ಕಳೆದುಕೊಂಡವ

ಕೇಶವನಿಗೆ ಬೆಳಗಿನ ಜಾವಕ್ಕೆ ಶುರುವಾದ ಎದೆನೋವು ನಿಲ್ಲುವಂತೆ ತೋರಲಿಲ್ಲ. ಎದೆಯ ಛಳಕು ವರ್ಷಗಳಿಂದಲೂ ಇತ್ತು. ಆದರೆ, ಇಂದ್ಯಾಕೋ ಅದು ವಿಚಿತ್ರ ಚಡಪಡಿಕೆಗೆ ತಿದಿಯೊತ್ತುತ್ತಲೇ ಇತ್ತು.

ಬೆಳಗಿನ ಜಾವದ ದುಃಸ್ವಪ್ನ ತರುವ ಹೆದರಿಕೆ, ವಿಹ್ವಲತೆಗಳೆಲ್ಲ ಈಗ ಎಚ್ಚರದಲ್ಲೂ ಕಾಡತೊಡಗಿತು. ಕಣ್ಣು ಮುಚ್ಚಿ ಕಾದರೆ ಬರುಬಹುದೆಂದುಕೊಂಡಿದ್ದ ನಿದ್ದೆಯೂ ಬರಲಿಲ್ಲ. ಬದಲಿಗೆ ಮುತ್ತುತ್ತಿದುದು ಬರಿ ನೆನಪುಗಳು, ಸಣ್ಣ ನೋವಂತೆ ಕೊರೆಯುವ ಮತ್ತದೇ ದುಗುಡ.

ನಿಧಾನವಾಗಿ ಬೆಳಗು ಆವರಿಸುತ್ತಿರುವಂತೆ ದೈಹಿಕ ನೋವನ್ನು ಮೀರಿದ ದುಗುಡವೂ ಕೇಶವನ ಮುತ್ತತೊಡಗಿತು. ಅದು ಬೆಳೆಯುತ್ತಾ, ಇಂಚಿಂಚಾಗಿ ಮನ- ಮೈಯನ್ನೆಲ್ಲಾ ಆವರಿಸುತ್ತಾ ಹೋದಂತೆಲ್ಲಾ ಮನಸ್ಸು ಹಿಡಿತ ತಪ್ಪತೊಡಗಿತು. ವರ್ಷಗಳ ಹಿಂದೆ ತಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದಾಗೊಮ್ಮೆ ಹೀಗೆ ಏನೇನೋ ಯೋಚನೆ ಮಾಡಿ, ಕೊನೆಗೆ ಮನೆಯನ್ನೇ ಬಿಟ್ಟು ಹೋದದ್ದು, ದೂರದ ಮಂಗಳೂರಿನಲ್ಲಿ ವಾರ ಕಳೆದ ಬಳಿಕ ಮತ್ತೆ ಅಮ್ಮನ ನೆನೆದು ಮನೆಗೆ ಮರಳಿದ್ದು ನೆನಪಾಗಿ ಚಡಪಡಿಕೆ. ಮನಸ್ಸನ್ನು ಸ್ಥಿಮಿತಕ್ಕೆ ತರಲು ಎಂಬಂತೆ ಯಾವಾಗಲೂ ಮಾಡುವಂತೆ ಸೂರ್ಯೋದಯದ ಚಿತ್ರವನ್ನು ಕಣ್ಣಿಗೆ ತಂದುಕೊಂಡ. ಆ ಹಸಿರು, ಗಿಡ-ಮರ, ಹೂ, ಜುಳುಜುಳಿಸುವ ತೊರೆ, ಸಮುದ್ರ, ಹಕ್ಕಿ-ಪಕ್ಷಿಗಳ ಕಲರವ, ಈ ಜನ, ಉದ್ದನೆ ಬೀದಿ, ಆ ಮಾಲ್, ಸಂತೆ, ಅಲ್ಲಿನ ಗದ್ದಲ, ಎಲ್ಲರ ಒಳ್ಳೆತನ, ಹೀಗೆ ಏನೋನೋ ಯೋಚಿಸುತ್ತಾ ತನ್ನ ದುಗುಡವನ್ನು ನೀಗಲು ಪ್ರಯತ್ನಿಸಿದ. ಹಾಗೇ ಅವಳ ಸೂಜಿಗಲ್ಲಿನ ವ್ಯಕ್ತಿತ್ವ ಕೂಡ ಅನಾಯಾಸವಾಗಿ ತೂರಿಬಂತು….

ಆದರೆ, ಅದಾವುದೂ ಎದೆಯಲ್ಲಿ ಕುದಿಯುತ್ತಿದ್ದ ಅದನ್ನು ಶಮನಗೊಳಿಸಲೇ ಇಲ್ಲ. ಬದಲಿಗೆ ನಾಲ್ಕು ದಿನಗಳಿಂದ ಮಾತಾಡದ, ಫೋನ್ ಮಾಡಿದರೂ ರಿಸೀವ್ ಮಾಡದೆ ಕಟ್ ಮಾಡುತ್ತಿದ್ದ, ಮೆಸೇಜ್ಗೆ ಪ್ರತಿಕ್ರಿಯಿಸದ ಅವಳ ಹಠಮಾರಿತನ ಮತ್ತೆ ಎದೆಗೆ ಕಿಚ್ಚಿಗೆ ತುಪ್ಪವಾಯಿತು. ಏನೋ ನೆನೆದದ್ದು ಇನ್ನೇನೋ ಆಗಿ ಮತ್ತಷ್ಟು ನೋವು ಮೀಟತೊಡಗಿತು. ನಾಭಿಯಾಳದಿಂದ ಉಕ್ಕಿಬರುವ ಸಂಕಟ ಹೊಟ್ಟೆಯಲ್ಲಿ ತಡೆಯಾರದ ತಳಮಳ ಹುಟ್ಟಿಸಿತು. ಹಾಗೆನಿಸುತ್ತಲೇ ಧಡಕ್ಕನೆ ಎದ್ದು ಬಾತ್ರೂಮ್ಗೆ ಓಡಿದ. ಎದೆ ಒತ್ತಿಹಿಡಿದುಕೊಂಡು ಕಾರಿಕೊಂಡ. ಎರಡು- ಮೂರು ಬಾರಿ ತಡೆ- ತಡೆದು ಬಂದ ವಾಂತಿ ಟಬ್ನ್ ನಿಂದ ಹಿಂತಿರುಗಿ ರೂಂಗೆ ಬರುವಾಗಲೂ ತಲೆ ಗಿಮ್ಮೆನ್ನಿಸುತ್ತಿತ್ತು. ನಿಧಾನಕ್ಕೆ ತಿರುಗಿ ಸಾವರಿಸಿಕೊಂಡು ಬಂದು ಹಾಸಿಗೆಯಲ್ಲಿ ಮತ್ತೆ ಒರಗಿದ. ಸುಸ್ತಾಗಿದ್ದರಿಂದ ಮನಸ್ಸಿನ ತಲ್ಲಣ ಬದಿಗೆ ಸರಿದು ನಿದ್ದೆ ಆವರಿಸತೊಡಗಿತು.

***

ಎಷ್ಟೋ ಹೊತ್ತಿನ ಮೇಲೆ ಎಚ್ಚರವಾದಾಗ;

ಗಂಟೆ ಹನ್ನೊಂದಾಗಿತ್ತು. ಕೇಶವನಿಗೆ ಎದೆಯ ನೋವು ಕನಸೋ- ನನಸೋ ಎಂದು ಅನುಮಾನವಾಯಿತು. ಹೊರಗೆ ಸುರಿಯುತ್ತಿದ್ದ ಮಳೆಯ ಸದ್ದು ಕಿಟಕಿನ್ನೂ ಸೀಳಿಕೊಂಡು ನುಗ್ಗುತ್ತಿತ್ತು. ಪಕ್ಕದ ಮನೆಯಿಂದ ‘ಅಳಬೇಡ ತಂಗಿ ಅಳಬೇಡ, ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ,..’ ಶರೀಫರ ಗೀತೆ ಕೂಡ ಮಳೆಗೆ ಪೈಪೋಟಿಯೆಂಬಂತೆ ತೂರಿಬರುತ್ತಿತ್ತು. ಮತ್ತೆ ಅದನ್ನೇ ಕೇಳುತ್ತಾ; ಶಾಲೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ರೇಡಿಯೋದಿಂದ ತೇಲಿಬರುತ್ತಿದ್ದ ಭಕ್ತಿಗೀತೆಗಳನ್ನು ಕೇಳುತ್ತಾ ಕಣ್ಣುಮುಚ್ಚಿಕೊಂಡೇ ಏನೇನೋ ಅರೆ ನಿದ್ದೆ- ಅರೆ ಎಚ್ಚರದ ಕನಸು- ಕಲ್ಪನೆಗಳಲ್ಲಿ ತೇಲುತ್ತಿದುದು ನೆನಪಾಯಿತು.

ಹಾಡು ಮುಗಿದ ಬಳಿಕ ಎದ್ದು ಬಾತ್ ರೂಂ ಹೊಕ್ಕ. ಬ್ರಷ್ ಮಾಡುತ್ತಲೇ ಮತ್ತೆ ತಲೆ ತುಂಬ ಯೋಚನೆಗಳು ಸುಳಿಯತೊಡಗಿದವು. ಆಫೀಸಿಗಂತು ರಜೆ, ಇನ್ನಾರನ್ನೋ ಭೇಟಿಯಾಗಬೇಕಿತ್ತು, ಕರೆಂಟ್ ಬಿಲ್ ಕಟ್ಟಬೇಕಿತ್ತು,.. ತನ್ನ ಕಥೆ ಇದಾದರೆ, ಅವಳದ್ದೇನು ಫಜೀತಿಯೋ,.. ಎಂದುಕೊಂಡ. ಆದರೆ, ಅವಳ ಯೋಚನೆ ಸುಳಿಯುತ್ತಿದ್ದಂತೆಯೇ ಮತ್ತೆ ದುಗುಡ… ಹೈಸ್ಕೂಲ್ ದಿನಗಳಲ್ಲಿ ಮಾಡಿದ ಹಾಗೆ ಮತ್ತೆ ಎಲ್ಲಿಗಾದರೂ ಹೋಗಿಬಿಡಲೇ ಎನಿಸುತ್ತಿದ್ದಂತೆ ದುಗುಡ ಮತ್ತೆ ಉಕ್ಕೇರತೊಡಗಿತು. ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಸೈ, ಹಿಮಾಲಯವೋ, ಕೊಲ್ಕತ್ತವೋ,.. ಕಾಣದ ಕಡೆ ಹೋಗಿಬಿಡಬೇಕು. ಏನೊಂದೂ ಇಲ್ಲದೆ ಸುಮ್ಮನೆ ಸುತ್ತುತ್ತಾ, ಸುತ್ತುತ್ತಾ ಹೋಗಿ ಸುಮ್ಮನೆ ಇದ್ದುಬಿಡಬೇಕು,.. ಈ ಎಲ್ಲದರಿಂದ ದೂರವಾಗಿ ಬದುಕುವುದು ಸಾಧ್ಯವಾ ಎಂದು ನೋಡಬೇಕು..

ಕೇಶವ ನೀನು ಒಂದಲ್ಲಾ ಒಂದು ದಿನ ನಂಬಿದವರನ್ನೆಲ್ಲಾ ಬಿಟ್ಟು ಹೋಗಿಬಿಡ್ತೀಯ, ನಿನ್ನನ್ನ ಯಾವಾಗಲೂ ಜೀವನಪೂರ್ತಿ ನಂಬಿಕೊಂಡಿರಲು ಸಾಧ್ಯವೇ ಇಲ್ಲ. ನಿನ್ನ ಜನ್ಮರಾಶಿಯೇ ಅಂತಹದ್ದು ಎನ್ನುತ್ತಿದ್ದ ಅಮ್ಮನ ಮಾತಿನ ಸತ್ಯಾಸತ್ಯತೆ ನೋಡಿಬಿಡಬೇಕು ಎಂದುಕೊಂಡ. ಈ ಕೆಲಸ, ಆಫೀಸು, ಮನೆ, ಅವಳು, ಅಪ್ಪ- ಅಮ್ಮ, ಗೆಳೆಯರು ಎಲ್ಲರನ್ನೂ ಬಿಟ್ಟು ಹಾಗೆ ಎಲ್ಲ ಬಂಧಗಳನ್ನು ತುಂಡರಿಸಿಕೊಂಡು ಹೋಗುವುದು, ಮತ್ತೆ ಯಾವ ಸೆಳೆತವಿಲ್ಲದೆ ಬದುಕುವುದು ಸಾಧ್ಯವಾ ನನ್ನಂಥವನಿಗೆ ಎನಿಸದೇ ಇರಲಿಲ್ಲ. ಹೆಸರು, ಹಮ್ಮುಗಳಿಲ್ಲದೆ, ಕುಲ-ಗೋತ್ರಗಳ ಹಂಗಿಲ್ಲದೆ ತೀರಾ ಅನಾಮಿಕನಂತೆ, ದಿಕ್ಕುದೆಸೆಯಿಲ್ಲದೆ ಬದುಕನ್ನು ಬಂದಂತೆ ಸ್ವೀಕರಿಸಿ, ಕನಿಷ್ಠ ಊಟ, ನಿದ್ರೆಗಳ ನಿರೀಕ್ಷೆಗಳೂ ಇಲ್ಲದೆ ಇರುವುದು ಎಂತಹ ನಿಸೂರು ಅಲ್ಲವೆ? …

ಎಷ್ಟು ಹೊತ್ತು ಬ್ರಷ್ ಮಾಡಿದ್ದನೋ,.. ಹಲ್ಲು ಚುಳುಗುಟ್ಟತೊಡಗಿದವು. ಓ.. ಎಂದುಕೊಂಡು ದಿಢೀರನೇ ನೀರು ಹಾಕಿಕೊಂಡು ಬಾಯಿ ಮುಕ್ಕಳಿಸಿ ಹೊರಬಂದ. ಗೀಜರ್ ಆನ್ ಮಾಡಿಬಂದು ಬಾಗಿಲು ತೆರೆದು ಪೇಪರ್ ಎತ್ತಿಕೊಂಡರೂ ಓದಲು ಮನಸ್ಸಾಗದೇ ಟಿಪಾಯಿ ಮೇಲೆ ಎಸೆದು, ಮತ್ತೆ ಬಾತ್ರೂಂಗೆ ನುಗ್ಗಿದ. ಹತ್ತೇ ನಿಮಿಷದಲ್ಲಿ ಹೊರಬಂದವನು ಸೀದಾ ಡ್ರೆಸ್ ಮಾಡಿಕೊಂಡು ಬ್ಯಾಗ್ನಲ್ಲಿ ಎರಡು ಜೊತೆ ಬಟ್ಟೆ ತುಂಬಿಕೊಂಡು ಮನೆಯಿಂದ ಹೊರಬಿದ್ದ.

***

ಬೈಕನ್ನು ಮನೆಯಲ್ಲೇ ಬಿಟ್ಟು ಹೊರಟ ಕೇಶವ, ಎಲ್ಲವನ್ನೂ ನಿರ್ಧರಿಸಿದಂತೆ ಆಟೋ ಹತ್ತಿ ರೈಲ್ವೆ ಸ್ಟೇಷನ್ಗೆ ಎಂದ. ಸ್ಟೇಷನ್ ನಲ್ಲಿ ಆಟೋ ಇಳಿದವನೇ ಕೌಂಟರ್ ಬಳಿ ಓಡಿ ಮುಂಬೈ ಟ್ರೈನ್ ಹೊರಡ್ತಾ ಎಂದು ವಿಚಾರಿಸಿದ. ಹತ್ತು ನಿಮಿಷದಲ್ಲಿ ಹೊರಡುತ್ತೆ ಎಂಬ ಉತ್ತರದ ಬೆನ್ನಿಗೇ ದುಡ್ಡು ಕೊಟ್ಟು ಒಂದು ಟಿಕೆಟ್ ಎಂದ. ಟಿಕೆಟ್ ಕೈಗೆ ಬರುತ್ತಲೇ ಒಂದೇ ಉಸಿರಿಗೆ ಓಡಿ ಫ್ಲಾಟ್ ಫಾರಂ ತಲುಪುವಷ್ಟರಲ್ಲಿ ರೈಲು ನಿಧಾನಕ್ಕೆ ಚಲಿಸತೊಡಗಿತ್ತು. ಓಡುತ್ತಲೇ ಹೋಗಿ ಹತ್ತಿ ಯಾವುದೋ ಒಂದು ಕಡೆ ಸೀಟು ಹಿಡಿದ. ಜನರಲ್ ಭೋಗಿಯಾದ್ದರಿಂದ ಜನ ಇನ್ನೂ ತಮ್ಮ- ತಮ್ಮ ಲಗ್ಗೇಜು, ಮಕ್ಕಳ ಮರಿಗಳ ನಿಗಾದಲ್ಲೇ ಇದ್ದರು. ತಕ್ಷಣಕ್ಕೆ ಅವನ ಕಣ್ಣೆದುರಿಗೆ ಇದ್ದದ್ದು ಮುಂಬೈಗೆ ಹೋಗುವುದು, ಅಲ್ಲಿಂದ ದೆಹಲಿ,.. ಅಥವಾ ? ಗೊತ್ತಿಲ್ಲ! ಹಿಮಾಲಯಕ್ಕೆ ಹೋಗುವುದಾದರೆ ಯಾವ ಮಾರ್ಗ ಎಂಬುದೂ ಗೊತ್ತಿಲ್ಲ. ಕೇಳಿದರಾಯ್ತು ಯಾರನ್ನಾದರೂ ಎಂದುಕೊಂಡು ಸುಮ್ಮನಾದ. ಆದರೆ, ಮತ್ತೆ ಅವಳು, ಮನೆ, ಅಪ್ಪ- ಅಮ್ಮ ನೆನಪಾಗತೊಡಗಿದರು. ಕಣ್ಣು ನೀರಾಡತೊಡಗಿದವು.

ಪಕ್ಕದಲ್ಲಿದ್ದವರಿಗೆ ತಿಳಿಯದಿರಲೆಂದುಕೊಂಡು ಕಿಟಕಿಯತ್ತ ಮುಖಮಾಡಿ ಕಣ್ಣೊರೆಸಿಕೊಂಡ!

ಅಶೋಕ ತಗಡು ಕಥೆ ಬರೆಯಲಿಲ್ಲ

 ರಶ್ಮಿ ಕಣ್ಣು ತೆರೆದಾಗ ಸುತ್ತಲೂ ಒಮ್ಮೆ ನೋಡಿ ಏನೊಂದೂ ತಿಳಿಯದೆ ಮಂಕಾದಳು. ತಾನು ಇಲ್ಲೇಕೆ ಇದ್ದೇನೆ, ಏನು ಈ ನೋವು, ಇದೇನು ಆಸ್ಪತ್ರೆಯೇ.. ಅಯ್ಯೋ ಏಕೆ, ಈ ಡ್ರಿಪ್ ಹಾಕಿದ್ದಾರೆ… ಎಂದುಕೊಳ್ಳುತ್ತಲೇ ಗಾಬರಿಯಾಗಿ ಮತ್ತೆ ಪ್ರಜ್ಞೆ ಕಳೆದುಕೊಂಡಳು. ಯಾರನ್ನಾದರೂ ಕೇಳೋಣ ಎಂದರೆ ಸ್ಪೆಷಲ್ ವಾರ್ಡಿನಲ್ಲಿ ಒಂಟಿ ಬೆಡ್ ಮೇಲಿನ ತಾನು ಮಾತ್ರ. ಪಕ್ಕದಲ್ಲಿ ಹಣ್ಣು-ಎಳೆನೀರುಗಳನ್ನು ಜೋಡಿಸಿಟ್ಟಿದ್ದ ಟಿಪಾಯಿ, ಎದುರಿಗೆ ನೆಟ್ಟಗೆ ನಿಂತಿದ್ದ ಕಬ್ಬಿಣದ ಸರಳಿಗೆ ತಲೆಕೆಳಗಾಗಿ ನೇತುಬಿದ್ದ ಡ್ರಿಪ್ ಸ್ಯಾಚೆ, ಅದರಿಂದ ಸಪೂರ ಕೊಳವೆಯುದ್ದಕ್ಕೂ ಹನಿಯಿಕ್ಕುತ್ತಿದ್ದ ಜೀವ ಜಲ! ಎಲ್ಲವನ್ನೂ ನೋಡುತ್ತಿದ್ದಂತೆ ಅರ್ಥವಾಗತೊಡಗಿತು. ಅಶೋಕನ ನೆನಪಾಯಿತು. ಕನಸಿನಲ್ಲೆಂಬಂತೆ ಅವನ ಹೆಸರನ್ನು ಗುನುಗಿದಳು. ತುಟಿ ಬಿಚ್ಚುತ್ತಿದ್ದಂತೆ ತಲೆಯಲ್ಲಿ ಸಿಡಿಲು ಸಿಡಿದಂತಾಯಿತು. ಅಷ್ಟರಲ್ಲಿ ಅಸಾಧ್ಯ ನೋವು ಆಕೆಯ ಪ್ರಜ್ಞೆಯನ್ನು ಕಿತ್ತುಕೊಂಡಿತ್ತು.

****

ಆಲನಹಳ್ಳಿ ಕೃಷ್ಣರ ಗೀಜಗನ ಗೂಡಿನ ಮುಂದೆ ನೀನೇನು ಕಥೆ ಬರೀತೀಯಾ ಬಿಡೋ ಎಂದು ರಶ್ಮಿ ಹೇಳಿದಾಗ ಅಶೋಕ, ತಗಡು ಕಥೆಗಳನ್ನು ಬರಿಯೋನು ಅನ್ನೋ ಥರ ನನ್ನನ್ನ ಹಂಗಿಸ್ತೀಯಾ. ಆಲನಹಳ್ಳಿ ಗ್ರೇಟ್ ಬಿಡು. ಆದ್ರೆ ನಮ್ಮ ಕಾಲದ ತುರ್ತುಗಳೇ ಬೇರೆ ಅಲ್ವಾ ಎಂದು ಥೇಟು ಅನಂತಮೂರ್ತಿ ಥರ ಡೈಲಾಗ್ ಹೊಡ್ದ. ಮಾತು ಕಥೆಯ ಸುತ್ತ ಸುತ್ತುತ್ತಿದ್ರೂ ಬ್ರಿಗೇಡ್ ರಸ್ತೆಯ ಫುಟ್ಪಾತ್ನಲ್ಲಿ ಹೆಜ್ಜೆ ಹಾಕ್ತಿದ್ದ ಅವರಿಬ್ಬರ ಮನಸ್ಸುಗಳು ಮಾತ್ರ ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದವು.

ಆಕೆಯ ಹೆಗಲ ಬಳಸಿದ ಆತನ ಕೈ ಅವಳ ತೋಳಿನ ಸುತ್ತ ಚಿತ್ತಾರ ಬಿಡಿಸುತ್ತಿದ್ದರೆ, ಅವನ ಸೊಂಟ ಬಳಸಿದ್ದ ಆಕೆಯ ಬೆರಳುಗಳು ಪಕ್ಕೆಲುಬುಗಳ ಜತೆ ಲಾಸ್ಯವಾಡುತ್ತಿದ್ದವು. ಮೂರು ವರ್ಷಗಳ ಹಿಂದೆ ಪಠ್ಯವಾಗಿದ್ದ ತೇಜಸ್ವಿ ಅವರ ಚಿದಂಬರ ರಹಸ್ಯದ ಪಾಠ ಕೇಳುತ್ತಾ, ಕೇಳುತ್ತಾ ಅದರಲ್ಲಿನ ಜಯಂತಿ-ರಫಿ ಜೋಡಿ ನಾವೇ ಎಂದು ಅನ್ನಿಸಿದ ಕ್ಷಣವೇ ಆಚೀಚೆ ಡೆಸ್ಕಗಳ ತುದಿಯಲ್ಲಿ ಕೂತಿದ್ದ ರಶ್ಮಿ- ಅಶೋಕರ ಕಣ್ಣುಗಳು ಕಲೆತಿದ್ದವು.

ಅಂದಿನಿಂದ ರಫಿ ಅಶೋಕನಾಗಿ, ಅಶೋಕ ರಫಿಯಾಗಿ, ರಶ್ಮಿ ಜಯಂತಿಯಾಗಿ, ಜಯಂತಿ ರಶ್ಮಿಯಾಗಿ ಕ್ಯಾಂಪಸ್ಸಿನಿಡಿ ಅವರಿಬ್ಬರ ಜೋಡಿ ಚಿದಂಬರ ರಹಸ್ಯದಂತಹ ಕುತೂಹಲಕ್ಕೆ, ಪ್ರಶಂಸೆಗೆ ಕೊನೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗಿತ್ತು. ಕಲ್ಲು ಬೆಂಚುಗಳಿಂದ ರಸ್ತೆಯಂಚಿನವರೆಗೆ ಚಿದಂಬರ ರಹಸ್ಯವನ್ನು ಪರಸ್ಪರರು ಕೆದಕುವ ಆಟವಾಡುತ್ತಲೇ ಇದ್ದರು. ಕಾಲೇಜಿನ ಸಹಪಾಠಿಗಳಿಂದ ಉಪನ್ಯಾಸಕರವರೆ, ಕ್ಲರ್ಕ್- ಅಟೆಂಡ್ರು ಕೊನೆಗೆ ಕಾಲೇಜ್ ಬಸ್ಸಿನ ಕಂಡಕ್ಟರನ ವರೆಗೆ ಎಲ್ಲರಿಗೂ ಇವರು ಜನುಮದ ಜೋಡಿಯಾಗಿಬಿಟ್ಟಿದ್ದರು.

ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಅಶೋಕ ಭಾಷಾ ವಿಶ್ಲೇಷಕ. ಅವಳು ಬಿಪಿಒ ಎಂಪ್ಲಾಯಿ. ಕೈತುಂಬ ಸಂಬಳ, ಎದೆ ತುಂಬ ಪ್ರೀತಿ-ಪ್ರೇಮದ ಘಮ. ಇನ್ನೇನು ಬೇಕು ಮದುವೆಯ ಬಂಧನಕ್ಕೆ? ಅಶೋಕನೇನೋ ಹೀಗೇ ತುಂಟಾಟವಾಡಿಕೊಂಡು ಇನ್ನಷ್ಟು ದಿನ ಇದ್ದುಬಿಡುವ, ಆಮೇಲೆ ಮದುವೆ-ಗಿದುವೆ ಇದ್ದದ್ದೇ ಎಂಬ ಆಕಾಂಕ್ಷೆಯಲ್ಲಿದ್ದ. ಆದರೆ, ರಶ್ಮಿಯ ಸ್ಥಿತಿ ಬೇರೆಯದೇ ಆಗಿತ್ತು. ಅವಳಿಗೂ ಇಂತಹ ತುಂಟಾಟಗಳ ತುಡುಗಿನ ಹುಡುಗನ ಚೇಷ್ಟೆಗಳಲ್ಲಿ ದಿನ ಕಳೆಯುವುದೇ ಮೋಜು ಎನಿಸುತ್ತಿತ್ತು. ಆದರೆ, ಮನೆಯವರು ಬಿಡಬೇಕಲ್ಲ.

ಪ್ರತಿ ಬಾರಿ ಸಕಲೇಶಪುರಕ್ಕೆ ಹೋದಾಗಲೂ ಮದುವೆಗೆ ಗೊತ್ತು ಮಾಡೋಣ ಎಂಬುದು ಅಪ್ಪ- ಅಮ್ಮನ ವರಾತ. ಜತೆಗೆ ಅಶೋಕನ ಜತೆ ರೋಡ್ ರೋಮಿಯೋ ಆಟ ಅತಿಯಾಗಿರುವುದೂ ಅವರ ಕಿವಿಗೆ ಬಿದ್ದಿದೆ. ಕಾಲೇಜು ದಿನದಿಂದಲೂ ಅನುಮಾನವಿದ್ದ ಅವರಿಗೆ ಈಗ ಎಲ್ಲವೂ ಖಾತ್ರಿಯಾಗಿಬಿಟ್ಟಿದೆ. ಹೋದ ತಿಂಗಳು ಊರಿಗೆ ಹೋದಾಗ ಅವನ್ಯಾರೋ ಲೆಕ್ಷರ್ ಮಗ ಪೆದ್ದುಗುಂಡನಂತಹವನಿಗೆ ತೋರಿಸಿದ್ದರು. ಮೊನ್ನೆ ತಾನೆ ಅಮ್ಮ, ‘ಅವನು ಒಪ್ಪಿದ್ದಾನೆ. ಎಂಗೇಜ್ಮೆಂಟ್ ಮಾಡೋಣ ಅಂತಿದ್ದಾರೆ. ಮುಂದಿನ ವಾರ ನಾಲ್ಕು ದಿನ ರಜೆ ಹಾಕಿ ಬಾ’ ಎಂದಿದ್ದರು. ಅದಕ್ಕೆ ರಶ್ಮಿ ಹೋಗಮ್ಮ, ನನಗೆ ಅವ ಇಷ್ಟವಿಲ್ಲ ಎಂದೂ ಹೇಳಿದ್ದಳು. ಆದರೆ, ಇವರ ರಫಿ-ಜಯಂತಿ ಕಥೆ ಅವರಿಗೆ ಗೊತ್ತಿಲ್ಲದ್ದೇನಲ್ಲವಲ್ಲ, ಹಾಗಾಗೆ ಅವಳು ಹತ್ತನ್ನೆರಡು ಹುಡುಗರನ್ನ ಬೇಡ ಎಂದಿದ್ದು ಎಂಬುದೂ ಅರ್ಥವಾಗಿತ್ತು. ಅದಕ್ಕಾಗೆ ಅವರು ಈ ಸಂಬಂಧವನ್ನು ಹೇಗಾದರೂ ಮಾಡಿ ಗಟ್ಟಿಮಾಡಿಕೊಂಡು ಇವಳನ್ನು ಹೆದರಿಸಿ-ಬೆದರಿಸಿಯಾದರೂ ಒಪ್ಪಿಸಿ ಮದುವೆ ಮಾಡಿಸಬೇಕು. ಮುಂದೆ ದಿನ ಕಳೆದಂತೆ ಎಲ್ಲಾ ಸರಿ ಹೋಗುತ್ತದೆ ಎಂದು ನಿರ್ಧರಿಸಿಯೇ ಆಕೆಗೆ ಫೋನ್ ಮಾಡಿದ್ದರು.

ಅದನ್ನೆಲ್ಲಾ ಅಶೋಕನಿಗೆ ಹೇಳಿದರೆ, ಆತ ಅದಕ್ಯಾಕೆ ಅಷ್ಟೊಂದು ತಲೆ ಬಿಸಿ. ಆಯ್ತು ಬಿಡು. ನಾಡಿದ್ದು ಬುಧವಾರ ನಮ್ಮ ಆಪತ್ಭಾಂಧವ ಇದ್ದಾನಲ್ಲ. ಸಬ್ ರಿಜಿಸ್ಟ್ರಾರ್ ಅವರತ್ರ ಹೋಗಿ ರಿಜಿಸ್ಟರ್ ಆಗಿಬಿಡೋಣ. ಅದಕ್ಕೇನೂ ಏರ್ಪಾಡು ಬೇಕೋ ಅದನ್ನೆಲ್ಲಾ ರಮೇಶ ನಾನೂ ಮಾಡ್ತೀವಿ. ನೀನೇನೂ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದ.

ಅದೇ ಖುಷಿಯಲ್ಲೇ ಆಕೆ, ಈಗ ಬ್ರಿಗೇಡ್ ರೋಡ್ ರೋಮಿಂಗಿಗೆ ಅವನ ಜತೆ ಹೆಜ್ಜೆ ಹಾಕ್ತಾ ಇದ್ದಳು. ಕಣ್ಣ ತುಂಬ ಮದುವೆಯ ಕನಸು, ಅದೂ ಸಂಬಂಧದ ಹೊಸತನವಲ್ಲದಿದ್ರೂ ಬದುಕಿನ ಘಟ್ಟದ ನಿರೀಕ್ಷೆ ಅವಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ದಿತ್ತು.

ಒಂದು ದೀರ್ಘ ಓಡಾಟದ ಬಳಿಕ ಇಬ್ಬರೂ ರಾತ್ರಿ ಎಂಟರ ಹೊತ್ತಿಗೆ ಭೀಮಾಸ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಎಂಜಿ ರಸ್ತೆಯಲ್ಲಿ ಆಟೋ ಹಿಡಿಯಲು ಹೊರಟರು. ಎಂಟು ಗಂಟೆಯ ಟ್ರಾಫಿಕ್ ಬುಸಿಯಲ್ಲಿ ರಸ್ತೆಯ ಆಚೆ ಬದಿಗೆ ದಾಟುವುದೇ ಕಷ್ಟವಾಗಿತ್ತು. ಬರ್ರನೆ ಎರಗುವ ಬಸ್ಸು-ಕಾರುಗಳ ನಡುವೆ ಒಂದಿಷ್ಟು ಜಾಗ ಸಿಕ್ಕಿದ್ದೇ ತಡ ಅಶೋಕ, ರಶ್ಮಿಯ ಕೈ ಹಿಡಿದು ಎಳೆದುಕೊಂಡ ನುಗ್ಗಿದ. ಕ್ಷಣ ಉರುಳುವ ಮೊದಲೇ ಯರ್ರಾಬಿರ್ರಿ ಸ್ಪೀಡಲ್ಲಿ ಬಂದ ಸ್ಕಾರ್ಫಿಯೋ ದಡ್ ಎಂದು ಬಡಿಯಿತು. ಅಶೋಕ ಹಾರಿಬಿದ್ದ. ರಶ್ಮಿ ಸರಕ್ಕನೆ ಹಿಂದಕ್ಕೆ ಜರಿದರೂ ಹಿಂದಿನಿಂದ ಬಂದ ಆಟೋ ತಾಗಿ ಕುಸಿದಳು. ಅಶೋಕನ ತಲೆಗೆ ಬಡಿದ ರೋಡ್ ಡಿವೈಡರ್ ರಕ್ತದ ಮಡುವಲ್ಲಿ ಒದ್ದೆಯಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ಇತ್ತು. ಉಸಿರು ನಿಂತಿತ್ತು.

****

ಆಸ್ಪತ್ರೆಯ ಬೆಡ್ ಮೇಲೆ ರಶ್ಮಿ ಮಲಗಿದ್ದಳು. ಪ್ರಜ್ಞೆಯ ಯಾವುದೋ ಆಳದಲ್ಲಿ ಆಕೆ, ಅಶೋಕ ಜತೆ-ಜತೆಯಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಅಶೋಕ ‘ಅಂತೂ ತಗಡು ಕಥೆ ಬರೆಯಲೇ ಇಲ್ಲ ನೋಡು ನಾನು. ಹ್ಞಾಂ, ಏನಂದ್ಕೊಂಡಿದಿಯಾ ನನ್ನನ್ನ’  ಎಂದು ಛೇಡಿಸುತ್ತಿದ್ದ.

****