ಮೂರು ವರ್ಷದ ಹಿಂದೆ, ಅವತ್ತು ಶಿವಮೊಗ್ಗದಿಂದ ಬೈಕ್ ಏರಿದಾಗ ಬೆಳಿಗ್ಗೆ ಏಳರ ಆಸು-ಪಾಸು. ಚುಮು-ಚುಮು ಚಳಿಯ ಗಾಳಿಯನ್ನು ಸೀಳಿಕೊಂಡು ಎರಡು ಬೈಕಲ್ಲಿ ನಾವು ನಾಲ್ವರು ನುಗ್ಗಿದ್ದು ಸಾಗರದ ಕಡೆ. ಉಳ್ಳೂರು ಬಳಿ ಎಡಕ್ಕೆ ಹೊರಳಿ ನೇರ ಹೆಗ್ಗೋಡಿಗೆ ಹೋದರೆ ಅಲ್ಲಿನ ‘ಆಹಾರ್ಯ’ದಲ್ಲಿ ಟೀ ಕುಡಿಯದೇ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಎನಿಸತೊಡಗಿತು. ಸರಿ ಎಂದುಕೊಂಡು ಮೊದಲು ನೀನಾಸಂ ಕಚೇರಿಗೆ ಹೊಕ್ಕರೆ ಅಕ್ಷರ ಅಲ್ಲೇ ಇದ್ದರು. ಜೊತೆಗೆ ಶ್ರೀಪಾದ್ ಕೂಡ ಇಬ್ಬರೊಂದಿಗೆ ಮಾತನಾಡುತ್ತಾ ಟೀ ಕುಡಿದು, ಅಕ್ಷರ ಅವರ ಎಲೆಯಡಿಕೆ ಚಂಚಿಯ ಕವಳ ಹಾಕಿ, ಆಗಷ್ಟೇ ಪುರುಜ್ಜೀವನ ಕಾಮಗಾರಿ ನಡೆಯುತ್ತಿದ್ದ ಶಿವರಾಮಕಾರಂತ ರಂಗಮಂದಿರ ಸುತ್ತಾಡಿಕೊಂಡು ಲಾಂಚ್ ತಪ್ಪಿ ಹೋದೀತೆಂದು ಹೊಳೆಬಾಗಿಲಿನತ್ತ ಹೆಜ್ಜೆ ಹಾಕಿದೆವು.
ಹೊಳೆಬಾಗಿಲಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರು. ಹಸಿವು. ಏನೋ ಒಂದಿಷ್ಟು ತಿಂಡಿ ತಿಂದು ಆಚೆ ದಡಕ್ಕೆ ಹೋದಕೂಡಲೇ ತುಮರಿಯಲ್ಲಿ ಊಟ ಮಾಡಿದರಾಯಿತು ಎಂದು ಲಾಂಚ್ ಕಾಯುತ್ತಾ ಎದುರಿಗೆ ರಾಶಿ ಬಿದ್ದಿದ ನೀಲ ನೀರಿನತ್ತ ಮುಖಮಾಡಿ ಹರಟೆಗೆ ತೊಡಗಿದೆವು. ದಾವಣಗೆರೆಯ ಶಫಿ, ಕಿತ್ತೂರಿನ ಸಚ್ಚಿ ಪಾಲಿಗೆ ಅಲ್ಲಿನ ಕಾಡು- ನೀರು- ಲಾಂಚ್ ಎಲ್ಲವೂ ಹೊಸತು. ನಾರಾಯಣಗೆ ಮಾತ್ರ ಬೆಂಗಳೂರಿಗರಾದರೂ ತುಮರಿ ಸಂಪರ್ಕ ಆ ಪರಿಸರವನ್ನು ಹಳತು ಮಾಡಿತ್ತು. ಒಂದು ತಾಸಿನ ಬಳಿಕ ಲಾಂಚ್ ಬಂತು. ತುಮರಿಗೆ ಹೋಗಿ ತಲುಪುವ ಹೊತ್ತಿಗೆ ಐದೂವರೆಯಷ್ಟಾಗಿತ್ತು. ಅಲ್ಲಿ ನೋಡಿದರೆ ಇರುವುದೇ ಮೂರು ಕ್ಯಾಂಟೀನ್. ಮೂರು ಗಂಟೆ ನಂತರ ಊಟವಿಲ್ಲ, ಏನಿದ್ದರೂ ಬರಿ ಬೋಂಡ, ಟೀ ಎಂಬ ಉತ್ತರ ಸಿಕ್ಕಾಗ ಅಲ್ಲಿನ ಪರಿಚಯಸ್ತರ ನೆರವು ಅಂತೂ ನಮಗಾಗಿಯೇ ಅಡುಗೆ ಮಾಡಿ ಬಡಿಸುವ ಮಟ್ಟಿಗೆ ಕ್ಯಾಂಟೀನ್ ಮಾಲೀಕರ ಮನವೊಲಿಸಿತು.
ಊಟ ಮಾಡಿ ಹೊರಡುವ ಹೊತ್ತಿಗೆ ತುಮರಿಯಲ್ಲೇ ಸಂಜೆಗತ್ತಲು ಆವರಿಸತೊಡಗಿತ್ತು. ಆದರೆ, ನಮ್ಮ ಗಮ್ಯ ಅಲ್ಲಿಂದ ಇನ್ನೂ 70 ಕಿ.ಮೀ. ದೂರದಲ್ಲಿತ್ತು. ಮತ್ತೆ ಬೈಕುಗಳ ಕಿವಿ ಹಿಂಡತೊಡಗಿದೆವು. ಅಲ್ಲಿನ ಕಡಿದಾದ, ಕಿರುದಾರಿಯಲ್ಲಿ ಬೆಟ್ಟ-ಗುಡ್ಡಗಳ ಬಳಸುತ್ತಾ ಅಂಕು-ಡೊಂಕಿನ ದಾರಿ ಸವೆಸುವಾಗ ಕತ್ತಲೆಯ ಕಾಡುಪ್ರಾಣಿಗಳ ಭೀತಿಯ ನಡುವೆಯೂ ಒಂದು ಮಜಾ ಇತ್ತು. ಎಷ್ಟು ಹೋದರೂ ದಾರಿ ಸಾಗುತ್ತಲೇ ಇತ್ತು. ನಮ್ಮ ಗುರಿ ಮಾತ್ರ ಇನ್ನೂ ಸುಳಿವು ಕೂಡ ಸಿಗದಷ್ಟು ದೂರದಲ್ಲಿತ್ತು!
ಕೋಗಾರ್ ರಸ್ತೆ ತಲುಪುವ ಹೊತ್ತಿಗೆ ರಾತ್ರಿ ಎಂಟು! ಎಂದೂ ಓಡಾಡಿ ಅನುಭವವಿರದ, ಜನರ ಪರಿಚಯವೂ ಇರದ ದಾರಿಯಲ್ಲಿ ಎರಡು ಬೈಕಿನಲ್ಲಿ ನಾವು ನಾಲ್ವರು ಆಗಂತುಕರಂತೆ ಸಾಗುತ್ತಿದ್ದೆವು! ಕಾಡುಕೋಣ, ಹುಲಿ, ಕರಡಿ, ಚಿರತೆ, ಕಾಳಿಂಗಸರ್ಪ ಮುಂತಾದ ಅಪಾಯಕಾರಿ ಜೀವಿಗಳ ಸ್ವೇಚ್ಛೆಯ ಬೀಡಿನಲ್ಲಿ ನಾವು ನಿರಾಯುಧರಾಗಿ ಸಾಗುತ್ತಿದ್ದೆವು. ನಮ್ಮ ಬಳಿ ಇದ್ದ ಅಸ್ತ್ರಗಳೆಂದರೆ ನಮ್ಮ ಬೈಕುಗಳು ಮಾತ್ರ!
ಅಂತೂ ರಾತ್ರಿ ಹತ್ತಕ್ಕೆ ಮುಪ್ಪಾನೆ ಎಂಬ ಬೋರ್ಡು ನಮ್ಮ ಬಲಬದಿ ರಸ್ತೆಯಂಚಿಗೆ ನಿಂತದ್ದು ಕಣ್ಣಿಗೆ ಬೀಳುತ್ತಲೇ ಬಾಣದ ಗುರುತಿನ ಸೂಚನೆಗೆ ಸೈ ಎಂದು ಮಣ್ಣಿನ ರಸ್ತೆಯತ್ತ ಬೈಕ್ ತಿರುಗಿಸಿದೆವು. ಅಲ್ಲಿಯವರೆಗೆ ಗುರಿ ತಲುಪುವು ಧಾವಂತದಲ್ಲಿದ್ದವರಿಗೆ ಈಗ ಮತ್ತೊಂದು ಆತಂಕ ಶುರುವಾಯಿತು. ನಾವು ಫಾರೆಸ್ಟ್ ಆಫೀಸರಿಗೆ ಹೇಳಿದ್ದು, ಅವರು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ತಿಳಿಸುತ್ತೇನೆ ನೀವು ಹೋಗಿ ಯಾವ ಸಮಸ್ಯೆ ಇಲ್ಲ ಎಂದಿದ್ದೇನೋ ಸರಿ. ಆದರೆ, ಅವರು ಇಲ್ಲಿಗೆ ದೂರುವಾಣಿ ಸೌಲಭ್ಯವಿಲ್ಲ ಎಂದಿರುವಾಗ ಆತನಿಗೆ ವಿಷಯ ಹೇಗೆ ತಲುಪಿಸುತ್ತಾರೆ? ಒಂದು ವೇಳೆ ಆತ ಇಲ್ಲಿ ಇಲ್ಲದೇ ಇದ್ದರೆ ಏನು ಮಾಡುವುದು? ಯಾರನ್ನಾದರೂ ಕೇಳೋಣವೆಂದರೆ ಅಲ್ಲಿಂದ ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ….!!
ಏನಾದರಾಗಲಿ ಎಂದು ನಿಸರ್ಗಧಾಮದ ಗೇಟ್ ದಾಡುತ್ತಲೇ ನಾಲ್ಕಾರು ಬಾರಿ ಹಾರನ್ ಮಾಡಿದೆವು. ಹತ್ತು- ಹದಿನೈದು ನಿಮಿಷ ಕಳೆದ ಬಳಿಕ ದೂರದಿಂದ ಯಾರೋ ಟಾರ್ಚ್ ಹಾಕಿಕೊಂಡು ಬರುತ್ತಿರುವುದು ಕಂಡಿತು. ಅಷ್ಟರಲ್ಲೇ’ ಹೋಯ್..’ ಎಂಬ ಮಲೆನಾಡಿನ ವಿಶಿಷ್ಟ ಕೂಗು ಕೇಳಿತು. ನನಗೆ ಧೈರ್ಯ ಬಂತು. ಹೋಯ್ ಎಂದು ಮಾರುತ್ತರ ನೀಡಿದೆ. ಆ ಕಡೆಯಿಂದ “ಶಿವಮೊಗ್ಗದವರ..” ಎಂದರು. “ಹೌದು ಮಾರಾಯ್ರೆ… ನೀವು ಫಾರೆಸ್ಟ್ ಡಿಪಾರ್ಟ್ಮೆಂಟ್ನವರಾ..” ಎಂದೆ. ಮಾತಾಡುತ್ತಲೇ ಸಮೀಪಿಸಿದ ಆತ “ಹೌದು ನಾನೇ ಇಲ್ಲಿನ ಉಸ್ತುವಾರಿ ನೋಡಿಕೊಳ್ಳೋದು.. ಆರು ಗಂಟೆಗೆ ಬರುತ್ತಾರೆ ಎಂದಿದ್ರು ಸಾಹೇಬರು. ಏಕೆ ಇಷ್ಟೊಂದು ತಡ” ಎಂದಿತು ಅಸಾಮಿ. ಏನಿಲ್ಲ, ಲಾಂಚ್ ಮಿಸ್ ಆಗಿ ಲೇಟಾಯ್ತು ಎಂದು ಅವರ ಹಿಂದೆ ಸಾಗಲಾರಂಭಿಸಿದೆವು. ಸುಮಾರು ಎರಡು ಕಿ.ಮೀ. ಸಾಗಿದ ಬಳಿಕ ಅಂತೂ ಅಲ್ಲೊಂದು ಬೀದಿ ದೀಪ ಉರಿಯುತ್ತಿದ್ದದ್ದು ಕಂಡಿತು!
ಊಟ ಮಾಡುವುದು? ಅಲ್ಲಿವರೆಗೆ ದಾರಿಯ ಹೆದರಿಕೆ, ಜಾಗಕ್ಕೆ ತಲುಪುತ್ತೀವೋ ಇಲ್ಲವೋ ಎಂಬ ಭಯ, ಅಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ಎಂಬ ಭೀತಿಗಳ ನಡುವೆ ಮರೆತೇಹೋಗಿದ್ದ ಹಸಿವು ಮತ್ತೆ ಊಟದ ನೆನಪಾಗಿಸಿತು. ಕೇಳಿದರೆ, ಇಲ್ಲೇನು ಸಿಗುವುದಿಲ್ಲ, 15 ಮಿ.ಮೀ. ಹೋದರೆ ಕಾರ್ಗಲ್ ಸಿಗುತ್ತೆ ಅಲ್ಲಿಂದ ಏನಾದರೂ ಪಾರ್ಸಲ್ ತರಬೇಕು! ಅದು ಅಷ್ಟೊತ್ತಲ್ಲಿ? ಬಾರ್-ರೆಸ್ಟೋರೆಂಟ್ ಒಂದಿದೆ ಅಲ್ಲಿ ಮಾತ್ರ 12ಗಂಟೆವರೆಗೆ ಏನಾದರೂ ಸಿಕ್ಕುತ್ತೆ ಎಂದರು! ಸರಿ ಎಂದು ಒಬ್ಬರು ಬೈಕ್ನಲ್ಲಿ ಆತನನ್ನು ಕರೆದುಕೊಂಡು ಕಾರ್ಗಲ್ಗೆ ಹೋಗಿ ಊಟ ತರುವುದು, ಉಳಿದವರು ಅಲ್ಲೇ ಎದುರಿನ ಹಿನ್ನೀರಿನಂಚಿನಲ್ಲಿ ಬೆಂಕಿಹಾಕಿ ನೀರು ಕಾಯಿಸಿಕೊಂಡು ಸ್ನಾನ ಮುಗಿಸುವುದು ಎಂದು ಪ್ರಯಾಣದ ಆಯಾಸದ ನಡುವೆಯೂ ಚಕಚಕ ಸಿದ್ಧರಾದೆವು.
ಕಾರ್ಗಲ್ನಿಂದ ಊಟ ಬರುವ ಹೊತ್ತಿಗೆ ಸ್ನಾನ ಮುಗಿಸಿದ್ದ ನಾವು ನೀರಲ್ಲಿ ಕಾಲು ಬಿಟ್ಟುಕೊಂಡು ಬಂಡೆ ಮೇಲೆ ಕೂತು ಅಮಾವಾಸ್ಯೆಯ ರಾತ್ರಿ ನಕ್ಷತ್ರ ಎಣಿಸುತ್ತಿದ್ದೆವು. ದೂರದಲ್ಲಿ ಹುಲಿ ಗರ್ಜನೆ ಮೊಳಗಿದ್ದನ್ನು ನಾನಷ್ಟೇ ಗುರುತಿಸಲು ಸಾಧ್ಯವಾಯಿತು. ಉಳಿದಿಬ್ಬರು ಬಯಲುಸೀಮೆಯವರಾದ್ದರಿಂದ ಅವರಿಗೆ ಅದು ಯಾವುದೋ ಪ್ರಾಣಿಯ ಕೂಗು ಎಂಬುದಷ್ಟೇ ಗೊತ್ತಾಗಿತ್ತು. ರಾತ್ರಿ ಊಟ ಮಾಡಿ ಮಲಗುವ ಹೊತ್ತಿಗೆ 2ಗಂಟೆ!
ಮಾರನೇ ದಿನ ಎದ್ದು ನೋಡಿದರೆ ಬಾಗಿಲು ತೆರೆಯುತ್ತಲೇ ಕಣ್ಣು ಹಾಯಿಸುವವರೆಗೆ ನೀರ ರಾಶಿ!! ರಾತ್ರಿಯ ಕತ್ತಲೆಯಲ್ಲಿ ನಾವು ಇಳಿದುಕೊಂಡಿದ್ದ ಬಿಡಾರದ ಎದುರು ನೀರಿದೆ ಎಂಬುದು ಗೊತ್ತಿತ್ತೇ ಹೊರತು ಅದರ ಆಳ- ವಿಸ್ತಾರಗಳ ಕಿಂತಿತ್ತೂ ಕಲ್ಪನೆಯೇ ಇರಲಿಲ್ಲ! ಬೆಳಿಗ್ಗೆಯ ತಿಂಡಿ ಮುಗಿಸಿಕೊಂಡು ಮತ್ತೆ ಹೊರಟದ್ದು ನೀರಿನ ತೀರದ ಗುಂಟ ಒಂದು ಲಾಂಗ್ ವಾಕ್! ಮಧ್ಯಾಹ್ನದ ಹೊತ್ತಿಗೆ ವಾಪಸ್ ಬಂದು ಮತ್ತೆ ಅಲ್ಲೇ ಇದ್ದ ಬೋಟನ್ನೇರಿ ಎದುರಿನ ದ್ವೀಪದತ್ತ ಹೊರಟರೆ ಅದರ ಅನುಭವವೇ ಬೇರೆ. ನಾವೇ ದೋಣಿಯ ಹರಿಗೋಲು ಹಾಕುತ್ತಾ ದ್ವೀಪ ಮುಟ್ಟಿ ಕಾಡುಹೊಕ್ಕರೆ ಅಬ್ಬಾ ಎಂತಹ ದಟ್ಟಣೆಯ ಕಾಡೆಂದರೆ ಕೆಲವು ಕಡೆ ನಾವು ಅಕ್ಷರಶಃ ನುಗ್ಗಿ ನಡೆಯುವುದೇ ಕಷ್ಟವಾಗುತ್ತಿತ್ತು! ದ್ವೀಪದ ಇನ್ನೊಂದು ಬದಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರೂವರೆ! ಆಚೆ ಬದಿಯ ಸಮತ್ತಟ್ಟಾದ ನೆಲದಾಳದ ನೀರಲ್ಲಿ ಒಂದು ತಾಸು ಈಜಾಡಿ ಮತ್ತೆ ದಡದಲ್ಲಿ ಸೂರ್ಯಸ್ನಾನ (!) ಮಾಡಿ ಮತ್ತೆ ದ್ವೀಪವೇರಿ ಇಳಿದು ಬೋಟನ್ನೇರಿ ವಾಪಸ್ ಬಂದಾಗ ನಮ್ಮೊಡನಿದ್ದ ಆತ ಹೇಳಿದ್ದು “ಅಲ್ಲಿ ಸಿಕ್ಕಾಪಟ್ಟೆ ಮೊಸಳೆ ಇರ್ತವೆ, ಜೊತಿಗೆ ಇದು ಹಿನ್ನೀರು ಅಲ್ವ ಸುಳಿ ಜಾಸ್ತಿ, ಎಲ್ಲಿ ಗಟ್ಟಿ ನೆಲ, ಎಲ್ಲಿ ಉಸುಕು ಎನ್ನೋದು ಗೊತ್ತಾಗಕ್ಕಿಲ್ಲ.. ನೀವು ಅಲ್ಲಿ ಈಜುವಾಗ ನನಗೆ ಎದೆ ಪುಕುಪುಕು ಅಂತಿತ್ತು… ” ಎಂದು!!
ನಮಗೆ ಅಲ್ಲಿನ ನೀರಿನ ಸುಳಿಯದ್ದಾಗಲೀ, ಮೊಸಳೆಯದ್ದಾಗಲೀ ಕಲ್ಪನೆಯೇ ಇರಲಿಲ್ಲ!! ಅಂತೂ ಮುಪ್ಪಾನೆಯ ಮರೆಯದ ಅನುಭವ ಜೀವನವಿಡೀ ಮೆಲುಕುಹಾಕುವಂತಾಗಿದ್ದು ಮಾತ್ರ ಅಂತಹ ಅಚ್ಚರಿ, ಭೀತಿಗಳಿಂದಲೇ!!