಾರೀ ಹೋರಿ ಕಣ್ಲಾ, ಒಂದೇ ಏಟಿಗೆ ಒರಗ್ತು ನೋಡು ಹೆಂಗೆ” ಎಂದು ಗೆಣೆಕಾರಗೆ ಹೇಳಿ, ಕೊಂಬು ಹಿಡಿದು ಅಲುಗಾಡಿಸಿ, ಆಗಷ್ಟೇ ಬಿಸಿಯುಸಿರುವ ಸೂಸುತ್ತಿದ್ದ ಮೂಗಿನ ಹೊಳ್ಳೆಗಳನ್ನು ಗಮನಿಸಿದ. ಬಾಯಲ್ಲಿ ಬುರುಬು ಬರಲಾರಂಭಿಸಿತ್ತು. ಗುಂಡೇಟು ನೇರ ಎದೆಯ ಪಕ್ಕೆಗೇ ಬಿದ್ದಿದ್ದರಿಂದ ರಕ್ತ ಚಿಲ್ಲನೆ ಚೀರುತ್ತಿತ್ತು.
ಗಾಮ್ಯ ಮಿಕವನ್ನು ಹೊರಳಿಸಿ, ಕಾಲು, ಕತ್ತು ಸರಿಸಿ ನೋಡುತ್ತಲೇ ಇದ್ದ. ಅಷ್ಟರಲ್ಲಿ, ಬಾಬಣ್ಣ, “ಲೇ,.. ಇನ್ನೂ ಏನ್ ನೋಡ್ತಿಯಾ, ಗುಡುಗು ಶುರುವಾತು, ಬೇಗೆ ದಂಡಿಗೆ ಕಡಿ, ಹೆಗಲು ಕೊಡ್ರಿ,.. ಹೊತ್ತಾತು..” ಎಂದ. ಬಾಬಣ್ಣ ಧಾವಂತ ಅರಿತ ಕಾಲಾಳುಗಳಿಬ್ಬರೂ ಬಾಡೂಟ, ಸೇಂದಿಯ ಮತ್ತಿನಲ್ಲಿ ಆಗಲೇ ಖದರುಗುಟ್ಟಿ ಲಗುಬಗೆಯಲ್ಲಿ ದಂಡಿಗೆ ಕಡಿದು, ಮಿಕದ ಕಾಲು ಕಟ್ಟಿ ದಂಡಿಗೆ ತೂರಿಸಿ ಹೆಗಲು ಕೊಟ್ಟರು…
—